ಮಕ್ಕಳ ಹಕ್ಕುಗಳ ರಕ್ಷಣೆಗೆ ನಿಲ್ಲಬೇಕಾದ ಸರಕಾರವು ಪೂರ್ಣಾವಧಿ ಅಧ್ಯಕ್ಷರನ್ನೂ ಮುಂದುವರಿಸದ ಪರಿಣಾಮ 8 ತಿಂಗಳಿಂದ ‘ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ ಅನಾಥ ಸ್ಥಿತಿಗೆ ತಲುಪಿದೆ. ಅಧ್ಯಕ್ಷ ಸ್ಥಾನ ಕೋರಿ ಬಂದವರನ್ನೂ ಆಯ್ಕೆ ಮಾಡದ ಪರಿಣಾಮ ಎಂಟು ತಿಂಗಳಿಂದ ಖಾಲಿ ಬಿದ್ದಿದೆ.
ಅಧ್ಯಕ್ಷ ಮತ್ತು ಸದಸ್ಯರ ಸ್ಥಾನ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಭಾವಿ ರಾಜಕಾರಣಿಗಳ ಶಿಫಾರಸು ಪತ್ರಗಳ ಸಹಿತ 80ಕ್ಕೂ ಹೆಚ್ಚು ಅರ್ಜಿಗಳು ಈ ಹುದ್ದೆಗಳಿಗೆ ಸಲ್ಲಿಕೆಯಾಗಿವೆ. ಈ ಎರಡು ಹುದ್ದೆಗಳ ಅಧಿಕಾರವಧಿ ಮೂರು ವರ್ಷಗಳಾಗಿವೆ. ಹೀಗಾಗಿ, ಸರ್ಕಾರದ ಪಾಲಿಗೆ ನೇಮಕಾತಿಯು ಕಗ್ಗಂಟಾಗಿ ಪರಿಣಮಿಸಿದೆ.
ಸಾಂವಿಧಾನಿಕ ಸಂಸ್ಥೆಯಾಗಿರುವ ಈ ಆಯೋಗ, ಮಕ್ಕಳ ಹಕ್ಕುಗಳ ರಕ್ಷಣೆಯ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ, ಪೋಕ್ಸೋ ಅಡಿ ಪ್ರಕರಣಗಳು, ಬಾಲ್ಯ ವಿವಾಹ, ಶಾಲೆಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಸೇರಿದಂತೆ 1,200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇತ್ಯರ್ಥವಾಗದೇ ಉಳಿದಿವೆ.
ಪೂರ್ಣಾವಧಿ ಅಧ್ಯಕ್ಷರಾಗಿದ್ದ ‘ಆಂಟೋನಿ ಸೆಬಾಸ್ಟಿಯನ್’ ಅವರ ಅಧಿಕಾರವಧಿ 2021ರ ಡಿಸೆಂಬರ್ಗೆ ಅಂತ್ಯವಾಗಿದೆ. ಆ ನಂತರ ಹಂಗಾಮಿ ಅಧ್ಯಕ್ಷರಾಗಿ ‘ಜಯಶ್ರೀ’ ಎಂಬುವರು ಮುಂದುವರಿದಿದ್ದು, ಕಳೆದ ತಿಂಗಳು ಸದಸ್ಯರ ಅಧಿಕಾರವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸದ್ಯ ಅಧ್ಯಕ್ಷ ಮತ್ತು ಸದಸ್ಯರ ಸ್ಥಾನ ಖಾಲಿ ಉಳಿದಿವೆ.
ಹೊಸ ಅಧ್ಯಕ್ಷರ ನೇಮಕಕ್ಕೆ ಫೆ. 1ರಂದು ಅರ್ಜಿ ಆಹ್ವಾನಿಸಿ, 30 ದಿನಗಳ ಕಾಲಾವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಕೆ ಅವಧಿ ಮುಗಿದು ಆರು ತಿಂಗಳು ಕಳೆದಿದೆ. ಹುದ್ದೆಗಾಗಿ ತೀವ್ರ ಪೈಪೋಟಿ, ಒತ್ತಡ, ವಶೀಲಿಬಾಜಿ ನಡೆಯುತ್ತಿದೆ.