ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ರಚನೆ ಪ್ರಯತ್ನಗಳು ಅಂತಿಮ ಹಂತಕ್ಕೆ ಬಂದಿದ್ದು ಇಂದು ರಾತ್ರಿ ಬಹುತೇಕ ಸಚಿವರ ಮೊದಲ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.
ಸಚಿವ ಸಂಪುಟ ರಚನೆಯ ಒಂದಂಶದ ಅಜೆಂಡಾದ ಮೇಲೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ವರಿಷ್ಠರನ್ನು ಒಬ್ಬೊಬ್ಬರಾಗಿ ಭೇಟಿ ಮಾಡಿ ತಮ್ಮ ಪಟ್ಟಿಗೆ ಅನುಮೋದನೆ ಪಡೆಯುತ್ತಿದ್ದು, ಅಂತಿಮವಾಗಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನಿ ಮಂಗಳವಾರ ಭೇಟಿ ಮಾಡಿದ್ದಾರೆ.
ಈ ಭೇಟಿಯ ವೇಳೆ ಸಚಿವ ಸಂಪುಟಕ್ಕೆ ಸೇರಲಿರುವ ಶಾಸಕರ ಪಟ್ಟಿಯ ಕುರಿತು ಬೊಮ್ಮಾಯಿ ಅಂತಿಮ ಹಂತದ ಚರ್ಚೆ ನಡೆಸಿದರು ಎನ್ನಲಾಗಿದೆ.
ಈ ನಡುವೆ ಈಗಾಗಲೇ ಸಾಕಷ್ಟು ಮಂದಿ ಸಂಪುಟ ಆಕಾಂಕ್ಷಿಗಳು ಭಾರಿ ಲಾಬಿ ನಡೆಸುತ್ತಿದ್ದಾರೆ. ಕೆಲವರು ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದರೆ ಮತ್ತೆ ಕೆಲವರು ರಾಜ್ಯ ಮಟ್ಟದಲ್ಲಿ ತಮ್ಮೆಲ್ಲಾ ಪ್ರಭಾವ ಬಳಸಿ ಮಂತ್ರಿಗಿರಿ ಗಿಟ್ಟಿಸಲು ಇನ್ನಿಲ್ಲದ ಸಾಹಸ ನಡೆಸುತ್ತಿದ್ದಾರೆ.
ಬಿಜೆಪಿಯ ಹಳಬರು, ಹೊಸಬರು ಮತ್ತು ವಲಸಿಗರು ಎಂಬ ಮೂರು ಗುಂಪಿನ ಪೈಕಿ ಯಾರನ್ನು ಎಷ್ಟು ಪ್ರಮಾಣದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಕುರಿತು ಒಂದು ಸೂತ್ರ ರಚಿಸಿದ್ದು, ಆ ಸೂತ್ರದ ಪ್ರಕಾರ ವರಿಷ್ಠರು ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆ. ಹಾಗೇ ರಾಜ್ಯ ಬಿಜೆಪಿ ವರಿಷ್ಠರು, ಬಿ ಎಸ್ ಯಡಿಯೂರಪ್ಪ ಮತ್ತು ಆರ್ ಎಸ್ ಎಸ್ ಪ್ರಮುಖರು ಒಪ್ಪಿಗೆ ನೀಡಿದವರನ್ನೇ ಸಚಿವರನ್ನಾಗಿ ಮಾಡಲಾಗುವುದು ಎಂಬುದು ಬಿಜೆಪಿ ಮೂಲಗಳ ಮಾಹಿತಿ.
ಅಂದರೆ ಒಂದು ಕಡೆ ಮೂಲ ಹಳಬರು, ಹೊಸಬರು ಮತ್ತು ವಲಸಿಗರ ಗುಂಪುಗಳ ಪ್ರಕಾರ ಶಾಸಕರ ಆಯ್ಕೆಯ ಬಳಿಕ ಆ ಮೂರು ಗುಂಪಿನವರಿಗೆ ಮೂರು ವಲಯಗಳಿಂದ- ಬಿಜೆಪಿ, ಸಂಘ ಮತ್ತು ಬಿಎಸ್ ವೈ- ಒಪ್ಪಿಗೆ ಪಡೆಯುವ ಪ್ರಕ್ರಿಯೆ. ಆ ಪ್ರಕ್ರಿಯೆಯ ಭಾಗವಾಗಿಯೇ ಇದೀಗ ಸಿಎಂ ದೆಹಲಿ ಯಾತ್ರೆ ಆರಂಭಿಸಿದ್ದಾರೆ. ಅದು ಬಹುತೇಕ ಅಂತಿಮ ಹಂತಕ್ಕೂ ತಲುಪಿದೆ.

ಮೂಲಗಳ ಪ್ರಕಾರ ಸಂಪುಟ ರಚನೆ ಸಮಾಲೋಚನಾ ಪ್ರಕ್ರಿಯೆ ಬಹುತೇಕ ಮಂಗಳವಾರವೇ ಅಂತಿಮವಾಗುವ ಸಾಧ್ಯತೆ ಇದ್ದು, ಮಂಗಳವಾರ ಸಂಜೆ ವರಿಷ್ಠರ ಸಭೆಯ ಬಳಿಕ ಪಟ್ಟಿ ಅಂತಿಮವಾಗಲಿದೆ.
ಈ ನಡುವೆ, ಒಂದೇ ಹಂತದ ಸಂಪುಟ ರಚನೆಯ ಬದಲಾಗಿ, ಎರಡು ಹಂತದಲ್ಲಿ ನಡೆಸುವುದು ಸಿಎಂ ತಂತ್ರ. ಆ ಮೂಲಕ ಭುಗಿಲೇಳಬಹುದಾದ ಅಸಮಾಧಾನವನ್ನು ಹಂತಹಂತವಾಗಿ ಶಮನ ಮಾಡುವ ಯೋಚನೆ ಅವರದು.
ಮೊದಲ ಹಂತದಲ್ಲಿ 24 ಮಂದಿಗೆ ಅವಕಾಶ ಕೊಡುವ ಸಾಧ್ಯತೆ ಇದ್ದು, ಉಳಿದವರನ್ನು ಎರಡನೇ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆ ಮಾಡುವ ಸಾಧ್ಯತೆ ಇದೆ. ಈ ಮೂಲಕ ಒಮ್ಮೆಗೇ ಸಂಪುಟ ರಚನೆ ಪೂರ್ಣಗೊಳಿಸಿದರೆ ಭುಗಿಲೇಳಬಹುದಾದ ಭಾರಿ ಭಿನ್ನಮತ ಶಮನ ಮಾಡುವುದು ಸಿಎಂ ಬೊಮ್ಮಾಯಿ ಅವರ ತಂತ್ರಗಾರಿಕೆ ಎನ್ನಲಾಗಿದೆ.
ಆದರೆ, ಬೊಮ್ಮಾಯಿ ಅವರ ಈ ತಂತ್ರಗಾರಿಕೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. ಇಂದು ಸಂಜೆ ಸಚಿವ ಸಂಪುಟ ರಚನೆಯ ಕುರಿತ ಸಿಎಂ ಅವರು ವರಿಷ್ಠರೊಂದಿಗೆ ನಡೆಸುವ ಮಾತುಕತೆಗಳು ಮುಗಿದಿದ್ದು ಸಚಿವ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಾಳೆ ಸಂಜೆ ಐದು ಗಂಟೆಗೆ ಸಚಿವವರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ, ರಾತ್ರಿ ಅಥವಾ ಬುಧವಾರ ಬೆಳಗ್ಗೆ ಸಂಪುಟದ ಗಾತ್ರ ಮತ್ತು ಸೇರ್ಪಡೆಯಾಗಲಿರುವ ಸಚಿವರ ಹೆಸರುಗಳು ಹೊರಬೀಳಲಿವೆ.