ಚುನಾವಣೆ ಬರುತ್ತಿದ್ದಂತೆ ಅಲ್ಪಸಂಖ್ಯಾತರ ಮೇಲೆ ಅದರಲ್ಲೂ ಮುಸ್ಲಿಮರ ಮೇಲೆ ರಾಜ್ಯದ ಮೂರು ಪ್ರಮುಖ ಪಕ್ಷಗಳಿಗೆ ಪ್ರೀತಿ ಉಕ್ಕಿ ಬರುತ್ತಿದೆ. ಅಲ್ಪಸಂಖ್ಯಾತರ ರಕ್ಷಕರಂತೆ ಮೂರು ಪಕ್ಷಗಳ ಪ್ರಮುಖರು ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಹಾಗೂ, ತಮ್ಮ ಪ್ರತಿಪಕ್ಷಗಳು ಅಲ್ಪಸಂಖ್ಯಾತರ ಮೇಲೆ ನಾಟಕೀಯ ಪ್ರೀತಿ ತೋರಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಸಿಂದಗಿ ಮತ್ತು ಹಾನಗಲ್ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಹಾಗೂ, ಇದುವರೆಗೆ ಕಾಂಗ್ರೆಸ್ ಮತಬ್ಯಾಂಕ್ ಆಗಿರುವ ಅಲ್ಪಸಂಖ್ಯಾತ ಮತಗಳನ್ನು ತನ್ನೆಡೆಗೆ ಸೆಳೆಯಲು ಸರ್ಕಸ್ ಮಾಡುತ್ತಿದೆ.
ಹೆಚ್ ಡಿ ಕುಮಾರಸ್ವಾಮಿ ಅವರಂತೂ ಕಾಂಗ್ರೆಸ್ ಪ್ರಬಲ ನಾಯಕ ಸಿದ್ದರಾಮಯ್ಯ ಅವರನ್ನು ಮುಸ್ಲಿಂ ನಾಯಕರ ʼಟರ್ಮಿನೇಟರ್ʼ ಎಂದು ಕರೆದು ತೀಕ್ಷ್ಣ ವಾಗ್ದಾಳಿಯನ್ನು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾಡಿದ್ದರು. ಅಲ್ಲದೆ, ಆರ್ಎಸ್ಎಸ್ ವಿರುದ್ಧ ಸತತ ಟೀಕೆಯನ್ನು ಮಾಡುತ್ತಾ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಮತಗಳನ್ನು ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡಾ ಅಲ್ಪಸಂಖ್ಯಾತ ಮತಗಳನ್ನು ತನ್ನಲ್ಲೇ ಉಳಿಸಿಕೊಳ್ಳಲು ಶತಾಯಗತಾಯ ಯತ್ನಿಸುತ್ತಿದೆ. ಜೆಡಿಎಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಜೆಡಿಎಸ್ ಪ್ರಭಾವ ಹೆಚ್ಚಾಗಿರುವ ಮಂಡ್ಯ, ರಾಮನಗರ ಭಾಗದಲ್ಲೇ ಮುಸ್ಲಿಮರಿಗೆ ಟಿಕೆಟ್ ಕೊಟ್ಟು ಕಣಕ್ಕೆ ಇಳಿಸಲಿ ಎಂದು ಸವಾಲು ಹೂಡಿದೆ.
ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತ ಪ್ರಭಾವಿ ನಾಯಕ ಝಮೀರ್ ಅಹ್ಮದ್ ಅವರನ್ನೇ ಜೆಡಿಎಸ್ ವಿರುದ್ಧ ಛೂಬಿಟ್ಟಿದ್ದು, ಮಾಜಿ ಜೆಡಿಎಸ್ ನಾಯಕನೂ ಆಗಿರುವ ಝಮೀರ್, ಜೆಡಿಎಸ್ ವಿರುದ್ಧ ತನ್ನ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಸರಣಿ ಟೀಕಾಸ್ತ್ರ ಹೂಡುತ್ತಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ನೇರವಾಗಿಯೇ ವಾಗ್ದಾಳಿಗೆ ಇಳಿದಿರುವ ಝಮೀರ್, ಜೆಡಿಎಸ್ ಪಕ್ಷದ ಹಾಗೂ ಹೆಚ್ಡಿಕೆ ಅವರ ಮುಸ್ಲಿಮರ ಮೇಲಿನ ಕಾಳಜಿಯನ್ನು ಪ್ರಶ್ನಿಸುತ್ತಿದ್ದಾರೆ.
ಇನ್ನೊಂದೆಡೆ ಜೆಡಿಎಸ್, ಮುಸ್ಲಿಮರ ಮತಗಳನ್ನು ಸೆಳೆಯಲು ಅಲ್ಪಸಂಖ್ಯಾತರ ಕಾರ್ಯಗಾರವನ್ನೂ ನಡೆಸಿದ್ದು, ಸ್ಥಳೀಯ ಮುಸ್ಲಿಂ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕಡೆಗೆ ಗಮನ ಕೇಂದ್ರೀಕರಿಸಿದೆ. ಕಾಂಗ್ರೆಸ್ ಎಂಎಲ್ಸಿ ಸಿಎಂ ಇಬ್ರಾಹಿಂ ಅವರು ಇನ್ನೇನು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ.
ಅದಕ್ಕೆ ಪೂರಕವಾಗಿ, ಇಬ್ರಾಹಿಂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಾಂಗ್ರೆಸ್ ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ಸ್ವಪಕ್ಷದ ಮೇಲೆ ಬಹಿರಂಗವಾಗಿಯೇ ಟೀಕಾಸ್ತ್ರ ಹೂಡುತ್ತಿರುವ ಸಿಎಂ ಇಬ್ರಾಹಿಂ ಹಿಂದೆ ಜೆಡಿಎಸ್ ಹಿತಾಸಕ್ತಿ ಕೆಲಸ ಮಾಡುತ್ತಿದೆ ಎನ್ನುವುದು ಸತ್ಯ. ಹಾಗಾಗಿಯೇ, ಇತ್ತೀಚೆಗೆ ಕುಮಾರಸ್ವಾಮಿ ಇಬ್ರಾಹಿಂ ಅವರನ್ನು ಅವರ ನಿವಾಸದಲ್ಲಿಯೇ ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದರು.
ಇದೀಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಕಾಂಗ್ರೆಸ್ ವಿರುದ್ಧ ಅಖಾಡಕ್ಕೆ ಇಳಿದಿದ್ದು, ಚುನಾವಣೆ ಬಂದಾಗ ಅಲ್ಪಸಂಖ್ಯಾತರ ಮೇಲೆ ಕಾಂಗ್ರೆಸ್ ಅತಿ ಪ್ರೀತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಚುನಾವಣೆ ಬಂದಾಗ ಮಾತ್ರ ನಿಮ್ಮ ರಕ್ಷಣೆ ಮಾಡುತ್ತದೆ ಎಂದು ನಂಬಿಸುತ್ತದೆ. ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಮಾಡಿದ ಯಾವುದಾದರೂ ಪಕ್ಷವಿದ್ದರೆ ಅದು ಕಾಂಗ್ರೆಸ್ ಎಂದು ಬೊಮ್ಮಾಯಿ ಹೇಳಿದ್ದಾರೆ.

ಕಾಂಗ್ರೆಸ್ನ ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ಒಡೆಯುವಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಿರತವಾಗಿದ್ದು, ತಮಗೂ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆ ಎಂದು ಘೋಷಿಸಿಕೊಳ್ಳುತ್ತಾ ಇದೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡಾ ಇದೇ ಅರ್ಥದಲ್ಲಿ ಮಾತನಾಡಿದ್ದರು. ನನ್ನಿಂದ ಅಥವಾ ಬಿಜೆಪಿಯಿಂದ ಅಲ್ಪಸಂಖ್ಯಾತರಿಗೆ ಒಂದು ಅನ್ಯಾಯ ಆಗಿದ್ದರೆ ಒಂದೇ ಒಂದು ಉದಾಹರಣೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ವಿಜಯಪುರದಲ್ಲಿ ಚುನಾವಣಾ ಪ್ರಚಾರಾರ್ಥಕವಾಗಿ ಮಾತನಾಡಿದ ಬಿಎಸ್ವೈ, ಮುಸ್ಲಿಮರಿಗೆ ನಾನು ಯಾವತ್ತೂ ಬೇಧಭಾವ ಮಾಡಿಲ್ಲ. ಮುಸ್ಲಿಂ ಬಾಂಧವರಿಗೆ ತಪ್ಪಿಸಿ, ಹಿಂದುಗಳಿಗೆ ಏನೂ ಹೆಚ್ಚು ಕೊಟ್ಟಿಲ್ಲ. ನೀವ್ಯಾಕೋ ನನ್ನಿಂದ ದೂರ ಹೋಗ್ತಿರೋ ಹಾಗೆ ಕಾಣುತ್ತಿದೆ. ನನ್ನ ಮೇಲೆ ನಂಬಿಕೆಯಿಡಿ, ನಮಗೆ ಬೆಂಬಲಿಸಿ ಎಂದು ಮುಸ್ಲಿಮರನ್ನು ಉದ್ದೇಶಿಸಿ ಮನವಿ ಮಾಡಿದ್ದಾರೆ.
ಇತ್ತೀಚಿನ ಘಟನೆಗಳನ್ನೇ ಗಮನಿಸುವುದಾದರೆ, ರಾಜ್ಯದಲ್ಲಿ ಕೋಮು ಭಾವನೆಗಳನ್ನು ಉದ್ದೀಪನಗೊಳಿಸಲಾಗುತ್ತಿದೆ. ಹಿಂದೂ ಪರ ಸಂಘಟನೆಗಳು ಮತಾಂತರ, ಹಿಂದು ಮಹಿಳೆಯರ ರಕ್ಷಣೆಯೆಂದು ಬಹಿರಂಗವಾಗಿ ಆಯುಧ ದೀಕ್ಷೆಗಳನ್ನು ನಡೆಸುತ್ತಾ ಬಂದಿದ್ದೇವೆ. ಬಹಿರಂಗವಾಗಿಯೇ ಮಾರಣ ಹೋಮದ ಬೆದರಿಕೆಗಳನ್ನು ಹಾಕಲಾಗುತ್ತಿದೆ. ಆದರೆ, ಸಿಎಂ ಬೊಮ್ಮಾಯಿ ಇವುಗಳನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂಬುದಾಗಿ ಸಹಜವೆಂಬಂತೆ ಬಿಂಬಿಸುತ್ತಿದ್ದಾರೆ. ಆದರೆ, ಹಿಂದೂ ಪರ ಬಲಪಂಥೀಯ ಸಂಗಟನೆಗಳು ಹುಟ್ಟುಹಾಕುತ್ತಿರುವ ಧ್ವೇಷದ ವಾತಾವರಣ ಅಲ್ಪಸಂಖ್ಯಾತರ ಆತಂಕಕ್ಕೆ ಕಾರಣವಾಗಿದೆ. ಅದಾಗ್ಯೂ ಬಿಎಸ್ ಯಡಿಯೂರಪ್ಪ ಬಿಜೆಪಿಯಿಂದ ಮುಸ್ಲಿಮರಿಗಾದ ಅನ್ಯಾಯವನ್ನು ಉದಾಹರಿಸಿ ಎಂದು ಕೇಳುತ್ತಿರುವುದು ಹಾಸ್ಯಾಸ್ಪದವಲ್ಲದೆ ಮತ್ತೇನೂ ಅಲ್ಲ.
ಒಂದೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಸ್ಲಿಮರ ಮತಕ್ಕೆ ನಿರ್ಲಜ್ಜವಾಗಿ ಬಲೆ ಬೀಸಿ, ತಮಗೆ ಬರಬಹುದಾದ ಮತಗಳನ್ನು ಎಣಿಸುತ್ತಲೇ ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ಸ್ಥಿತಿಗತಿಗಳನ್ನು ಕಡೆಗಣಿಸುತ್ತಿದೆ. ಬಿಜೆಪಿಯಂತೂ ಬಂದಷ್ಟು ಬರಲಿ ಎಂಬಂತೆ ತಾನು ಮಾಡಿದ ಕೋಮು ಆಧಾರಿತ ರಾಜಕಾರಣವನ್ನು ಮರೆತಂತೆ ನಟಿಸಿ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದೆ. ಸಿಂದಗಿ, ಹಾನಗಲ್ ಕ್ಷೇತ್ರದ ಈ ಉಪಚುನಾವಣೆ ಮೂರು ಪಕ್ಷಗಳ ʼಮುಸ್ಲಿಂ ಪ್ರೇಮ (?) ವನ್ನುʼ ಜಾಹಿರುಗೊಳಿಸಿದ್ದಂತೂ ಸುಳ್ಳಲ್ಲ.!







