ರಾಜ್ಯದಲ್ಲಿ ಉಪಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರ್ಎಸ್ಎಸ್ ವಿರುದ್ದ ಹರಿಹಾಯುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಕಡತಗಳ ವಿಲೇವಾರಿಗಾಗಿ ಆರ್ಎಸ್ಎಸ್ ಮುಖಂಡರು ಮತ್ತು ಉದ್ಯಮಿಗಳು 300 ಕೋಟಿ ರೂಪಾಯಿ ಹಫ್ತಾ ಕೊಟ್ಟಿದ್ದರು ಎಂದು ಅಲ್ಲಿನ ಮಾಜಿ ರಾಜ್ಯಪಾಲರೇ ಹೇಳಿಕೆ ಕೊಟ್ಟಿದ್ದಾರೆ. ಇದೇನಾ ಆರ್ಎಸ್ಎಸ್ ಸಂಸ್ಕೃತಿ ಮತ್ತು ಸಿದ್ದಾಂತ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಹೆಚ್.ಡಿ.ಕೆ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ನೇಮಕವಾದ ರಾಜ್ಯಪಾಲರೇ ಹಫ್ತಾ ಬಗ್ಗೆ ಮಾತನಾಡಿದ್ದಾರೆ. ಹಿಂದುತ್ವ ಮತ್ತು ಸಂಸ್ಕೃತಿಯ ಪ್ರತೀಕ ಆರ್ಎಸ್ಎಸ್ ಎನ್ನುತ್ತೀರಿ ಇದೇನಾ ನಿಮ್ಮ ಸಂಸ್ಕೃತಿ? ಎಂದು ಕುಟುಕಿದ್ದಾರೆ.
ಈ ದೇಶದಲ್ಲಿ ಹಿಂದುತ್ವವನ್ನು ನಾಶ ಮಾಡಲು ಯಾರಿಂದಲು ಸಾಧ್ಯವಿಲ್ಲ. ಹಿಂದುತ್ವ ಅಂದರೆ ಅದು ನಮ್ಮ ದೇಶದ ಬ್ರ್ಯಾಂಡ್. ನಾನು ಆರ್ಎಸ್ಎಸ್ ಬಗ್ಗೆ ಕೆಲವು ಲೇಖಕರು ಬರೆದಿರುವ ಪುಸ್ತಕಗಳಲ್ಲಿನ ಅಂಶಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಇದು ಅಪರಾಧನಾ ಆರ್ಎಸ್ಎಸ್ ಕುರಿತು ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಸವಾಲೆಸದಿದ್ದಾರೆ.
ಎಲ್ಲರ ಮನೆ ದೋಸೆನು ತೂತು
ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಡಿಎಸ್ ಅಲ್ಲ ಜೆಡಿಎಫ್ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್.ಡಿ.ಕೆ ʻವರುಣಾ ಕ್ಷೇತ್ರದಲ್ಲಿ ರಾಜಕೀಯದ ಗಂಧ ಗಾಳಿ ಅರಿಯದ ಅವರ ಮಗ ಯತೀಂದ್ರನನ್ನು ಚುನಾವಣೆಗೆ ನಿಲ್ಲಿಸುವ ಬದಲು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಬಹುದಿತ್ತಲವೇ. ಇದು ಯಾವ ಫ್ಯಾಮಿಲಿ? ಕಾಂಗ್ರೆಸ್ನದ್ದೋ ಅಥವಾ ಸಿದ್ದರಾಮಯ್ಯರದ್ದೋʼ ಎಲ್ಲರ ಮನೆ ದೋಸೆನು ತೂತು ಎಂದು ಟೀಕಿಸಿದ್ದಾರೆ.
ಉಪಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಬಿಜೆಪಿ ಸಿಂಧಗಿ ಮತ್ತು ಹಾನಗಲ್ನ ಪ್ರತಿಯೊಂದು ಬೂತ್ಗೆ ಸಚಿವರನ್ನು ನೇಮಿಸಿದೆ. ಇದರಿಂದ ಆಡಳಿತ ಯಂತ್ರ ಸ್ಥಗಿತಗೊಂಡಿದೆ ಇವರುಗಳಿಗೆ ಜನರ ಸಮಸ್ಯೆಗಳನ್ನು ಆಲಿಸುವುದಕ್ಕಿಂತ ಚುನಾವಣೆ ಗೆಲುವುದೆ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಕೂಡ ಪ್ರತಿಯೊಂದು ಬೂತ್ಗೆ ತನ್ನ ನಾಯಕರನ್ನು ನೇಮಿಸಿದೆ ಎರಡು ಪಕ್ಷಗಳು ಪೈಪೋಟಿಗೆ ಬಿದ್ದವರಂತೆ ಪ್ರಚಾರದಲ್ಲಿ ತೊಡಗಿವೆ. ಯಾರು ಎಷ್ಟೇ ಪ್ರಚಾರ ಮಾಡಿದರು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.