ಹತ್ರಾಸ್ ಪ್ರಕರಣದ ವರದಿಗಾರಿಕೆಗೆ ತೆರಳಿದ್ದ ವೇಳೆ ಯುಪಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಸಿದ್ದೀಕ್ ಕಪ್ಪನ್ ಈ ವಾರ ಜೈಲಿನಿಂದ ಬಿಡುಗಡೆ ಹೊಂದುವ ನಿರೀಕ್ಷೆಯಲ್ಲಿದ್ದಾರೆ. ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದಲ್ಲಿ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಲಕ್ನೋ ಪೀಠವು ಜಾಮೀನು ಮಂಜೂರು ಮಾಡಿದೆಯಾದರೂ ಅವರಿನ್ನೂ ಜೈಲಿನಲ್ಲಿಯೇ ಕೊಳೆಯುತ್ತಿದ್ದಾರೆ.
2022,ಡಿ.23ರಂದೇ ಜಾಮೀನು ಆದೇಶ ಹೊರಬಿದ್ದಿದ್ದರೂ, ಅವರ ಜಾಮೀನು ಭದ್ರತೆಯನ್ನು ಈವರೆಗೆ ಪರಿಶೀಲಿಸಲಾಗಿಲ್ಲ. ಕಪ್ಪನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲಾಗಿರುವ ಇನ್ನೊಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2022ರ ಸೆಪ್ಟಂಬರ್ ನಲ್ಲಿ ಜಾಮೀನು ಮಂಜೂರು ಮಾಡಿತ್ತು.

‘ಪಿಎಂಎಲ್ಎ ಪ್ರಕರಣದಲ್ಲಿ ಜಾಮೀನು ಭದ್ರತೆಗಳನ್ನು ನಾವೀಗಾಗಲೇ ನ್ಯಾಯಾಲಯದ ಮುಂದೆ ಸಲ್ಲಿಸಿದ್ದೇವೆ, ಪರಿಶೀಲನೆಗಾಗಿ ಕಾಯುತ್ತಿದ್ದೇವೆ. ಸ್ಥಳೀಯ ಅಧಿಕಾರಿಗಳು ಅದನ್ನು ಪರಿಶೀಲಿಸಬೇಕಿದೆ. ಅದಕ್ಕೆ ಸಾಮಾನ್ಯವಾಗಿ ಕೆಲವು ಸಮಯ ಹಿಡಿಯುತ್ತದೆʼ ಎಂದು ಸಿದ್ದೀಕ್ ಪರ ವಕೀಲರೊಬ್ಬರು ಹೇಳಿದ್ದಾರೆ.
ಇನ್ನೊಂದು ಪ್ರಕರಣದಲ್ಲಿಯ ವಿಳಂಬವನ್ನು ಗಮನಕ್ಕೆ ತೆಗೆದುಕೊಂಡಿದ್ದ ನ್ಯಾಯಾಲಯವು ಶೀಘ್ರವೇ ಪರಿಶೀಲನೆಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಪ್ರಕ್ರಿಯೆಯಲ್ಲಿ ಹಲವಾರು ಅಧಿಕಾರಿಗಳ ಪಾತ್ರವಿರುವುದರಿಂದ ಮತ್ತು ಅದರ ಮೇಲೆ ನ್ಯಾಯಾಲಯದ ನಿಯಂತ್ರಣವಿಲ್ಲದ್ದರಿಂದ ಭದ್ರತೆಯ ಪರಿಶೀಲನೆಯನ್ನು ಪೂರ್ಣಗೊಳಿಸಲು ಯಾವುದೇ ದಿನಾಂಕವನ್ನು ನಿಗದಿಪಡಿಸಿಲ್ಲ. ಒಂದೆರಡು ದಿನಗಳಲ್ಲಿ ಅದು ಪೂರ್ಣಗೊಳ್ಳುವ ನಿರೀಕ್ಷೆಯಿದೆ,ಬಳಿಕ ಜಾಮೀನು ಬಾಂಡ್ ಮತ್ತು ಬಿಡುಗಡೆ ಆದೇಶವನ್ನು ಹೊರಡಿಸಲಾಗುತ್ತದೆ. ಈ ವಾರದಲ್ಲಿ ಕಪ್ಪನ್ ಜೈಲಿನಿಂದ ಹೊರಬರುತ್ತಾರೆ ಎಂದು ಆಶಿಸಿದ್ದೇವೆ ’ ಎಂದು ಕಪ್ಪನ್ ಪರ ವಕೀಲ ಮುಹಮ್ಮದ್ ದಾನಿಷ್ ಅವರು ತಿಳಿಸಿದರು.
ಯುಎಪಿಎ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಾಗ ತಲಾ ಒಂದು ಲಕ್ಷ ರೂಗಳ ಭದ್ರತೆಗಳನ್ನು ಮತ್ತು ಅಷ್ಟೇ ಮೊತ್ತದ ಪರ್ಸನಲ್ ಬಾಂಡ್ ಅನ್ನು ಒದಗಿಸುವಂತೆ ಕಪ್ಪನ್ ಗೆ ಸೂಚಿಸಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿಯೂ ಇವೇ ಷರತ್ತುಗಳನ್ನು ವಿಧಿಸಲಾಗಿದೆ .











