ರಾಜ್ಯ ಸರ್ಕಾರ ಹಾಗು ಕೇಂದ್ರ ಸರ್ಕಾರದ ನೀತಿಗಳಿಂದ ಬೇಸತ್ತ ಜನತೆ ಕಾಂಗ್ರೆಸ್ ಕಡೆಗೆ ಮುಖ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಈ ಬಾರಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವುದು ಗ್ಯಾರಂಟಿ ಅನ್ನೋ ಮಾತುಗಳು ಕೇಳಿ ಬರುತ್ತಿತ್ತು. ಆದರೆ ದಿನಗಳು ಉರುಳಿದಂತೆ ಕಾಂಗ್ರೆಸ್ ಪಕ್ಷವೇ ಬಿಜೆಪಿಗೆ ಕೋಲು ಕೊಟ್ಟು ಹೊಡೆಸಿಕೊಳ್ಳುವ ಕೆಲಸ ಮಾಡುತ್ತಿದ್ಯಾ ಅನ್ನೋ ಅನುಮಾನ ಕಾಡುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಮೋದಿ ವಿಷದ ಹಾವು’ ಎನ್ನುವ ಹೇಳಿಕೆ ನೀಡಿದ್ದರು. ಆ ಬಳಿಕ ಸ್ಪಷ್ಟನೆ ಕೊಡ ಕೊಟ್ಟಿದ್ದರು. ಆ ಬಳಿಕ ಪ್ರಿಯಾಂಕ್ ಖರ್ಗೆ ನಾಲಾಯಕ್ ಪ್ರಧಾನಿ ಎನ್ನುವ ಮಾತನ್ನಾಡಿದ್ದರು. ಲಿಂಗಾಯತ ಭ್ರಷ್ಟ ಸಿಎಂ ಅನ್ನೋ ಮಾತನ್ನೂ ಕೂಡ ಭಾರತೀಯ ಜನತಾ ಪಾರ್ಟಿ ವಿವಾದ ಮಾಡುವ ಮೂಲಕ ಲಾಭ ಮಾಡಿಕೊಳ್ಳುವ ಯತ್ನ ಮಾಡಿತ್ತು. ಇದೀಗ ಬಜರಂಗ ದಳ ನಿಷೇಧ ಮಾಡುವ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವುದು ವಿವಾದಕ್ಕೆ ಆಸ್ಪದ ನೀಡಿದೆ. ಬಜರಂಗ ದಳ ನಿಷೇಧ ಬಗ್ಗೆ ಬೆಂಕಿ ಜ್ವಾಲೆ ಸೃಷ್ಟಿಸಲು ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ.
‘ನಾನು ಬಜರಂಗಿ’ ಅಭಿಯಾನಕ್ಕೆ ಬಿಜೆಪಿ ಮುನ್ನುಡಿ..
2019ರಲ್ಲಿ ರಾಹುಲ್ ಗಾಂಧಿ ‘ಚೌಕಿಧಾರ್ ಚೋರ್ ಹೈ’ ಎಂದು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರಾಹುಲ್ ಗಾಂಧಿ ಹೇಳಿಕೆಯನ್ನು ದೊಡ್ಡ ಮಟ್ಟದಲ್ಲಿ ಅಭಿಯಾನ ಮಾಡಿದ್ದ ಭಾರತೀಯ ಜನತಾ ಪಕ್ಷ, ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೆಸರಿನ ಮುಂದೆ ಚೌಕಿಧಾರ್ ಎಂದು ಸೇರಿಕೊಂಡಿದ್ದರು. ಇದೀಗ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಬಜರಂಗದಳ ನಿಷೇಧ ಮಾಡುವ ಬಗ್ಗೆ ನೀಡಿರುವ ಸುಳಿವು ಮತ್ತೊಂದು ಅಭಿಯಾನಕ್ಕೆ ಕಾರಣವಾಗ್ತಿದೆ. ‘ನಾನೊಬ್ಬ ಕನ್ನಡಿಗ, ನನ್ನ ನಾಡು ಹನುಮ ಜನಿಸಿದ ನಾಡು, ನಾನೊಬ್ಬ ಬಜರಂಗಿ’ ಎಂದು ಪೋಸ್ಟ್ ಮಾಡಲಾಗ್ತಿದೆ. ಇನ್ನು ಬಜರಂಗ ದಳ ನಿಷೇಧ ವಿಚಾರವನ್ನು ವಿರೋಧಿಸಿ, ಇದು ಬಜರಂಗ ದಳದವರ ಮನೆ, ಕಾಂಗ್ರೆಸ್ ಮತಯಾಚಿಸಲು ಅವಕಾಶವಿಲ್ಲ, ಒಳಗೆ ಬಂದರೆ ನಾಯಿ ಬಿಡಲಾಗುವುದು ಎಂದು ಪೋಸ್ಟರ್ ಅಂಟಿಸಲಾಗ್ತಿದೆ. ಇನ್ನು ರಾಜ್ಯಾದ್ಯಂತ ಬಜರಂಗ ದಳದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಕೊಟ್ಟ ಪ್ರಣಾಳಿಕೆ ಕಾಂಗ್ರೆಸ್ಗೆ ಮುಳುವಾಗುವ ಸಾಧ್ಯತೆಯಿದೆ.
ಜೆಡಿಎಸ್ ಕಲಿತ ಬುದ್ಧಿ ಕಾಂಗ್ರೆಸ್ಗೆ ಬರಲೇ ಇಲ್ಲ..!
ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. ಈ ವೇಳೆ ಸುಮಲತಾ ಸೇರಿದಂತೆ ಬಿಜೆಪಿ ವಿರುದ್ಧ ಸಾಕಷ್ಟು ಟೀಕಾಪ್ರಹಾರ ನಡೆಸಿದ್ದರು. ಆ ವೇಳೆ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಸ್ವತಃ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಕೂಡ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸಿದ್ದರು, ಆ ಬಳಿಕ ಬುದ್ಧಿ ಕಲಿತಿರುವ ಜೆಡಿಎಸ್ ನಾಯಕರು ಯಾವುದೇ ವೈಯಕ್ತಿಕ ಹೇಳಿಕೆಗಳನ್ನು ನೀಡದೆ, ಕೇವಲ ಅಭಿವೃದ್ಧಿ ಆಧಾರಿತ ಆರೋಪಗಳನ್ನು ಮಾತ್ರ ಮಾಡಲಾಗ್ತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ, ಜೆಡಿಎಸ್ ಪಕ್ಷ ಪ್ರೈವೇಟ್ ಲಿಮಿಟೆಡ್ ಕಂಪನಿ ಅಂತಾ ಹೇಳಿದ್ರೂ ದೇವೇಗೌಡರು ಪ್ರತಿಕ್ರಿಯೆ ನೀಡಿಲ್ಲ. ಪ್ರಧಾನಿ ಹುದ್ದೆಯಲ್ಲಿ ಇರುವ ನರೇಂದ್ರ ಮೋದಿ ಅವರಿಗೆ ಮಾತನಾಡುವ ಅಧಿಕಾರವಿದೆ. ನಾನು ಅಷ್ಟೊಂದು ಕೆಳಮಟ್ಟದಲ್ಲಿ ಟೀಕೆ ಮಾಡಲು ಇಚ್ಛೆಪಡಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಕೂಡ ಹೋದಲ್ಲಿ ಬಂದಲ್ಲಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದು, ಕಾಂಗ್ರೆಸ್ ಹಾಗು ಬಿಜೆಪಿ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡುತ್ತಿಲ್ಲ. ಇದು ಜೆಡಿಎಸ್ಗೆ ಅನುಕೂಲ ಆಗುವ ಸಾಧ್ಯತೆ ಹೆಚ್ಚಾಗಿದೆ.
ವೈಯಕ್ತಿಕ ಟೀಕೆಗಳು ಜನರ ಮನಸ್ಸನ್ನು ಘಾಸಿಗೊಳಿಸುತ್ತವೆ..!
ಅಧಿಕಾರದಲ್ಲಿ ಇರುವ ಜನರನ್ನು ದೂರುವುದು ಸಹಜ. ಆದರೆ ವಿರೋಧ ಪಕ್ಷಗಳು ಟೀಕೆ ಮಾಡುವ ಸಮಯದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡಿದರೆ ಆಡಳಿತ ಪಕ್ಷಗಳಿಗೆ ಅನುಕೂಲ ಆಗುವ ಸಾಧ್ಯತೆಗಳಿವೆ. ಈಗಾಗಲೇ ಬಿಜೆಪಿ ವಿರುದ್ಧ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗಿರುವ ಕಾಂಗ್ರೆಸ್ ಪಕ್ಷ, ಈ ಬಾರಿಯೂ ಕೂಡ ತನ್ನ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಇನ್ನು ಬಜರಂಗ ದಳ ನಿಷೇಧ ಹೇಳಿಕೆ ಬಗ್ಗೆ ಬಜರಂಗ ದಳ ಹಾಗು ಬಿಜೆಪಿ ನಾಯಕರು ಈಗಾಗಲೇ ಅಭಿಯಾನ ಶುರು ಮಾಡಿದ್ದು, ರಾಜ್ಯಾದ್ಯಂತ ಕಿಚ್ಚು ಹೊತ್ತಿಸುವ ಸಾಧ್ಯತೆಯಿದೆ. ಮುಸ್ಲಿಂ ಸಮುದಾಯವನ್ನು ಓಲೈಸಿಕೊಳ್ಳುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದ್ದ ಬಗ್ಗೆ ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೇ ಬರುವುದಿಲ್ಲ, ನಿಷೇಧ ಮಾಡುವುದು ಇನ್ನೆಲ್ಲಿಂದ..? ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ. ಉಳಿದಂತೆ ರಾಷ್ಟ್ರಮಟ್ಟದಲ್ಲೂ ಕಾಂಗ್ರೆಸ್ಗೆ ಭಾರೀ ಮುಜುಗರ ಸೃಷ್ಟಿಸಿದ್ದು, ಪ್ರಣಾಳೀಕೆಯಲ್ಲಿ ಇರುವ ನಿಷೇಧ ಮಾಹಿತಿಯನ್ನು ವಾಪಸ್ ಪಡೆಯುತ್ತಾರಾ..? ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿವೆ. ಈ ರೀತಿಯ ಹೇಳಿಕೆಗಳು ಮತಗಳ ಮೇಲೆ ಪರಿಣಾಮ ಬೀರಿದ್ರೆ ದೊಡ್ಡ ಮಟ್ಟದ ನಷ್ಟ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಕೃಷ್ಣಮಣಿ