ಬೆಂಗಳೂರು: ಮನೆ ಮುಂದೆ ನಿಲ್ಲಿಸಲಾಗುವ ಮನೆ ಮಾಲೀಕರ ವಾಹನಗಳಿಗೂ ಪಾರ್ಕಿಂಗ್ ಶುಲ್ಕ ವಿಧಿಸುವುದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ಗ್ರೇಟರ್ ಬೆಂಗಳೂರು ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಹೇಳಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಕೃಷ್ಣಭೈರೇಗೌಡ ಅವರೇ ಇದ್ಯಾವ ಸೀಮೆ ಆಡಳಿತ ನಿಮ್ಮದು? ವಿಧಾನಸೌಧ, ಜಿಬಿಎ, ನ್ಯಾಯಾಲಯಗಳ ಸಂಕೀರ್ಣಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗದ ನಿಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಸಾರ್ವಜನಿಕರ ಮೇಲೆ ಬರೆ ಹಾಕುತ್ತಿದ್ದೀರಿ. ಇದು ಎಷ್ಟು ಸರಿ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಉಚ್ಚ ನ್ಯಾಯಾಲಯ, ಸಿಟಿ ನ್ಯಾಯಾಲಯಗಳ ಸಂಕೀರ್ಣ, ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ ಎನ್ನುವುದು ಈ ಸರ್ಕಾರಕ್ಕೆ ಗೊತ್ತಿಲ್ಲವೇ? ವಿಧಾನಸೌಧಕ್ಕೆ ಹೋಗುವ ಸಾರ್ವಜನಿಕರಿಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದರೆ ಈ ವ್ಯವಸ್ಥೆಗೆ ಏನು ಹೇಳಬೇಕಾಗುತ್ತದೆ? ಪಾಲಿಕೆ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಅಂದರೆ ಜಿಬಿಎಗೆ ಏನೆನ್ನಬೇಕು? ನಗರದ ಬಹುತೇಕ ಕಡೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಇಲ್ಲ. ತಪ್ಪು ಸರ್ಕಾರದ್ದಾಗಿದ್ದರೆ ಅದರ ಪ್ರತಿಫಲವನ್ನು ಸಾರ್ವಜನಿಕರು ಅನುಭವಿಸಬೇಕು ಎಂದರೆ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಅಷ್ಟೇ ಏಕೆ, ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮಂತ್ರಿಗಳಾದ ಕೃಷ್ಣಭೈರೇಗೌಡರ ಮನೆ ಸಮೀಪವಿರುವ ಅಪಾರ್ಟ್ಮೆಂಟ್ ಮುಂದೆಯೇ ಪಾರ್ಕಿಂಗ್ ಮಾಡಲು ಜಾಗವಿಲ್ಲ. ಆ ಅಪಾರ್ಟ್ಮೆಂಟಿಗೆ ಬರುವ ಅತಿಥಿಗಳು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂಬುದನ್ನು ನಗರಾಭಿವೃದ್ಧಿ ಸಚಿವರೇ ಹೇಳಬೇಕಾಗುತ್ತದೆ. ಕೇವಲ ಕಾನೂನು ಮಾಡುವುದು ಅಥವಾ ನಿಯಮ ರೂಪಿಸುವುದು ದೊಡ್ಡ ವಿಷಯವಲ್ಲ. ಜನರ ನಿಜವಾದ ಪರಿಸ್ಥಿತಿ ಏನಿದೆ? ಎಂಬುದನ್ನು ಅಧ್ಯಯನ ಮಾಡಿ ರೂಪಿಸಬೇಕಾಗುತ್ತದೆ ಎಂದು ರಮೇಶ್ ಗೌಡ ಹೇಳಿದರು.

ಜೆ.ಸಿ.ರಸ್ತೆ ಪಾರ್ಕಿಂಗ್ ಕಟ್ಟಡ ಬಾಡಿಗೆಗೆ ಕೊಟ್ಟಿದ್ದಾರೆ
ಜೆ.ಸಿ. ರಸ್ತೆಯಲ್ಲಿ ಬೃಹತ್ ಪಾರ್ಕಿಂಗ್ ಕಟ್ಟಡವನ್ನು ಪಾಲಿಕೆ ವತಿಯಿಂದ ನಿರ್ಮಿಸಲಾಗಿದೆ. ದುರಂತವೆಂದರೆ ಈ ಕಟ್ಟಡವನ್ನು ಖಾಸಗಿ ವ್ಯಕ್ತಿಗಳಿಗೆ ವಾಣಿಜ್ಯ ಉದ್ದೇಶಕ್ಕಾಗಿ ಬಾಡಿಗೆಗೆ ನೀಡಲಾಗಿದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೇವಲ ಬಿಬಿಎಂಪಿಯನ್ನು ಜಿಬಿಎ ಮಾಡಿದ್ದಾಯ್ತು. ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮಾಡಿದ್ದಾಯಿತು. ಕೇವಲ ಹೆಸರು ಬದಲಾವಣೆ ಮಾಡಿದರೆ ಉಪಯೋಗ ಇಲ್ಲ. ಬೆಂಗಳೂರಿನಲ್ಲಿ ಒಂದು ರಸ್ತೆ ಗುಂಡಿಗೆ ಒಂದು ಬಾಂಡ್ಲಿ ಮಣ್ಣು ಹಾಕುವ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲವಾಗಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಜಿಬಿಎ ಅದೆಷ್ಟು ಅದಕ್ಷತೆಯಿಂದ ಕೆಲಸ ಮಾಡುತ್ತಿದೆ ಎಂಬುದಕ್ಕೆ ಜೆ.ಸಿ. ರಸ್ತೆಯ ಪಾರ್ಕಿಂಗ್ ಕಟ್ಟಡವನ್ನು ಬಾಡಿಗೆಗೆ ನೀಡಿರುವ ಪ್ರಕರಣ ಸಾಕ್ಷಿ. ಸರ್ಕಾರವು ತನ್ನ ವೈಫಲ್ಯಗಳಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಕಾರು ನಿಲ್ಲಿಸಿದರೆ ಅದಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸುವ ಹುನ್ನಾರವನ್ನು ಸಹಿಸಲು ಸಾಧ್ಯವಿಲ್ಲ. ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿದೆ ಸರ್ಕಾರ ನಿರ್ಲಕ್ಷ ಮಾಡಿದೆ. ಅಂತದ್ದರಲ್ಲಿ ತಮ್ಮ ಮನೆಗಳ ಮುಂದೆ ಮನೆ ಮಾಲೀಕರು ವಾಹನಗಳನ್ನು ನಿಲ್ಲಿಸಿದರೆ ಪಾರ್ಕಿಂಗ್ ಶುಲ್ಕ ವಿಧಿಸಲು ಹೊರಟಿರುವುದು ಸರಿಯಲ್ಲ ಎಂದು ಟೀಕಿಸಿದರು.

ಭಾರತದ ಯಾವುದೇ ನಗರದಲ್ಲಿಯೂ ಇಲ್ಲದ ಪಾರ್ಕಿಂಗ್ ಶುಲ್ಕವನ್ನು ಸಾರ್ವಜನಿಕರ ಮೇಲೆ ಹೇರಲು ರಾಜ ಕಾಂಗ್ರೆಸ್ ಸರ್ಕಾರ ಹೊರಟಿದೆ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಸರ್ಕಾರವು ಕೇವಲ ವಿಧಾನಸೌಧದಲ್ಲಿ ಅಷ್ಟೇ ಅಲ್ಲದೆ ಸ್ಥಳೀಯ ಮಟ್ಟದಲ್ಲಿಯೂ ಆಡಳಿತ ವೈಫಲ್ಯ ಕಂಡಿದೆ. ತನ್ನ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸದೆ ತೆರಿಗೆದಾರರನ್ನು ಅಪರಾಧಿಗಳಂತೆ ಬಿಂಬಿಸಲು ಹೊರಟಿದೆ. ಇದು ಸರಿಯಲ್ಲ, ಬೆಂಗಳೂರಿನ ಜನತೆ ಇದನ್ನು ಒಪ್ಪುವುದಿಲ್ಲ. ತಕ್ಷಣವೇ ಜಿಬಿಎ ಪಾರ್ಕಿಂಗ್ ಶುಲ್ಕ ವಿಧಿಸುವ ನಿರ್ಧಾರದಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಜೆಡಿಎಸ್ ಪಕ್ಷದಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಮೇಶ್ ಗೌಡ ಎಚ್ಚರಿಕೆ ನೀಡಿದರು.

ಬೆಂಗಳೂರು ನಗರದ ಪ್ರಮುಖ ರಸ್ತೆಗಳ ಎರಡು ಬದಿಗಳಲ್ಲಿ ಪಾರ್ಕಿಂಗ್ ಮಾಡಿದರೆ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಅಂತಹ ಕಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆದರೆ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ಅನಗತ್ಯವಾಗಿ ಜನರ ಮೇಲೆ ಪಾರ್ಕಿಂಗ್ ಶುಲ್ಕ ವಿಧಿಸಲು ಹೊರಟಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಸರ್ಕಾರ ಕಾನೂನನ್ನು ಮೀರುತ್ತಿದೆ
ರಾಜ್ಯ ಸರ್ಕಾರವು ಸ್ಥಳೀಯ ನಗರ ಪಾಲಿಕೆಗಳ ಜತೆ ನೇರವಾಗಿ ಸಮಾಲೋಚನೆ ನಡೆಸದೆ ಹಾಗೂ ಪಾಲಿಕೆಗಳ ಸ್ವಾಯತ್ತತೆಯನ್ನು ಮೀರಿ ನೇರವಾಗಿ ಪಾರ್ಕಿಂಗ್ ಅಥವಾ ಟೋವಿಂಗ್ ನಿಯಮಗಳನ್ನು ಜಾರಿ ಮಾಡುವುದು ಸಂಪೂರ್ಣವಾಗಿ ಕಾನೂನಿಗೆ ವಿರುದ್ಧವಾಗಿದೆ. ಈ ನಿಯಮ ಜಾರಿ ಮಾಡೋದಕ್ಕೆ ಸಾರ್ವಜನಿಕರ ಅಭಿಪ್ರಾಯ ಬಹಳ ಮುಖ್ಯವಾಗಿರುತ್ತದೆ. ಆದರೆ ಪಾರ್ಕಿಂಗ್ ನಿಯಮವನ್ನು ಜನರ ಅಭಿಪ್ರಾಯ ವಿರುದ್ಧವಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ಈಗಾಗಲೇ ಪಾರ್ಕಿಂಗ್ ನಿಯಮಗಳಿಗೆ ಸಂಬಂಧಪಟ್ಟ ಹಾಗೆ ವಿವಿಧ ನ್ಯಾಯಾಲಯಗಳು ಮಹತ್ವದ ತೀರ್ಪುಗಳನ್ನು ನೀಡಿವೆ. ರಾಜ್ಯ ಸರ್ಕಾರ ಎಲ್ಲಾ ತೀರ್ಪುಗಳನ್ನು ಗಾಳಿಗೆ ತೂರಿದ್ದು, ಕಾನೂನಾತ್ಮಕವಾಗಿ ಒಪ್ಪಲಾಗದ ಪಾರ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವುದನ್ನು ಜೆಡಿಎಸ್ ಸ್ಪಷ್ಟವಾಗಿ ವಿರೋಧಿಸುತ್ತದೆ. ವೈಭವ್ ಪಾಂಡೆ ಪ್ರಕರಣದಲ್ಲಿ ಕಡ್ಡಾಯವಾದ ಸಾಂವಿಧಾನಿಕ ಮತ್ತು ಶಾಸನಬದ್ಧ ಕ್ರಮಗಳನ್ನು ಅನುಸರಿಸದೇ ಸ್ಥಳೀಯ ಸಂಸ್ಥೆಗಳ ಪ್ರತಿನಿತ್ಯ ಹಾಗೂ ರಚನಾತ್ಮಕ ಅನುಸರಣೆಯ ನಿಯಮಗಳನ್ನು ನೀಡುವುದು ಅಥವಾ ಬದಲಾಯಿಸುವುದು ಅಸಮರ್ಪಕ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ತೀರ್ಪನ್ನು ಸರ್ಕಾರ ಗಾಳಿಗೆ ತೂರುತಿದೆ ಎಂದು ರಮೇಶ್ ಗೌಡ ಕಿಡಿಕಾರಿದರು.

ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮನಸೋ ಇಚ್ಛೆ ವರ್ತಿಸುತ್ತಿದೆ. ಹೊಸ ಪಾರ್ಕಿಂಗ್ ನೀತಿಯನ್ನು ಒಪ್ಪಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಅವರು ಒತ್ತಾಯ ಮಾಡಿದರು.






