ರಾಮನಗರ : ಬಿಜೆಪಿಗೆ ನಟ ಕಿಚ್ಚ ಸುದೀಪ್ ಬೆಂಬಲ ನೀಡುತ್ತಿದ್ದಾರೆ ಎಂಬ ವಿಚಾರವಾಗಿ ಮರಳವಾಡಿಯಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಬೊಮ್ಮಾಯಿಗೆ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಬಿಜೆಪಿಗೆ ಸಪೋರ್ಟ್ ಮಾಡುವುದಕ್ಕಿಂತ ಹೆಚ್ಚಾಗಿ ಬೊಮ್ಮಾಯಿ ಜೊತೆಗಿನ ಆತ್ಮೀಯತೆ ಚಿಕ್ಕ ವಯಸ್ಸಿನಿಂದಲೂ ಇದೆ. ಹೀಗಾಗಿ ಬೊಮ್ಮಾಯಿಗೆ ಗೌರವಾರ್ಥವಾಗಿ ನಾನು ಸಪೋರ್ಟ್ ಮಾಡುತ್ತೇನೆ ಎಂದು ಹೇಳಿದ್ದಾರೆ ಅಂತಾ ಹೇಳಿದ್ರು.
ಇನ್ನು ಜೆಡಿಎಸ್ಗೆ ಸ್ಟಾರ್ ಪ್ರಚಾರಕರನ್ನು ಕರೆಯಿಸುವ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ನಾವು ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಯಿಸುತ್ತಿಲ್ಲ. ನಮಗೆ ಪಂಚರತ್ನ ಯೋಜನೆಯೇ ನಮ್ಮ ಸ್ಟಾರ್ ಯೋಜನೆಯಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರೇ ನಮಗೆ ಸ್ಟಾರ್ಗಳು, ದೇವೇಗೌಡರ 60 ವರ್ಷದ ರಾಜಕಾರಣ, ಅಭಿವೃದ್ಧಿ, ರಾಜ್ಯಕ್ಕೆ ನೀಡಿದ ಕೊಡುಗೆಗಳು ಇವುಗಳನ್ನು ರಾಜ್ಯದ ಜನತೆ ಮರೆತಿಲ್ಲ. ಹೀಗಾಗಿ ಜೆಡಿಎಸ್ ಯಾವುದೇ ಸ್ಟಾರ್ ಪ್ರಚಾರಕರನ್ನು ಕರೆಯಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹಾಸನ ಟಿಕೆಟ್ ಗೊಂದಲದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ನಿಖಿಲ್, 13ರಿಂದ ನಾಮಿನೇಷನ್ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ. ಇದಕ್ಕಿಂತ ಮೊದಲೇ ಟಿಕೆಟ್ ಘೋಷಣೆ ಮಾಡುತ್ತೇವೆ. 2ನೇ ಪಟ್ಟಿ ಬಿಡುಗಡೆ ತರಾತುರಿಯಲ್ಲಿ ಆಗುವಂಥದ್ದಲ್ಲ. ದೇವೇಗೌಡರು, ಕುಮಾರಸ್ವಾಮಿ ಹಾಗೂ ಇಬ್ರಾಹಿಂ ಕೂತು ತೀರ್ಮಾನ ಮಾಡ್ತಾರೆ. ನಮ್ಮ ಪಕ್ಷ ಸದೃಢವಾಗಿದೆ, ಅಭ್ಯರ್ಥಿಗಳು ಸದೃಢವಾಗಿದ್ದಾರೆ ಎಂದು ಹೇಳಿದ್ರು.






