ಮೈಸೂರು : ರಾಜ್ಯ ರಾಜಕಾರಣದಲ್ಲಿ ಸದ್ಯ ಚುನಾವಣೆಯ ಅಲೆ ಜೋರಾಗಿ ಬೀಸುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಇದೇ ತನ್ನ ಕೊನೆಯ ಚುನಾವಣೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ವರುಣ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಎನಿಸಿರುವ ಕೊನೆಯ ಬಾರಿಗೆ ಸ್ವಕ್ಷೇತ್ರದಲ್ಲೇ ಗೆದ್ದು ವಿಧಾನಸಭೆಗೆ ಪ್ರವೇಶಿಸುವ ಹುಮ್ಮಸ್ಸಿನಲ್ಲಿದ್ದಾರೆ.
ವರುಣದಲ್ಲಿ ಗೆಲುವು ಸಾಧಿಸುವ ಪ್ರಯತ್ನದಲ್ಲಿರುವ ಸಿದ್ದರಾಮಯ್ಯ ಜೆಡಿಎಸ್ ಅಭ್ಯರ್ಥಿಯ ಜೊತೆಯಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರಾ..? ಎಂಬ ಅನುಮಾನ ಮೂಡಿದೆ. ತೆರೆಮರೆಯಲ್ಲಿಯೇ ಜೆಡಿಎಸ್ ಪಕ್ಷದ ವರುಣ ಅಭ್ಯರ್ಥಿ ಅಭಿಷೇಕ್ ಸಹಾಯ ಮಾಡ್ತಿದ್ದಾರೆ ಎಂಬ ಗುಸುಗುಸು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಜೆಡಿಎಸ್ ತನ್ನ ಮೊದಲ ಪಟ್ಟಿಯಲ್ಲಿಯೇ ವರುಣ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಜೆಡಿಎಸ್ ಅಭ್ಯರ್ಥಿ ಅಭಿಷೇಕ್ ತಮಗೆ ಟಿಕೆಟ್ ಘೋಷಣೆಯಾದ ಬಳಿಕ ವರುಣದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗೋದು ಬಿಟ್ಟು ಕಾಣೆಯಾಗಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ತನ್ನ ಹೆಸರು ಘೋಷಣೆಯಾದಾಗಿನಿಂದ ಇಂದಿನವರೆಗೂ ಕ್ಷೇತ್ರದಲ್ಲಿ ಅಭಿಷೇಕ್ ಈವರೆಗೂ ಒಂದೇ ಒಂದು ಸಭೆ ನಡೆಸಿಲ್ಲ ಎನ್ನಲಾಗಿದೆ.
ಕಳೆದೊಂದು ವಾರದಿಂದ ಅಭಿಷೇಕ್ ಕ್ಷೇತ್ರದ ಜನರ ಕೈಗೂ ಸಿಗದೇ ಕಾಣೆಯಾಗಿದ್ದಾರೆ. ಕ್ಷೇತ್ರದ ಜನತೆ ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವಂತೆ. ಅಭಿಷೇಕ್ರ ಈ ನಡೆಯಿಂದ ವರುಣ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಹೀಗಾಗಿ ಅಭಿಷೇಕ್ ವಿರುದ್ಧ ಜೆಡಿಎಸ್ ವರಿಷ್ಠರಿಗೆ ದೂರು ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.