ರಾಜ್ಯದಲ್ಲಿ ಉಪಚುನಾವಣಾ ಕಾವು ರಂಗೇರಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಜೆಡಿಎಸ್, ಬಿಜೆಪಿ ಎರಡೂ ಪಕ್ಷಗಳೂ ಕಾಂಗ್ರೆಸ್ಅನ್ನು ಅದರಲ್ಲೂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಟೀಕಾಸ್ತ್ರ ಹೂಡುತ್ತಿದೆ. ಇತ್ತ ಸಿದ್ದರಾಮಯ್ಯನವರೂ ಎರಡೂ ಪಕ್ಷಗಳ ವಿರುದ್ಧ ನೇರ ವಾಗ್ದಾಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸಿಂದಗಿಯಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಉಪಚನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ಗೆ ನೇರ ಸ್ಪರ್ಧೆ ಇದೆ. ಜೆಡಿಎಸ್ ಕಣದಲ್ಲಿದ್ದರೂ ಸಹ ಸ್ಪರ್ಧೆಯಲ್ಲಿ ಇಲ್ಲ. ಜೆಡಿಎಸ್ಗೂ ನಾನೇ ಟಾರ್ಗೆಟ್, ಬಿಜೆಪಿಗೂ ನಾನೇ ಟಾರ್ಗೆಟ್. ಏಕೆಂದರೆ ಇಬ್ಬರಿಗೂ ನನ್ನನ್ನು ಕಂಡರೆ ಭಯವಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ದೇವೇಗೌಡರು ನನ್ನ ವಿರುದ್ಧ ಬಾಣ ಬಿಡ್ತಿದ್ದಾರೆ. ಸಿಂದಗಿಯಲ್ಲಿ ಜೆಡಿಎಸ್ ಗೆಲ್ಲಲ್ಲ. ಆದರೂ ದೇವೆಗೌಡರ ಪೂರ್ತಿ ಕುಟುಂಬ ಇಲ್ಲೇ ಇದೆ. ನಾನು ಅವತ್ತೇ ಹೇಳಿದ್ದೆ ಇದು ಜೆಡಿಎಸ್ ಅಲ್ಲ ಜೆಡಿʼಎಫ್ʼ. ʼಜೆಡಿ ಫ್ಯಾಮಿಲಿʼ. ಜೆಡಿಎಸ್ ಕುಟುಂಬದ ಪಕ್ಷ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಹಿಂದುಳಿದ ಜಾತಿಗಳ ವಿರೋಧಿಗಳು. ಬಿಜೆಪಿಯವರು ಶ್ರೀಮಂತರ ಪರವಾಗಿ ಇದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಜೆಡಿಎಸ್ ಬಿಜೆಪಿಯ ಬಿ ಟೀಂ. ಹಿಂದುಳಿದ ವರ್ಗಗಳ ಜಾತಿಗೆ ಅನ್ಯಾಯ ಮಾಡಿದ್ರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಈ ವೇಳೆ ಅವರು ಎಚ್ಚರಿಸಿದ್ದಾರೆ.
ಕಂಬಳಿ ಹಾಕಲು ಯೋಗ್ಯತೆ ಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಬೊಮ್ಮಾಯಿ ನೀನು ಯಾವತ್ತಾದರೂ ಕುರಿ ಕಾದಿದ್ದೀಯಾ? ನಾನು ಕುರಿ ಕಾದಿದ್ದೇನೆ ಎಂದು ಮಾಜಿ ಸಿಎಂ ಕುಟುಕಿದ್ದಾರೆ. ಕನಕಗುರು ಪೀಠ ಮಾಡಿದ್ದು ನಾನು. ಸಂಗೊಳ್ಳಿ ಬ್ರಿಗೇಡ್ ಮಾಡಿದ ಈಶ್ವರಪ್ಪ. ಇದೀಗ ಬ್ರಿಗೇಡ್ ಎಲ್ಲಿದೆ. ಸ್ವಾರ್ಥಕ್ಕಾಗಿ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದ. ಇದೀಗ ಬ್ರಿಗೇಡ್ ಎಲ್ಲಿದೆ ಎಂದು ಕೇಳಿದ್ದಾರೆ.

ಕೆಂಪೇಗೌಡ ಜಯಂತಿ ಮಾಡಿದ್ದು ಸಿದ್ದರಾಮಯ್ಯ. ದೇವೇಗೌಡ, ಕುಮಾರಸ್ವಾಮಿ ಅಲ್ಲ. ಈಶ್ವರಪ್ಪ ಒಂದು ಸಲ ಹೇಳಿದ್ರು ನಾನು ಕುರುಬ ಅಲ್ಲಾ ಅಂತ. ಆದ್ರೆ ನಾನು ಕುರುಬ. ಕುರುಬ ಜಾತಿಯಲ್ಲಿ ಹುಟ್ಟಿರೋದನ್ನು ಸುಳ್ಳು ಹೇಳಲು ಆಗುತ್ತಾ? ಆದ್ರೆ ಯಾವ ಜಾತಿಯಲ್ಲಿ ಹುಟ್ಟಿದ್ದೇವೆ ಅನ್ನೋದು ಮುಖ್ಯವಲ್ಲ. ಮಾನವೀಯತೆ ಮುಖ್ಯ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಗಿಸಿಬಿಟ್ರೆ ಕಾಂಗ್ರೆಸ್ ಮುಗಿಸಬಹುದು ಎಂದು ಎರಡು ಪಕ್ಷಗಳು ಲೆಕ್ಕಾಚಾರ ಹಾಕಿಕೊಂಡಿವೆ. ಆದರೆ ಸಿದ್ದರಾಮಯ್ಯರನ್ನು ಮುಗಿಸಲು ಜನರು ಬಿಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.