ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಇಡೀ ಜಗತ್ತು ಬೇರೆಯದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರೆ ಭಾರತವು (India) 1956ರ ಅಲಿಪ್ತ ನೀತಿಗೆ (alipta neeti) ಮೊರೆ ಹೋಗಿದೆ. ರಷ್ಯಾ (Russia) ಅಥವಾ ಉಕ್ರೇನ್ (Ukraine) ಯಾವುದೇ ಕಡೆಗೆ ವಾಲದೆ ಎರಡೂ ಕಡೆಯು ಮುಕ್ತ ಅವಕಾಶವನ್ನು ಇಟ್ಟುಕೊಳ್ಳುವ ರಾಜತಾಂತ್ರಿಕ ಹೆಜ್ಜೆ ಇಟ್ಟಿದೆ. ದಶಕಗಳಿಂದ ಮಹಾನ್ ಸಂಘರ್ಷಗಳನ್ನು ಎದುರಿಸಿರುವ ಭಾರತಕ್ಕೆ ಈಗ ಹೊಸ ಸಂದಿಗ್ಧತೆ ಶುರುವಾಗಿದೆ.
ಅಮೆರಿಕ (America )ಮತ್ತು ಅದರ ಮಿತ್ರರಾಷ್ಟ್ರಗಳು ರಷ್ಯಾದ ವಿರುದ್ಧ ಸೆಟೆದು ನಿಂತಿರುವ ಹಲವು ನಿರ್ಬಂಧಗಳ ಅಸ್ತ್ರ ಹೂಡುತ್ತಿರುವ ಈ ಹೊತ್ತಿನಲ್ಲಿ ಭಾರತ ಮೌನಕ್ಕೆ ಶರಣಾಗುವುದು ಮುಂದೊಂದು ದಿನ ಅಪಾಯವನ್ನೂ ಸೃಷ್ಠಿಸಬಹುದು. ರಷ್ಯಾದ ಮಿಲಿಟರಿ ಉಪಕರಣಗಳನ್ನು ಖರೀದಿಸುವುದರ ವಿರುದ್ಧದ ನಿರ್ಬಂಧಗಳಿಂದ ಭಾರತಕ್ಕೆ ವಿನಾಯಿತಿ ನೀಡುವ ವಿಷಯದಲ್ಲಿ ಅಮೆರಿಕ ಇನ್ನೂ ತನ್ನ ನಿಲುವು ಪ್ರಕಟಿಸಿಲ್ಲ. ಅಮೆರಿಕ ವಿರೋಧದ ನಡುವೆ ಭಾರತವು ತನ್ನ ಮಿಲಿಟರಿ ಸನ್ನದ್ಧತೆಗೆ ನಿರ್ಣಾಯಕವಾದ ರಕ್ಷಣಾ ಸರಕುಗಳನ್ನು ರಷ್ಯಾದಿಂದ ಹೇಗೆ ಆಮದು ಮಾಡಿಕೊಳ್ಳಬಹುದು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.
ಇನ್ನು ರಷ್ಯಾ ವಿಷಯದಲ್ಲಿ; 1950ರ ದಶಕದಲ್ಲಿ ಭಾರತಕ್ಕೆ ರಕ್ಷಣಾ ಸಾಮಾಗ್ರಿಗಳನ್ನು ಪೂರೈಸಲು ಪಾಶ್ಚಿಮಾತ್ಯ ದೇಶಗಳು ಮನಸ್ಸು ಮಾಡಿರಲಿಲ್ಲ. ಭಾರತವು ನಿಧಾನವಾಗಿ ಮಿಲಿಟರಿ ಉಪಕರಣಗಳು ಮತ್ತು ತಂತ್ರಜ್ಞಾನಕ್ಕಾಗಿ ಸೋವಿಯತ್ ಒಕ್ಕೂಟದ ಕಡೆಗೆ ತಿರುಗಿತು. ತಜ್ಞರು ಅಂದಾಜಿಸುವ ಪ್ರಕಾರ ಭಾರತ ಆಮದು ಮಾಡಿಕೊಳ್ಳುವ ರಕ್ಷಣಾ ಸಾಧನಗಳಲ್ಲಿ ಶೇಕಡಾ 81ರಷ್ಟು ರಷ್ಯಾ ಉತ್ಪನ್ನಗಳು. ನೆರೆಯ ಪಾಕಿಸ್ತಾನ ಮತ್ತು ಚೀನಾ ಯಾವಾಗ ಬೇಕಾದರೂ ದಾಳಿ ಮಾಡಬಹುದೆಂಬ ಅನುಮಾನ ಇರುವುದರಿಂದ ಸದ್ಯ ರಷ್ಯಾ ವಿರುದ್ಧ ಭಾರತ ವಿರೋಧ ಕಟ್ಟಿಕೊಳ್ಳುವುದು ಸಮಂಜಸವಾದ ನಡೆ ಆಗುವುದಿಲ್ಲ.

ಚೀನಾ (china) ವಿರುದ್ಧ ಹೋರಾಡುವ ವಿಷಯಕ್ಕೆ ಬಂದರೆ ಸದ್ಯ ರಷ್ಯಾದ ನಡೆಯನ್ನು ವಿರೋಧಿಸುತ್ತಿರುವ ಆಸ್ಟ್ರೇಲಿಯಾ, ಬ್ರಿಟನ್, ಜರ್ಮನಿ ಮತ್ತು ಜಪಾನ್ನಂತಹ ದೇಶಗಳ ಗೆಳತನ ಅತ್ಯಗತ್ಯವಾದುದು. ಹಾಗಂತ ರಷ್ಯಾದೊಂದಿಗಿನ ದಶಕಗಳ ಸುಮಧುರ ಸಂಬಂಧವನ್ನು ಕಡಿತಗೊಳಿಸುವುದು ಕೂಡ ದುಬಾರಿಯಾಗಲಿದೆ. ಈ ಎಲ್ಲಾ ಸಂಗತಿಗಳು ಕೇವಲ ಮಿಲಿಟರಿ ಅವಲಂಬನೆಯ ಬಗ್ಗೆ ಅಲ್ಲ. ಸದ್ಯದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಹೇರಲಾಗುತ್ತಿರುವ ಆರ್ಥಿಕ ಅಥವಾ ವ್ಯವಹಾರಿಕ ನಿರ್ಬಂಧಗಳು ಭಾರತದ ಮೇಲೂ ಪರಿಣಾಮ ಬೀರುತ್ತವೆ ಎಂಬುದು ಸ್ಪಷ್ಟವಾಗಿದೆ. ರಷ್ಯಾದೊಂದಿಗೆ ವ್ಯಾಪಾರವನ್ನು ಮುಂದುವರಿಸುವ ಚೀನಾದಲ್ಲಿ ಬ್ಯಾಂಕುಗಳು ಮತ್ತು ನಿಗಮಗಳ ಮೇಲೆ ಪಶ್ಚಿಮವು ದ್ವಿತೀಯ ನಿರ್ಬಂಧಗಳನ್ನು ವಿಧಿಸಿದರೆ ಅದು ಭಾರತದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ನಿರ್ಣಯಿಸುವುದು ಇನ್ನೂ ಕಷ್ಟ.
ಇತರ ನಾಯಕರಂತೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ (jawaharlal Nehru) ಸೋವಿಯತ್ ಆಕ್ರಮಣದಿಂದ ತಲ್ಲಣಗೊಂಡಿದ್ದರು. ಹಂಗೇರಿಯಲ್ಲಿನ ಘಟನೆಗಳ ಹಿನ್ನೆಲೆಯಲ್ಲಿ ಸೋವಿಯತ್ ವಿದೇಶಾಂಗ ಸಚಿವ ಆಂಡ್ರೇ ಗ್ರೊಮಿಕೊ ಅವರಿಗೆ ನೀಡಿದ ಜ್ಞಾಪಕ ಪತ್ರದಲ್ಲಿ ‘ಸೋವಿಯತ್ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಹಂಗೇರಿಯ ಜನರು ತಮ್ಮದೇ ಆದ ಸರ್ಕಾರವನ್ನು ರಚಿಸಿಕೊಳ್ಳಲು ಅನುಮತಿಸಬೇಕು’ ಎಂದು ಒತ್ತಾಯಿಸಿದ್ದರು. ಆದರೂ ವಿಶ್ವಸಂಸ್ಥೆಯಲ್ಲಿ ಸೋವಿಯತ್ ಆಕ್ರಮಣವನ್ನು ಖಂಡಿಸುವ ಯುಎಸ್ ಪ್ರಾಯೋಜಿತ ನಿರ್ಣಯಕ್ಕೆ ಮತ ಚಲಾಯಿಸಲು ಭಾರತ ನಿರಾಕರಿಸಿತು. ಹೊಸದಿಲ್ಲಿಯು ಸಾಮಾನ್ಯ ಸಭೆಯ ಸರ್ವಸದಸ್ಯರ ಕಾರ್ಯಸೂಚಿಯಲ್ಲಿ ಹಂಗೇರಿಯನ್ ಬಿಕ್ಕಟ್ಟಿನ ಶಾಸನವನ್ನು ವಿರೋಧಿಸಿತು. ನಂತರ ಭಾರತವು ಜೆಕೊಸ್ಲೊವಾಕಿಯಾದ ಸೋವಿಯತ್ ಆಕ್ರಮಣವನ್ನೂ ಸದ್ದಿಲ್ಲದೆ ಒಪ್ಪಿಕೊಂಡಿತು. ಅಂದಿನಿಂದ ಭಾರತ-ರಷ್ಯಾ ಆಪ್ತರಾಷ್ಟ್ರಗಳಾಗಿವೆ. ಮಿಲಿಟರಿ ಸರಕು ಮಾತ್ರವಲ್ಲದೆ ವ್ಯಾಪಾರ-ವಹಿವಾಟಿನ ದೃಷ್ಟಿಯಲ್ಲೂ ಸಂಬಂಧ ಗಟ್ಟಿಯಾಗಿದೆ.

ಭಾರತದ ಬಿಕ್ಕಟ್ಟಿನ ವಿಷಯಕ್ಕೆ ಬರುವುದಾದರೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಲು ಪಾಕಿಸ್ತಾನ ಮುಂದಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಷಯದ ಪ್ರಸ್ತಾಪವಾದರೆ ಯಾವುದೇ ಇತರ ಸ್ನೇಹಿತರನ್ನು ಹೊಂದಿರದ ಕಾರಣ, ಯಾವುದೇ ಪ್ರತಿಕೂಲ ನಿರ್ಣಯವನ್ನು ವೀಟೋ ಮಾಡಲು ಭಾರತಕ್ಕೆ ಸೋವಿಯತ್ ಒಕ್ಕೂಟದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜವಾಹರಲಾಲ್ ನೆಹರು ಅವರನ್ನು ಎಷ್ಟೇ ನಿಂದಿಸಿದರೂ, ನೆಹರು ಅವರ ದೂರದೃಷ್ಟಿಯ ವಿದೇಶಾಂಗ ನೀತಿಯನ್ನು ಈಗ ಅನುಸರಿಸಲೇಬೇಕಾಗಿದೆ. ರಷ್ಯಾದ ಬಗೆಗೆ 1956ರಲ್ಲಿ ಜವಾಹರಲಾಲ್ ನೆಹರು ಮಾಡಿದ್ದ ಆಲೋಚನೆಗಿಂತ ಈಗ ನರೇಂದ್ರ ಮೋದಿ ಭಿನ್ನವಾಗಿರಲು ಸಾಧ್ಯವಿಲ್ಲ. ಮೋದಿ ಬಳಿ ಅಂತಹ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಹಂಗೇರಿ ಬಿಕ್ಕಟ್ಟಿನ ಸಂದರ್ಭದಲ್ಲಿ ಜವಾಹರಲಾಲ್ ನೆಹರು ‘ರಾಜತಾಂತ್ರಿಕ ನಡೆಗಳ ಮೂಲಕ ಬಿಕ್ಕಟ್ಟು ಬಗೆಹರಿಸಲು ಪ್ರಯತ್ನಿಸಿ’ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಿದಂತೆಯೂ, ರಷ್ಯಾಗೆ ಪ್ರತಿರೋಧ ತೋರದಂತೆಯೂ ನಡೆದುಕೊಂಡಿದ್ದಾರೆ. ಅಂದು ನೆಹರು ಹಂಗೇರಿ ವಿಷಯದಲ್ಲಿ ನಡೆದುಕೊಂಡಂತೆ ಇಂದು ಮೋದಿ ಉಕ್ರೇನ್ ವಿಷಯದಲ್ಲಿ ‘ಮಾನವೀಯ ದೃಷ್ಟಿಯಿಂದ ನೆರವು ನೀಡಲು ಸಿದ್ಧ’ ಎಂದು ಹೇಳಿದ್ದಾರೆ. ‘ನಿರ್ಬಂಧಗಳ ಕತ್ತಿ’ ಏಟು ಎಷ್ಟು ಜೋರಾಗಿ ಬೀಳುತ್ತದೆ, ಅಥವಾ ಎಷ್ಟು ಆಳವಾಗಿ ಕತ್ತರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಭಾರತವು ಸ್ವಹಿತಾಸಕ್ತಿ ಬಗ್ಗೆ ಹೆಚ್ಚು ಗಮನಕೊಡಬೇಕು. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರಿಗೆ ಜವಾಹರಲಾಲ್ ನೆಹರು ಹಾಕಿಕೊಟ್ಟ ದಾರಿಯೇ ಮಾದರಿ.