ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣವೇನು ಎಂಬುದನ್ನು ಫಲಿತಾಂಶದ ದಿನದಂದೇ ನಿಖಿಲ್ ಪರೋಕ್ಷವಾಗಿ ಮಾತನಾಡಿದ್ದರು. ಆ ಒಂದು ಸಮುದಾಯ ಸಂಪೂರ್ಣವಾಗಿ ನಮ್ಮ ಕೈಬಿಟ್ಟಿದೆ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದರು.
ಇದೀಗ ಜೆಡಿಎಸ್ ಕಾರ್ಯಕರ್ತರಿಗೆ ಬರೆದಿರುವ ಪತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಜೈ ಶ್ರೀ ರಾಮ್ ಎಂದು ಬರೆದಿರೋದು ಹಲವು ರೀತಿಯ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಅಲ್ಪಸಂಖ್ಯಾತರು ಶಾಕ್ ನೀಡಿದ ಕಾರಣ ಹಿಂದುತ್ವದ ಕಡೆ ವಾಲುವ ಸುಳಿವು ನೀಡಿದೆ ಜೆಡಿಎಸ್.

ಮಾಜಿ ಪ್ರಧಾನಿ ದೇವೇಗೌಡ್ರು ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡಿದ್ರೂ ಕೂಡ ಸಮುದಾಯ ಜೆಡಿಎಸ್ ಪಕ್ಷದ ಪರವಾಗಿ ನಿಲ್ಲಲಿಲ್ಲ. ಹೀಗಾಗಿ ಜಾತ್ಯತೀತ ಸಿದ್ಧಾಂತ ಬದಿಗಿಟ್ಟು ಕಟ್ಟರ್ ಹಿಂದುತ್ವ ತತ್ವ ಅಳವಡಿಸಿಕೊಳ್ಳೋಕೆ ದಳಪತಿಗಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಚನ್ನಪಟ್ಟಣ ಫಲಿತಾಂಶದಿಂದ ನೊಂದಿರುವ ಕಾರಣ, ಬಿಜೆಪಿ ರೀತಿ ಹಿಂದುತ್ವ ಸಿದ್ಧಾಂತ ಅಳವಡಿಸಿಕೊಂಡು ಪಕ್ಷ ಸಂಘಟನೆ ಮಾಡೋದಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಹೀಗಾಗಿ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಜೈಶ್ರೀರಾಮ್ ಎಂಬ ಘೋಷವಾಕ್ಯವನ್ನ ಉಲ್ಲೇಖಿಸಿದ್ದಾರೆ.