ಬೆಂಗಳೂರು: ಜಗದೀಶ್ ಶೆಟ್ಟರ್(Jagadish Shetter) ಅವರು ದೊಡ್ಡ ಶಕ್ತಿಯಾಗಿದ್ದು, ಅವರು ಮತ್ತೆ ಬಿಜೆಪಿ(BJP Karnataka) ಸೇರ್ಪಡೆ ಆಗಿರುವುದರಿಂದ ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ದೊಡ್ಡ ಸಂಚಲನ ಆಗಿದೆ ಎಂದು ಶಾಸಕ ಡಾ. ಅಶ್ವಥ್ ನಾರಾಯಣ(Ashwath Narayan) ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಪಕ್ಷದಲ್ಲಿ ಎಲ್ಲರ ವಿಶ್ವಾಸ ಪಡೆದುಕೊಂಡವರು, ಅವರ ಕಣ ಕಣದಲ್ಲೂ ಭಾರತೀಯ ಜನತಾ ಪಾರ್ಟಿ ಇದೆ. ಯಾವುದೋ ಒಂದು ಕೆಟ್ಟ ಕಾಲದಲ್ಲಿ ನಮ್ಮ ಪಕ್ಷ ಬಿಟ್ಟು ಹೋಗಿದ್ದರು. ಆದರೆ ನಮ್ಮ ಹಿರಿಯ ನಾಯಕರು ಮತ್ತೊಮ್ಮೆ ಮರಳಿ ಗೂಡಿಗೆ ಅಂತ ಆಗಿದೆ. ಅವರು ಪಕ್ಷಕ್ಕೆ ಸೇರ್ಪಡೆಯಿಂದ ಉತ್ತರ ಕರ್ನಾಟಕದಲ್ಲಿ ದೊಡ್ಡ ಸಂಚಲಕ ಉಂಟಾಗಿದೆ ಎಂದರು.
ಇದೇ ವೇಳೆ ಕಾಂಗ್ರೆಸ್ನಿಂದ ಮತ್ತೆ ಬೇರೆಯವರು ಸೇರ್ಪಡೆಯಾಗುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಮುಳುಗುವ ಪಕ್ಷ, ಯಾರು ಅಲ್ಲಿ ಇರಲು ಇಷ್ಟ ಪಡುತ್ತಾರೆ?, ಏನಾದ್ರೂ ಒಳ್ಳೆಯ ಆಡಳಿತ ಕೊಡುವ ಉದ್ದೇಶ ಇದೆಯಾ? ಬರೀ ರಾಜಕೀಯ ಮಾಡುತ್ತಿದ್ದಾರೆ. ಆಡಳಿತಕ್ಕೆ ಬಂದಿರುವ ಅವರು ಅದರ ಮೂಲಕ ತಮ್ಮ ಭಾಷೆಯನ್ನು ತೋರಬೇಕು. ರಾಜ್ಯದಲ್ಲಿ ಆಡಳಿತ ಭಾಷೆಯೇ ಕಾಣುವುದಿಲ್ಲ, ಓಲೈಕೆ ರಾಜಕೀಯ ಮಾಡ್ತಿದ್ದಾರೆ, ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಳು ರಾಮನನ್ನು ನಂಬಲ್ಲ ಅಂತಾರೆ, ನಮ್ಮ ಭಾವನೆಗೆ ಧಕ್ಕೆ ತರುವ ಕೆಲಸ ಮಾಡ್ತಿದ್ದಾರೆ ಎಂದು ಟೀಕಿಸಿದರು.
ಫೆಬ್ರವರಿ 16ರಂದು ಉಪಚುನಾವಣೆ ಇದೆ, ಅದೇ ದಿನ ರಾಜ್ಯ ಸರ್ಕಾರ ಬಜೆಟ್ ಕೂಡ ಮಂಡನೆ ಮಾಡುತ್ತಾರೆ. ಕಾನೂನಿನ ಪ್ರಕಾರ ಅಂದು ಬಜೆಟ್ ಮಂಡನೆ ಮಾಡಲು ಅವಕಾಶ ಇಲ್ಲ. ಆದ್ದರಿಂದ ಚುನಾವಣಾ ಆಯೋಗಕ್ಕೆ ಬಜೆಟ್ ಮುಂದಕ್ಕೆ ಹಾಕಿಸಲು ಮನವಿ ಮಾಡಿದ್ದೇವೆ. ಎರಡು ದಿನಗಳಲ್ಲಿ ತಿಳಿಸುತ್ತೇವೆ ಅಂತ ಹೇಳಿದ್ದಾರೆ, ಇದರ ಬಗ್ಗೆ ಈಗಾಗಲೇ ರಾಜ್ಯಪಾಲರಿಗೂ ದೂರು ನೀಡಿದ್ದೇವೆ ಎಂದರು.