ಬೆಂಗಳೂರು: ಬುಧವಾರ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತ್ತೀಚೆಗೆ ಅಮೆರಿಕದೊಂದಿಗೆ ಅಂತಿಮಗೊಂಡ ಮಧ್ಯಂತರ ವ್ಯಾಪಾರ ಮತ್ತು ಸುಂಕ ಒಪ್ಪಂದ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರ ಕಿಡಿಕಾರಿದರು.

ಕೃಷಿ ಮತ್ತು ಡೈರಿ ಮಾರುಕಟ್ಟೆಗಳನ್ನು ಅಮೆರಿಕದ ಕೃಷಿ ಉತ್ಪನ್ನಗಳಿಗೆ ತೆರೆಯಲು ಒಪ್ಪುವ ಮೂಲಕ ಕೇಂದ್ರ ಸರ್ಕಾರ ಭಾರತ ಮಾತೆಯನ್ನು ಮಾರಾಟ ಮಾಡಿದೆ. ಇದಕ್ಕೆ ಮೋದಿ ಸರ್ಕಾರ ನಾಚಿಕೆಪಡಬೇಕು ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಗುಡುಗಿದ್ದಾರೆ.

ಈ ಒಪ್ಪಂದದೊಂದಿಗೆ, ಅಮೆರಿಕದ ಸರಕುಗಳಿಗೆ ಭಾರತದಲ್ಲಿ ಪ್ರವೇಶ ಸುಲಭಗೊಳಿಸಲಾಗಿದೆ, ಇದರಿಂದ ಸಣ್ಣ ರೈತರು ಮತ್ತು ಕಡಿಮೆ ಸಂಪತ್ತಿನ ರೈತರು ಅಪಾಯಕ್ಕೆ ಸಿಲುಕಿದ್ದಾರೆ. ಯುಎಸ್ ಸುಂಕಗಳು ಮೊದಲು 2025ರೊಳಗೆ ಸರಾಸರಿ 3% ಇದ್ದವು, ಆದರೆ ಈ ತಿಂಗಳ ಒಪ್ಪಂದದ ಅಡಿಯಲ್ಲಿ 18%ಕ್ಕೆ ಏರಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ವ್ಯಾಪಾರ ಮತ್ತು ಸುಂಕ ಒಪ್ಪಂದ ಕುರಿತು ಲೋಕಸಭೆಯಲ್ಲಿ ಉಲ್ಲೇಖಿಸಿದ ರಾಹುಲ್ ಗಾಂಧಿ ʼನೀವು ಭಾರತವನ್ನು ಮಾರಾಟ ಮಾಡಿದ್ದೀರಿ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ರೈತರು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನೀವು ಬಡ ರೈತರಿಗೆ ಹಾನಿ ಮಾಡುವಂತಹ ಕ್ರಮದ ಬಾಗಿಲು ತೆರೆಯಿದ್ದೀರಿ. ಈ ಹಿಂದೆ ಯಾವುದೇ ಪ್ರಧಾನಿ ಈ ರೀತಿಯ ಕ್ರಮ ಕೈಗೊಳ್ಳಿಲ್ಲ, ಇದು ಅಮೇರಿಕಾ ಮುಂದೆ ಭಾರತ ಸಂಪೂರ್ಣ ಶರಣಾಗತಿ. ದುರಂತವೆಂದರೆ ಇದು ಪ್ರಧಾನಿಯೊಬ್ಬರ ಶರಣಾಗತಿಯಲ್ಲ. 1.5 ಬಿಲಿಯನ್ ಭಾರತೀಯರ ಭವಿಷ್ಯವನ್ನು ಅಪಾಯಕ್ಕೆ ಇಟ್ಟಿದ್ದಾರೆ ಎಂದು ಗುಡುಗಿದರು.

ರಾಹುಲ್ ಗಾಂಧಿಯ ಈ ಎಲ್ಲಾ ಹೇಳಿಕೆಗಳು ಭಾರತೀಯ ವೈದ್ಯಕೀಯ, ಆಹಾರ ಮತ್ತು ರೈತ ಸಂಘಟನೆಗಳಲ್ಲಿಯೂ ಆತಂಕ ಮೂಡಿಸಿದೆ. ಕೃಷಿ ಉತ್ಪನ್ನಗಳಿಗೆ ಜಾರಿಗೆ ಬರುವ ಅಮೆರಿಕದ ಒಪ್ಪಂದವು ರೈತರ ಮಾರಾಟದ ಬೆಲೆ, ಉತ್ಪಾದನಾ ವೆಚ್ಚ ಮತ್ತು ಜೀವನೋಪಾಯ ಮೇಲೆ ದೀರ್ಘಕಾಲಿನ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗಿದೆ. ಕೇಂದ್ರ ಸರ್ಕಾರವು ಈ ಕುರಿತು ಇತ್ತಿಚೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, ಆದರೆ ವ್ಯಾಪಾರ ಒಪ್ಪಂದವು ಭಾರತದ ಹೊರರಾಷ್ಟ್ರೀಯ ವ್ಯಾಪಾರ ಚಟುವಟಿಕೆಗಳನ್ನು ಮತ್ತಷ್ಟು ಮುಕ್ತಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದೆ.






