ಬೆಂಗಳೂರಿನ ಐಟಿಐ ಲಿಮಿಟೆಡ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮೂಲಭೂತ ಹಕ್ಕಿಗಾಗಿ ಸಂಘಟನೆ ಮಾಡಿದ್ದಕ್ಕಾಗಿ ಮಹಿಳೆಯರು ಸೇರಿದಂತೆ ಒಟ್ಟು ೮೦ ಕಾರ್ಮಿಕರನ್ನು ಕಾನೂನು ಬಾಹಿರವಾಗಿ ಉದ್ಯೋಗದಿಂದ ತಗೆದುಹಾಕಿರುವ ಪ್ರಸಂಗ ನಡೆದಿದೆ.
ಕಳೆದ ೮ ದಿನದಿಂದ ಐಟಿಐನ ಹೊರಭಾಗದಲ್ಲಿ ತಮ್ಮ ಹಕ್ಕಿಗಾಗಿ ಪ್ರತಿಭಟಿಸುತ್ತಿದ್ದರು. ೩೦ ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಕಾರ್ಮಿಕರನ್ನು ಹಠಾತ್ ಕೆಲಸದಿಂದ ವಜಾಗೊಳಿಸಿದ್ದರಿಂದ ಈಗ ಅವರೆಲ್ಲ ಬೀದಿಪಾಲಾಗಿದ್ದಾರೆ.
ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ದೂರಸಂಪರ್ಕ ಇಲಾಖೆ ಅಡಿಯಲ್ಲಿ ಬರುವ ಐಟಿಐ ಕಾರ್ಖಾನೆಯು ತನ್ನ ೮೦ ಕಾರ್ಮಿಕರಿಗೆ ಡಿಸೆಂಬರ್ ಆರಂಭದಿಂದ ಕೆಲಸ ನಿರಾಕರಿಸಿದೆ. ತರಾತುರಿಯಲ್ಲಿ ಐಟಿಐ ಲಿಮಿಟೆಡ್ ಆಡಳಿತ ಮಂಡಳಿಯು ಹೊಸ ಗುತ್ತಿಗೆದಾರರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಆದರೆ, ತಮ್ಮ ಕಾರ್ಖಾನೆಯಲ್ಲಿ ೫ ರಿಂದ ೩೦ ವರ್ಷಗಳ ವರೆಗೆ ಕೆಲಸ ಮಾಡಿರುವ ಕಾರ್ಮಿಕರನ್ನು ಕೆಲಸದಿಂದ ತಗೆದಿರುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಐಟಿಐ ತಿಳಿಸಿಲ್ಲ.
![](https://pratidhvani.com/wp-content/uploads/2021/12/WhatsApp-Image-2021-12-10-at-2.48.13-PM-2-1-1024x576.jpeg)
ಐಟಿಐನ ಕಾನೂನು ಬಾಹಿರ ಕ್ರಮದ ವಿರುದ್ಧ ಕಳೆದ ೮ ದಿನದಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಮಿಕರನ್ನು ಶುಕ್ರವಾರ ಹೊರಗೆ ತಳ್ಳಲಾಗಿದ್ದು, ಐಟಿಐನ ಎಲ್ಲ ಗೇಟ್ಗಳಿಗೂ ಬೀಗ ಜಡಿಯಲಾಗಿದೆ. ಆದರೂ ಪಟ್ಟು ಬಿಡದೆ ತಮ್ಮ ಕಾನೂನು ಬದ್ಧ ಹಕ್ಕಿಗಾಗಿ ಗೇಟ್ ಬಳಿಯಲ್ಲೇ ಕುಳಿತು ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದ್ದಾರೆ.
ಐಟಿಐಯು ದೇಶದ ಸೇನೆ, ಡಿ.ಆರ್.ಡಿ.ಒ, ಇಸ್ರೋ ಸೇರಿದಂತೆ ಇತರೆ ರಕ್ಷಣಾ ವಲಯದ ಸಂಸ್ಥೆಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಹೊಂದಿದೆ. ಹಲವು ಬಗೆಯ ರಕ್ಷಣಾ ಸಾಮಾಗ್ರಿ ಮತ್ತು ಸಾಧನಗಳನ್ನು ತಯಾರು ಮಾಡಿಕೊಡುತ್ತದೆ. ಈ ಕಾರ್ಮಿಕರು ಇಂತಹ ಸಾಮಾಗ್ರಿ ಮತ್ತು ಸಾಧನಗಳ ಉತ್ಪಾದನೆ ಕಾರ್ಯದಲ್ಲಿ ಇದ್ದರು. ಕೆಲಸ ನಿರಾಕರಿಸಲ್ಪಟ್ಟಿರುವ ಈ ಕಾರ್ಮಿಕರನ್ನು ಖಾಯಂಗೊಳಿಸುವುದಕ್ಕೆ ಸಂಬಂಧ ಪಟ್ಟಂತೆ ಭಾರತ ಸರ್ಕಾರದ ಬೆಂಗಳೂರಿನ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಕಛೇರಿಯಲ್ಲಿ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣ ಚಾಲ್ತಿಯಲ್ಲಿರುವುದ್ದರಿಂದ ಈ ಕಾರ್ಮಿಕರ ಸೇವಾ ಷರತ್ತುಗಳನ್ನು ಬದಲಾಯಿಸಬಾರದೆಂದು ಕಾರ್ಮಿಕ ಆಯುಕ್ತರು ಐಟಿಐ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ಆದರೂ ಐಟಿಐ ಆಡಳಿತ ಮಂಡಳಿಯು ಕಾರ್ಮಿಕ ಆಯುಕ್ತರ ಸೂಚನೆಯನ್ನು ಧಿಕ್ಕರಿಸಿ ಈ ಕಾರ್ಮಿಕರಿಗೆ ಕೆಲಸ ನಿರಾಕರಿಸಿರುವುದು ಕಾರ್ಮಿಕ ಆಯುಕ್ತರ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ಕಾರ್ಮಿಕರ ವಿವಾದದಲ್ಲಿ ಭಾರತ ಸರ್ಕಾರದ ಸಂಪರ್ಕ ಸಚಿವಾಲಯ ಮತ್ತು ಕೇಂದ್ರ ಕಾರ್ಮಿಕ ಇಲಾಖೆಯು ತಕ್ಷಣವೇ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಮತಿ ನೀಡುವಂತೆ ಮತ್ತು ಭವಿಷ್ಯದಲ್ಲಿ ಇಂತಹ ಕಾನೂನು ಬಾಹಿರ ಕ್ರಮಗಳನ್ನು ತೆಗೆದುಕೊಳ್ಳದಂತೆ ಐಟಿಐ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕಿದೆ.