KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತರ ಮನೆಯ ಮೇಲೆ ಆದಾಯ ತೆರಿಗೆ (IT Raid) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುತ್ತಿಗೆದಾರರಾಗಿರುವ ಯು.ಬಿ. ಶೆಟ್ಟಿ ಅವರ ಧಾರವಾಡದ ದಾಸನಕೊಪ್ಪ ಸರ್ಕಲ್ನಲ್ಲಿರುವ ಮನೆಯ ಮೇಲೆ ಐಟಿ ದಾಳಿ ನಡೆದಿದೆ.
ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಆಪ್ತರಾದ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವ್ಗೆ ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮುಖಂಡರಿಬ್ಬರೂ ಯು.ಬಿ. ಶೆಟ್ಟಿ ಮನೆಗೆ ಆಗಮಿಸಿದಾಗ ಅವರನ್ನೂ ಅಧಿಕಾರಿಗಳು ಮನೆಯೊಳಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಗೋವಾದಿಂದ ಬಂದಿರುವ ಐವರು ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.
80 ರ ದಶಕದಿಂದಲೂ ಡಿಕೆ ಶಿವಕುಮಾರ್ಗೆ ಆಪ್ತರಾಗಿರುವ ಯುಬಿ ಶೆಟ್ಟಿ:
ಯು.ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಹೇಳಿಕೆ ನೀಡಿದ್ದು ಮಾಧ್ಯಮದಲ್ಲಿ ಐಟಿ ದಾಳಿ ಸುದ್ದಿ ನೋಡಿ ಬಂದಿದ್ದೇನೆ. ನಮಗೆ ಒಳಗೆ ಹೋಗಲು ಬಿಡಲಿಲ್ಲ. ಬಳಿಕ ಶೆಟ್ಟಿ ಅವರೇ ಫೋನ್ ಮಾಡಿದರು. ಇಬ್ಬರು ಸಾಕ್ಷಿ ಬೇಕು ಅಂತಾ ಕೇಳಿದರು. ಇಬ್ಬರು ಸಾಕ್ಷಿದಾರರನ್ನು ಕೊಟ್ಟಿದ್ದೇವೆ. ಇತ್ತೀಚಿಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದಾರೆ. ಇತ್ತೀಚಿಗೆ ಗುತ್ತಿಗೆ ಕಾಮಗಾರಿ ಬಿಟ್ಟಿದ್ದಾರೆ. 80 ನೇ ಇಸವಿಯಿಂದಲೂ ಡಿಕೆ ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಚುನಾವಣೆಗೆ ಶೆಟ್ಟಿ ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯಾಗಿರಬಹುದು ಎಂದು ತಿಳಿಸಿದ್ದಾರೆ.
ಸಿವಿಲ್ ಕಂಟ್ರಾಕ್ಟರ್ ಆಗಿರುವ ಶೆಟ್ಟಿ, ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಇವರ ಆದಾಯ ಮೂಲ ಕುರಿತು ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ದಾಳಿ ವೇಳೆ ಯು.ಬಿ.ಶೆಟ್ಟಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಡಿ.ಕೆ.ಶಿವಕುಮಾರ ಅವರ ಆಪ್ತರಾಗಿರುವ ಶೆಟ್ಟಿ ಮನೆ ಮೇಲೆ ರಾಜಕೀಯ ದುರುದ್ದೇಶದಿಂದ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಆರೋಪಿಸಿದ್ದಾರೆ.