
ಪ್ರತಿ ವರ್ಷದಲ್ಲಿ ಒಮ್ಮೆ ಮಾತ್ರ ತೆರೆಯುವ ಹಾಸನಾಂಬೆ ದರ್ಶನ ಇಂದಿನಿಂದ ಆರಂಭವಾಗಿದೆ. ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಬಾಗಿಲು ತೆರೆಯುವ ಕಾರ್ಯಕ್ರಮ ನೆರವೇರಿತು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಶಾಸಕ ಸ್ವರೂಪ್, ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಜಿಲ್ಲಾಮಟ್ಟದ ಅಧಿಕಾರಿಗಳು ಭಾಗಿಯಾಗಿದ್ರು.

ಇಂದಿನಿಂದ ನವೆಂಬರ್ 3ರವರೆಗೆ ಭಕ್ತರು ಹಾಸನಾಂಬ ದೇವಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯವನ್ನು ಹೂವಿನಿಂದ ಅಲಂಕರಿಸಲಾಗಿದ್ದು, ರಾಜ್ಯದ ಹಲವೆಡೆಯಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ನಾಲ್ಕು ಎಎಸ್ಪಿ, 12 ಡಿವೈಸ್ಪಿ, 76 ಸಿಪಿಐಗಳು, 126 ಸಬ್ ಇನ್ಸ್ಪೆಕ್ಟರ್ಗಳು ಸೇರಿ ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಸರತಿ ಸಾಲು ಬ್ಯಾರಿಕೇಡ್, ಪಾರ್ಕಿಂಗ್, ನೀರು, ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನೂ ಮಾಡಿರುವ ಜಿಲ್ಲಾಡಳಿತ, ಕಾರ್ಯಕ್ರಮದಲ್ಲಿ ಸ್ಥಳೀಯರನ್ನು ನಿರ್ಲಕ್ಷಿಸಿರುವ ಆರೋಪ ಕೇಳಿ ಬಂದಿದೆ.
ಹಾಸನಾಂಬ ದೇವಸ್ಥಾನದಲ್ಲಿ ವಿತರಣೆ ಮಾಡುವ ಪ್ರಸಾದಕ್ಕಾಗಿ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಸ್ಥಳೀಯರು, ಹಾಸನ ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ತರಾಟೆಗೆ ತೆಗೆದುಕೊಂಡು, ಸ್ಥಳೀಯ ಬಾಣಸಿಗರಿಂದಲೇ ಮಾಡಿಸಬೇಕಿತ್ತು. ಹಾಸನ ಹಾಲು ಒಕ್ಕೂಟದಿಂದ ತುಪ್ಪ ತರಿಸಿಕೊಂಡು ರುಚಿಕರ ಲಡ್ಡು ತಯಾರಿಸಬೇಕಿತ್ತು ಎಂದು ಆಗ್ರಹಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದರು.

ಇನ್ನು ಇಂದು ದೇವಸ್ಥಾನ ತೆರೆಯುವ ಸಂಧರ್ಭದಲ್ಲಿ ಕೇರಳದ ಚಂಡೆ ವಾದ್ಯ ಮಾಡುವ ತಂಡವನ್ನು ಕರೆಸಿ ನೃತ್ಯ ಮಾಡಿಸಲಾಗಿದೆ. ಕರ್ನಾಟಕದಲ್ಲೇ ಹಲವಾರು ಜಾನಪದ ನ್ಯತ್ಯತಂಡಗಳು ಇವೆ. ಅದೂ ಅಲ್ಲದೆ ಕರ್ನಾಟಕದ ಸಂಸ್ಕೃತಿ, ಪರಂಪರೆ ಎತ್ತಿ ಹಿಡಿಯುವ ಕೆಲಸ ಮಾಡಬೇಕಿದ್ದ ಜಿಲ್ಲಾಡಳಿತ ಕೇರಳ ಶೈಲಿಯ ಚಂಡೆ ವಾದ್ಯವನ್ನು ಪ್ರಚುರಪಡಿಸಿದ್ದು ಯಾಕೆ..? ಅನ್ನೋ ಪ್ರಶ್ನೆಗೆ ಜಿಲ್ಲಾಡಳಿತವೇ ಉತ್ತರ ಕೊಡಬೇಕಿದೆ.