ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ, ವೈದ್ಯಕೀಯ ಹಾಗೂ ಮಾನವೀಯ ನೆರವು ನೀಡಿದಕ್ಕಾಗಿ ಇರಾನ್ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ. ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ “ನಿಮ್ಮ ದಯೆ ಮತ್ತು ಮಾನವೀಯತೆಯನ್ನು ನಾವು ಎಂದಿಗೂ ಮರೆಯುವುದಿಲ್ಲ… ಧನ್ಯವಾದಗಳು, ಭಾರತ” ಎಂದು ಟ್ವೀಟ್ ಮಾಡಿ ಧನ್ಯವಾದ ತಿಳಿಸಿದೆ.

ಸಂಘರ್ಷದಿಂದ ಪೀಡಿತರ ನೆರವಿಗಾಗಿ ಕಾಶ್ಮೀರದ ಜನರು ನೀಡಿದ ಸಹಾಯಕ್ಕೂ ಇರಾನ್ ಪ್ರಶಂಸೆ ವ್ಯಕ್ತಪಡಿಸಿದೆ. ನಗದು, ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ರೂಪದಲ್ಲಿ ಜನರು ದೇಣಿಗೆ ನೀಡುತ್ತಿರುವುದು ಮಾನವೀಯತೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ ಎಂದು ರಾಯಭಾರ ಕಚೇರಿ ಹೇಳಿದೆ.ಈಗಾಗಲೇ ಸಂಕಷ್ಟದ ಸಂದರ್ಭದಲ್ಲಿ ಇರಾನ್, ಹಾರ್ಮುಜ್ ಜಲಸಂಧಿಯ ಮೂಲಕ ಭಾರತೀಯ ಹಡಗುಗಳಿಗೆ ಸುರಕ್ಷಿತವಾಗಿ ಸಂಚಾರ ಮಾಡಲು ಅವಕಾಶ ನೀಡಿತ್ತು. ಇದನ್ನು ಎರಡೂ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧದ ಉದಾಹರಣೆಯಾಗಿ ಪರಿಗಣಿಸಲಾಗಿದೆ.

ಕಾಶ್ಮೀರದ ಬುಡ್ಗಾಮ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ದೇಣಿಗೆ ಸಂಗ್ರಹವಾಗಿದ್ದು, ಇಲ್ಲಿ ಶಿಯಾ ಸಮುದಾಯದ ಜನಸಂಖ್ಯೆ ಗಣನೀಯವಾಗಿದೆ. ಸ್ಥಳೀಯರು ನಗದು ಮಾತ್ರವಲ್ಲದೆ ಚಿನ್ನಾಭರಣಗಳು, ಬೆಳ್ಳಿ, ತಾಮ್ರದ ಪಾತ್ರೆಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಸಹ ದಾನ ಮಾಡಿದ್ದಾರೆ.

ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಈ ಮಾನವೀಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷವಾಗಿ ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ದಾನ ಮಾಡುವ ಮೂಲಕ ನೆರವು ನೀಡಿದ್ದಾರೆ. ಕೆಲವು ಕುಟುಂಬಗಳು ಜಾನುವಾರುಗಳನ್ನೂ ದಾನ ಮಾಡಿರುವುದು ಗಮನಾರ್ಹವಾಗಿದೆ.
ಇರಾನ್ ಸರ್ಕಾರ ಈ ನೆರವನ್ನು ಕೇವಲ ವಸ್ತು ಸಹಾಯವಷ್ಟೇ ಅಲ್ಲ, ಬದಲಾಗಿ ಮಾನವೀಯ ಸಂಬಂಧದ ಪ್ರತೀಕ ಎಂದು ಬಣ್ಣಿಸಿದೆ. ಸಂಕಷ್ಟದ ಸಮಯದಲ್ಲಿ ಭಾರತ ತೋರಿದ ಬೆಂಬಲಕ್ಕೆ ಇರಾನ್ ಪುನಃ ಕೃತಜ್ಞತೆ ವ್ಯಕ್ತಪಡಿಸಿದೆ.






