ಕರೋನ ಸೋಂಕಿನ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಮತ್ತು ಕಟ್ಟುನಿಟ್ಟಿನ ಕರೋನ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಮಾಸ್ಕ್ ಹಾಕದೆ ಇರುವವರನ್ನು, ಅನಾವಶ್ಯಕವಾಗಿ ಹೊರ ಬರುವವರನ್ನು ಪೋಲಿಸ್ ಹಿಡಿದು ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳತ್ತಿರುವ ಇಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸದೆ ಮತ್ತು ಕರೋನ ಮಾರ್ಗಸೂಚಿ ಉಲ್ಲಂಘಿಸಿದ ಮೂವರು ಪ್ರಭಾವಿ ರಾಜಕಾರಣಿಗಳ ವಿರುದ್ಧ ಕೇಸು ದಾಖಲಿಸಿ ಯಾವುದೆ ಕ್ರಮ ಕೈಗೊಳ್ಳದೆ ಇರುವುದು ನಿಜಕ್ಕೂ ಬೇಸರದ ಸಂಗತಿ.

ಯಾರು ಆ ಮೂವರು ಪ್ರಭಾವಿ ರಾಜಕಾರಣಿಗಳು? ಏನಿವರ ವಿಷಯ?
ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ರಿಂದ ಕರೋನ ನಿಯಮ ಉಲ್ಲಂಘನೆ

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಮತ್ತು ಅವರ ಕುಟುಂಬದವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಪವಿತ್ರ ಯಾತ್ರಾಸ್ಥಳವಾದ ಯೋಗಿ ನಾರಾಯಣ ಮಂದಿರ ಕೈವಾರ ತಾತಯ್ಯ ಎಂದೇ ಪ್ರಸಿದ್ಧವಾದ ಮಠಕ್ಕೆ ಮೇ 15 ರಂದು ಹೋಗಿ ಅಲ್ಲಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿರುವ ಬಗ್ಗೆ ವರದಿಯಾಗಿತ್ತು.ಅವರ ಹಿತೈಷಿಗಳು ಹಾಗೂ ಪ್ರಮುಖರಾದ ಎಂ ಆರ್ ಜಯರಾಮ್ ಜೊತೆಯಲ್ಲಿ ಭಾಗಿಯಾಗಿದ್ದು ಅಲ್ಲಿ ಯಾವುದೇ ಸಾಮಾಜಿಕ ಅಂತರವಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಎಂ ಆರ್ ಜಯರಾಮ್ ಮತ್ತು ಡಿಕೆ ಶಿವಕುಮಾರ್ ಅವರು ಮಾಸ್ಕನ್ನು ಧರಿಸದೆ ಸಂಭಾಷಣೆ ಮಾಡುತ್ತಿರುವುದು ವಿಡಿಯೋಗಳು ಕೂಡ ವೈರಲ್ ಆಗಿದ್ದವು. ಹಾಗೂ ಮದುವೆ ಮತ್ತು ಶವಸಂಸ್ಕಾರಕ್ಕೆ ಸರ್ಕಾರದ ಸುತ್ತೋಲೆಯಂತೆ ನಿಗದಿತ ಸಂಖ್ಯೆಯಲ್ಲಿ ಜನ ಸೇರಬಹುದು ಎಂಬ ನಿಯಮವಿದ್ದರೂ ಈ ಪ್ರಕರಣದಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಗುಂಪುಗುಂಪಾಗಿ ದೇವಸ್ಥಾನದ ಒಳಗೆ ಹೋಗುತ್ತಿರುವುದು, ಬರುತ್ತಿರುವುದು ಕಾಣಬಹುದಾಗಿದ್ದರೂ ಪೋಲಿಸರು ಯಾವುದೆ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸದೆ ಇರುವುದನ್ನು ನೋಡಬಹುದು. ಈ ಕುರಿತು ಹೆಚ್ಚು ಮಾಹಿತಿಯನ್ನು ನೀಡಿರುವ ಸಾಮಾಜಿಕ ಹೋರಾಟಗಾರ ಎಚ್.ಎಂ ವೆಂಕಟೇಶ್ ಅವರು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅವಸರದಲ್ಲಿ ಪ್ರಕರಣ ದಾಖಲಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೋಲಿಸ್ ಕಮಿಷನರ್ ಗೆ ಮಿಂಚಂಚೆ ಮೂಲಕ ತಿಳಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ನಿಂದ ಕರೋನ ನಿಯಮ ಉಲ್ಲಂಘನೆ

ಮೇ 18ರಂದು ಬಿ.ವೈ. ವಿಜಯೇಂದ್ರ ಕುಟುಂಬ ಸಮೇತರಾಗಿ ಮೈಸೂರಿನ ನಂಜನಗೂಡು ನಂಜುಂಡೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನಡೆಸಿದ್ದರು. ಬಹಳ ಮುಖ್ಯವಾಗಿ ಕೋವಿಡ್ 19 ಕಾನೂನುಗಳನ್ನು ಉಲ್ಲಂಘಿಸಿ ಅನಾವಶ್ಯಕವಾಗಿ ಜಿಲ್ಲೆಯಿಂದ ಜಿಲ್ಲೆಗೆ ಪ್ರವಾಸ ಮಾಡದಂತೆ ರಾಜ್ಯ ಸರ್ಕಾರ ಆದೇಶವಿದೆ ಆದರೆ ವಿಜಯೇಂದ್ರ ಮತ್ತು ಅವರ ಕುಟುಂಬದವರು ಬೇರೆ ಜಿಲ್ಲೆಯಿಂದ ಮೈಸೂರು ಜಿಲ್ಲೆಯ ಗಡಿಯೊಳಗೆ ಹೇಗೆ ಪ್ರವೇಶ ಮಾಡಿದರು, ಯಾವ ಉದ್ದೇಶದಿಂದ ಪ್ರವೇಶ ಮಾಡಿದರು? ಮತ್ತು ಅವರನ್ನು ಮೈಸೂರು ಜಿಲ್ಲೆಯ ಒಳಗೆ ಬಿಟ್ಟುಕೊಳ್ಳಲು ಆಡಳಿತ ವ್ಯವಸ್ಥೆಯಲ್ಲಿ ಹೇಗೆ ಸಾಧ್ಯವಾಯಿತು? ಎಂಬ ಅನೇಕ ಪ್ರಶ್ನೆಗಳು ಸಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ. ಸದ್ಯ ಈ ಪ್ರಕರಣ ಹೈಕೋರ್ಟ್ ನಲ್ಲಿದ್ದು, ಕರೋನ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡು ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ವಿವರಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಜೆಪಿ ಶಾಸಕ ಉಭಯ ಪಾಟೀಲ್ ರಿಂದ ಕರೋನ ಮಾರ್ಗಸೂಚಿ ಉಲ್ಲಂಘನೆ
ಕೊರೋನಾ ಲಾಕ್ಡೌನ್ ಜಾರಿಯಲ್ಲಿದ್ದು, ಈ ನಡುವಲ್ಲೇ ಅಭಯ್ ಪಾಟೀಲ್ ಅವರು ಬೆಳಗಾವಿಯ ಶಿವಾಜಿ ಗಾರ್ಡನ್ ನಲ್ಲಿ ನಿಯಮ ಉಲ್ಲಂಘಿಸಿ ಹೋಮ ಹವನ ನಡೆಸಿದಲ್ಲದೆ ಗಲ್ಲಿಗಲ್ಲಿಗಳಲ್ಲಿ ಶಾಸಕರ ಸಮ್ಮುಖದಲ್ಲಿ ತಳ್ಳುವ ಗಾಡಿಯಲ್ಲಿ ಮನೆಗಳ ಮುಂದೆ ಅಗ್ನಿಕುಂಡದಂತೆ ಮಾಡಿ ಅದರಲ್ಲಿ ಭೆರಣಿ , ಕರ್ಪೂರ, ತುಪ್ಪ, ಗುಗ್ಗಳ, ಬೇವಿನ ಎಲೆಗಳು, ಅಕ್ಕಿ, ಕವಡಿ ಉದ ಹಾಗೂ ಲವಂಗ ಇನ್ನಿತರ ಗಿಡಮೂಲಿಕೆಗಳ ಪದಾರ್ಥಗಳನ್ನ ಹಾಕಿ ಅದರಿಂದ ಬರುವ ಹೊಗೆ ಸಿಂಪಡಣೆ ಮಾಡಿದ್ದಾರೆ. ಈ ಒಂದು ಅವೈಜ್ಞಾನಿಕ ನಡೆಯನ್ನು ಸಮಾಜಿಕ ಜಾಲತಾಣದಲ್ಲೂ ಟೀಕಿಸಿದ್ದರು. ಹೋಮದಿಂದ ಹೆಚ್ಚು ಹೊಗೆ ಹೊರಬರುತ್ತದೆ ಪರಿಸರ ಹಾನಿಯ ಜೊತೆಗೆ ರೋಗಕ್ಕೆ ತುತ್ತಾಗಿರುವ ಜನರ ಉಸಿರಾಟಕ್ಕೂ ಕೂಡ ತೊಂದರೆಯಾಗುತ್ತದೆ ಮತ್ತು ಮಾರ್ಗಸೂಚಿಯ ಪ್ರಕಾರ ಗುಂಪು ಸೇರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಾಮಾನ್ಯ ಜ್ಞಾನ ಇಲ್ಲದ ಶಾಸಕ ಉದಯ್ ವಿರುದ್ಧ ಪೋಲಿಸರು ಯಾವುದೆ ಪ್ರಕರಣವನ್ನು ದಾಖಲಿಸದೆ ಬಿಟ್ಟುರುವುದು ಕಾನೂನಿಗೆ ಮಾಡುವ ಅವಮಾನವೇ ಸರಿ.
ಈ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿರುವ ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಅವರು, ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ ಜಿಲ್ಲೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಶಹಪುರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ಶಹಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಿದಾಗ ಯಾರೂ ದೂರನ್ನು ಕೊಟ್ಟಿಲ್ಲ. ನಾವು ದೂರನ್ನು ದಾಖಲಿಸಿ ಇಲ್ಲ ಎಂದು ಮಾಹಿತಿಯನ್ನು ನೀಡಿರುತ್ತಾರೆ ಎಂದರೆ ಏನು ಅರ್ಥ? ಈ ಎಲ್ಲಾ ವಿಷಯ ತಿಳಿದ ವೆಂಕಟೇಶ್ ಅವರು ಕರೋನ ಮಾರ್ಗಸೂಚಿ ಉಲ್ಲಂಘಸಿದಕ್ಕೆ ಪ್ರಕರಣ ದಾಖಲು ಮಾಡಿ ಎಂದು ಜಿಲ್ಲಾಧಿಕಾರಿ ಮತ್ತು ಬೆಳಗಾವಿ ಕಮಿಷನರ್ ಕಛೇರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಜನ ಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಯ ಮಕ್ಕಳೆ ಈತರದ ನಿಯಮ ಉಲ್ಲಂಘಿಸಿದರೆ ಇನ್ನೂ ಜನ ಸಾಮಾನ್ಯರಿಗೆ ತಿಳಿ ಹೇಳುವವರ್ಯಾರು?
ಜನಸಾಮಾನ್ಯರು ಚುನಾಯಿಸಿ ಕಳಿಸಿದಂತ ನಾಯಕರೇ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸದೆ ಇರುವುದು ಸಾರ್ವಜನಿಕರಿಗೆ ತಪ್ಪು ದಾರಿ ತೋರಿಸಿದಂತಾಗುತ್ತದೆ. ಜನಸಾಮಾನ್ಯರಿಗೊಂದು ಕಾನೂನು ಪ್ರಭಾವಿ ರಾಜಕಾರಣಿಗಳಿಗೊಂದು ಕಾನೂನು ಎಂಬಂತೆ ಆಗುತ್ತದೆ. ಈ ನೆಲದ ಕಾನೂನು ಎಲ್ಲರಿಗೂ ಒಂದೇ ರೀತಿಯಲ್ಲಿ ಅನ್ವಯವಾಗುತ್ತದೆ. ಕರೋನ ಸಮಯದಲ್ಲಿ ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿಯೇ ಇರಿ ಎಂದು ಹೇಳಬೇಕಾದರೆ ಹೀಗೆ ಎಂದೂ ಜನರ ಬಾಯಿಗೆ ತುತ್ತಾಗದ ರೀತಿ ನೋಡಿಕೊಂಡು, ವೈಜ್ಞಾನಿಕವಾಗಿ ಜನರಿಗೆ ಜಾಗೃತಿಗೊಳಿಸಿ ಮುಂದೆ ನಡೆಯುವುದು ಒಳ್ಳೆಯದು.