ಉಕ್ರೇನ್ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದು, ಹಿಂಸಾಚಾರವನ್ನು ಕೊನೆಗೊಳಿಸಲು ನೀಡಿದ ತನ್ನ ಕರೆಯನ್ನು ಪುನರುಚ್ಚರಿಸಿದೆ.
ಉಕ್ರೇನ್ ಮೇಲಿನ ರಷ್ಯಾದ ದಾಳಿಯ ಬಗ್ಗೆ ಚರ್ಚಿಸಲು ಕರೆದಿದ್ದ ಜನರಲ್ ಅಸೆಂಬ್ಲಿಯ ತುರ್ತು ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ ಅವರು, ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಸನ್ನದನ್ನು ಅನುಸರಿಸಲು ಮಾತ್ರ ಬದ್ಧವಾಗಿರುವುದಲ್ಲ, ಜೊತೆಗೆ ಅಂತರರಾಷ್ಟ್ರೀಯ ಕಾನೂನು ಮತ್ತು ಪ್ರಾದೇಶಿಕ ಸಮಗ್ರತೆ, ರಾಜ್ಯಗಳ ಸಾರ್ವಭೌಮತೆಯನ್ನು ಗೌರವಿಸಲು ಸಹ ಬದ್ಧವಾಗಿವೆ ಎಂದು ಯಾವುದೇ ನಿರ್ದಿಷ್ಟ ದೇಶವನ್ನು ಉಲ್ಲೇಖಿಸದೆ ಹೇಳಿದ್ದಾರೆ.
ರಾಜತಾಂತ್ರಿಕತೆಯ ಹಾದಿಗೆ ಮರಳುವುದನ್ನು ಬಿಟ್ಟು ಬೇರೆ ಆಯ್ಕೆ ಇಲ್ಲ ಎಂದು ನನ್ನ ಸರ್ಕಾರ ದೃಢವಾಗಿ ನಂಬುತ್ತದೆ ಎಂದು ಹೇಳಿದ ತಿರುಮೂರ್ತಿ, ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಮತ್ತು ಉಕ್ರೇನ್ ನಾಯಕರೊಂದಿಗಿನ ಇತ್ತೀಚಿನ ಮಾತುಕತೆಯ ಸಂದರ್ಭದಲ್ಲಿ ಇದೇ ವಿಧಾನವನ್ನು ಪ್ರತಿಪಾದಿಸಿದರು ಎಂದು ತಿಳಿಸಿದ್ದಾರೆ.

“ಪ್ರಾಮಾಣಿಕ, ಸತ್ಯ ಮತ್ತು ನಿರಂತರ ಸಂವಾದದ ಮೂಲಕ ಮಾತ್ರ ಎಲ್ಲಾ ಭಿನ್ನಾಭಿಪ್ರಾಯಗಳನ್ನು ನಿವಾರಿಸಬಹುದು ಎಂಬ ನಮ್ಮ ದೃಢವಾದ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ” ಎಂದು ತಿರುಮೂರ್ತಿ ಹೇಳಿದ್ದಾರೆ.
ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸೇರಿದಂತೆ ತನ್ನ ಎಲ್ಲಾ ನಾಗರಿಕರ ಸುರಕ್ಷತೆಯು ಭಾರತದ ಪ್ರಮುಖ ಆದ್ಯತೆಯಾಗಿದೆ, ಗಡಿ ದಾಟುವಿಕೆಗಳಲ್ಲಿನ ಅನಿಶ್ಚಿತ ಪರಿಸ್ಥಿತಿಯು ಜನರ ಗಡಿದಾಟುವಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ನಾಗರಿಕರಿಗೆ ತಮ್ಮ ಗಡಿಗಳನ್ನು ತೆರೆದಿದ್ದಕ್ಕಾಗಿ ಹಾಗೂ ಅವರ ಸ್ಥಳಾಂತರಿಸುವ ಕಾರ್ಯಾಚರಣೆಗಳಿಗೆ ಭಾರತದ ಅಧಿಕಾರಿಗಳಿಗೆ ಸಹಾಯ ಮಾಡಿದ್ದಕ್ಕಾಗಿ ಉಕ್ರೇನ್ ನೆರೆ ದೇಶಗಳಿಗೆ ತಿರುಮೂರ್ತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವವ ನಮ್ಮ ನೆರೆಹೊರೆಯ ದೇಶದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಾಗರಿಕರಿಗೆ ಸಹಾಯ ಮಾಡಲು ನಾವು ಸಿದ್ಧರಾಗಿದ್ದೇವೆ ನಮ್ಮ ಸಹಾಯವನ್ನು ಪಡೆಯಬಹುದು ಎಂದು ಅವರು ಹೇಳಿದ್ದಾರೆ.
ಸದ್ಯ, ಭಾರತವು ಮೊಲ್ಡೊವಾ, ರೊಮೇನಿಯಾ, ಪೋಲೆಂಡ್, ಹಂಗೇರಿ ಮತ್ತು ಸೊಲ್ವಾಕಿಯಾ ಮೊದಲಾದ ಉಕ್ರೇನ್ ನೆರೆ ದೇಶಗಳಿಂದ ಭಾರತೀಯರನ್ನು ತಾಯ್ನಾಡಿಗೆ ಕರೆ ತರುತ್ತಿದೆ
ಕೆಲವೇ ದಿನಗಳ ಹಿಂದೆ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ, ರಷ್ಯಾ ತನ್ನ ಸೇನೆಯನ್ನು ಉಕ್ರೇನ್ನಿಂದ ವಾಪಸ್ ಪಡೆಯಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿತ್ತು. ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣ ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ತುರ್ತು ವಿಶೇಷ ಅಧಿವೇಶನ ನಡೆಸಲು ವಿಶ್ವ ಸಂಸ್ಥೆ ಭದ್ರತಾ ಮಂಡಳಿ ನಿರ್ಣಯ ಕೈಗೊಂಡಿದೆ. ಈ ನಿರ್ಣಯಕ್ಕೆ ಮತದಾನ ಮಾಡುವುದರಿಂದಲೂ ಭಾರತ ಅಂತರವನ್ನು ಕಾಯ್ದುಕೊಂಡಿದೆ.
‘ಉಕ್ರೇನ್ ಉಳಿಯದಿದ್ದರೆ, ವಿಶ್ವಸಂಸ್ಥೆ ಕೂಡ ಉಳಿಯುವುದಿಲ್ಲ’
ಕಳೆದ ವಾರದಿಂದ ಉಕ್ರೇನ್ನಲ್ಲಿ ರಷ್ಯಾದ ಕ್ರಮಗಳನ್ನು ಖಂಡನೆ ಮಾಡಿ ಸೋಮವಾರದಂದು ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ವಿಶ್ವಸಂಸ್ಥೆಗೆ ಉಕ್ರೇನ್ನ ರಾಯಭಾರಿ ಸರ್ಗಿ ಕಿಸ್ಲಿತ್ಸ್ಯಾ ನಿರ್ಣಯವನ್ನು ಬೆಂಬಲಿಸುವಂತೆ ಇತರೆ ಸದಸ್ಯ ದೇಶಗಳನ್ನು ಒತ್ತಾಯಿಸಿದ್ದರ. “ಉಕ್ರೇನ್ ಉಳಿಯದಿದ್ದರೆ, ವಿಶ್ವಸಂಸ್ಥೆಯು ಉಳಿಯುವುದಿಲ್ಲ” ಎಂದು ಅವರು ಹೇಳಿದ್ದರು.
ಆದಾಗ್ಯೂ, ಉಕ್ರೇನ್ನ ಪ್ರತ್ಯೇಕತಾವಾದಿ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ರಕ್ಷಿಸಲು ಮಾಸ್ಕೋ “ಮಿಲಿಟರಿ ಕಾರ್ಯಾಚರಣೆ” ಅನ್ನು ಪ್ರಾರಂಭಿಸಿದೆ ಎಂದು ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ. ರಷ್ಯಾ ಈ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ, ಆದರೆ, ಉಕ್ರೇನ್ ತನ್ನ ಸ್ವಂತ ನಿವಾಸಿಗಳ ವಿರುದ್ಧ ಹಗೆತನವನ್ನು ತೋರುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ನಡುವೆ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಉಕ್ರೇನ್ನ ಸಾರ್ವಭೌಮತ್ವ, ಸ್ವಾತಂತ್ರ್ಯ ಮತ್ತು ಅದರ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಯೊಳಗಿನ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ʼಸೈನಿಕರು ತಮ್ಮ ಬ್ಯಾರಕ್ಗಳಿಗೆ ಹಿಂತಿರುಗಬೇಕಾಗಿದೆ, ನಾಯಕರು ಶಾಂತಿಯತ್ತ ಸಾಗಬೇಕು. ನಾಗರಿಕರಿಗೆ ರಕ್ಷಣೆ ನೀಡಬೇಕು’ ಎಂದು ಅವರು ಕರೆ ನೀಡಿದ್ದಾರೆ.