ರಾಯಚೂರು: ದಕ್ಷಿಣ ಭಾರತದ ಪ್ರಮುಖ ಯಾತ್ರಾ ಸ್ಥಳ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಳೆದ 34 ದಿನಗಳಲ್ಲಿ ದಾಖಲೆಯ ಮುಕ್ಕೋಟಿ ಆದಾಯ ಹರಿದುಬಂದಿದೆ.
ಶ್ರೀ ರಾಘವೇಂದ್ರಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಆ.29 ರಿಂದ ಸೆ.4 ರವರೆಗೆ ನಡೆಯಿತು. ಈ ವೇಳೆ ಲಕ್ಷಾಂತರ ಭಕ್ತರು ಶ್ರೀಮಠದ ದರ್ಶನ ಪಡೆದರು. ಭಕ್ತರ ಉದಾರ ದೇಣಿಗೆಯಿಂದ ಶ್ರೀಮಠದ ಆದಾಯ ಹೊಸ ಮುಕುಟ ಧರಿಸಿದೆ.

ಕರ್ನಾಟಕ ರಾಜ್ಯದ ಶಕ್ತಿ ಯೋಜನೆಯೂ ಮಂತ್ರಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆ ಗಣನೀಯ ಹೆಚ್ಚುವಂತೆ ಮಾಡಿದೆ. ರಜಾ ದಿನಗಳಷ್ಟೇ ಅಲ್ಲದೆ ಸಾಮಾನ್ಯ ದಿನಗಳಲ್ಲೂ ಸಹಸ್ರಾರು ಭಕ್ತರು ರಾಯರ ದರ್ಶನಕ್ಕೆ ದೌಡಾಯಿಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ.
ಶ್ರೀ ಮಠದ ಹುಂಡಿಗಳಲ್ಲಿ ಕಳೆದ 34 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯನ್ನು ಸೋಮವಾರ ಹಾಗೂ ಮಂಗಳವಾರ ಎಣಿಸಲಾಯಿತು. ಮೊದಲ ಬಾರಿ ಗರಿಷ್ಠ 3,82,59,839 ರೂ. ಕಾಣಿಕೆ ಸಂಗ್ರಹವಾಗಿರುವುದು ಪತ್ತೆಯಾಗಿದೆ. ನಗದು ಜತೆಗೆ 53 ಗ್ರಾಂ ಚಿನ್ನ ಮತ್ತು 1200 ಗ್ರಾಂ ಬೆಳ್ಳಿಯನ್ನೂ ಭಕ್ತರು ರಾಯರಿಗೆ ಅರ್ಪಿಸಿದ್ದಾರೆ.
ಜೂನ್ನಲ್ಲಿ2,89,96,295 ರೂ., ಜುಲೈನಲ್ಲಿ3,76,67,469 ರೂ., ಆಗಸ್ಟ್ನಲ್ಲಿ 2,35,62,719 ರೂ. ಕಾಣಿಕೆ ಸಂದಾಯವಾಗಿತ್ತು. ಕಳೆದ ನಾಲ್ಕು ತಿಂಗಳಲ್ಲಿ ಬರೋಬ್ಬರಿ 12,84,86,322 ರೂ. ಕಾಣಿಕೆ ಮಂತ್ರಾಲಯ ಮಠದ ಹುಂಡಿ ಸೇರಿದೆ.