ರಾಜ್ಯದಲ್ಲಿ ಲೋಕಸಮರಕ್ಕೆ ನಾಮಪತ್ರ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು ದೊಡ್ಡ ಬೆಂಬಲಿಗರ ಪಡೆ ಕಟ್ಟಿಕೊಂಡು ಶಕ್ತಿಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸೋದಕ್ಕೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮುಂದಾಗಿದ್ದಾರೆ. ಇತ್ತ ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಸಲು ಬಿ. ಎಸ್.ಯಡಿಯೂರಪ್ಪಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ. ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುವಾಗ ಬಿ.ಎಸ್. ಯಡಿಯೂರಪ್ಪ ಜೊತೆಗಿರಬೇಕೆಂದು ಪ್ರತಿ ಅಭಿಯಾರ್ಥಿಯು ಡಿಮ್ಯಾಂಡ್ ಮಾಡ್ತಿದ್ದಾರೆ.

ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಮೈಸೂರು-ಕೊಡಗು, ತುಮಕೂರು, ಚಿತ್ರದುರ್ಗ, ದಕ್ಷಿಣ ಕನ್ನಡ, ಚಾಮರಾಜನಗರ ಹೀಗೆ ಹಲವು ಕ್ಷೇತ್ರಗಳ ಅಭ್ಯರ್ಥಿಗಳಿಂದ ಒಂದೇ ದಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ಏಪ್ರಿಲ್ 3 ರಂದು ದಿನ ಚೆನ್ನಾಗಿ ಇರುವ ಕಾರಣ , ಅಂದೇ ನಾಮಪತ್ರ ಸಲ್ಲಿಕೆಗೆ ಮುಂದಾಗಿರುವ ಅಭ್ಯರ್ಥಿಗಳು ರಾಜಾಹುಲಿ ಬರಬೇಕು ಅಂತ ಡಿಮ್ಯಾಂಡ್ ಇಟ್ಟಿದಾರೆ.

ಹೀಗಾಗಿ ಒಂದೇ ದಿನವೇ ಎಲ್ಲರೂ ನಾಮಪತ್ರ ಸಲ್ಲಿಕೆ ಅಂದರೆ ಹೇಗೆ? ಎಲ್ಲಿಗೆ ಬರುವುದು? ಎಲ್ಲಿಗೆ ಬಿಡುವುದು? ಎಂದು ಬಿ.ಎಸ್. ಯಡಿಯೂರಪ್ಪ ಚಿಂತೆಗೊಳಗಾಗಿದ್ದಾರೆ. ಏಪ್ರಿಲ್ 3 ರಂದು ಶೋಭನನಾಮ ಸಂವತ್ಸರದ ಉತ್ತರಾಯಣದ ಪಾಲ್ಗುಣ ಮಾಸದ ಕೃಷ್ಣ ಪಕ್ಷದ ನವಮಿ ತಿಥಿ ಪ್ರಯುಕ್ತ ಉತ್ತರ ಆಷಾಢ ನಕ್ಷತ್ರ, ರಾಹುಕಾಲ 12 ಘಂಟೆಯಿಂದ 1:30 ರವರೆಗೆ, ರಾಹುಕಾಲದ ಸಮಯ ಬಿಟ್ಟು, ಅಂದು ನಾಮಪತ್ರ ಸಲ್ಲಿಕೆ ಮಾಡಿದ್ರೆ, ಎದುರಾಳಿಗಳ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ನಂಬಿಕೆ ಈ ತರಾತುರಿಗೆ ಕಾರಣ ಎನ್ನಲಾಗ್ತಿದೆ.

ಎಲ್ಲರೂ ಒಂದೇ ದಿನ ಅಂದರೆ ಕಷ್ಟ.ಬೇರೆ ಬೇರೆ ದಿನಗಳಲ್ಲಿ ನೋಡಿ ಮುಹೂರ್ತ ನಿಗದಿಪಡಿಸಿಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಸೂಚಿಸಿರುವ ಯಡಿಯೂರಪ್ಪ, ಒಂದು ದಿನ ಅಂತರದಲ್ಲಿ ಸಲ್ಲಿಕೆ ಮಾಡಿದ್ರೆ ಬರುವ ಪ್ರಯತ್ನ ಮಾಡೋದಾಗಿ ಅಭ್ಯರ್ಥಿಗಳಿಗೆ ಸೂಚಿಸಿದ್ದರಂತೆ. ಒಟ್ನಲ್ಲಿ ಬಿಜೆಪಿಯಲ್ಲಿ ರಾಜಾಹುಲಿಗೆ ಭಾರೀ ಡಿಮ್ಯಾಂಡ್ ಬಂದಿರೋದಂತೂ ಸುಳ್ಳಲ್ಲ.