ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿ ತನ್ನ ಮೊದಲ ಭೌತಿಕ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನ ಮಂತ್ರಿ “ನಾವು ನಮ್ಮ ಮುಸ್ಲಿಂ ಸಹೋದರಿಯರನ್ನು ತ್ರಿವಳಿ ತಲಾಖ್ ದಬ್ಬಾಳಿಕೆಯಿಂದ ಮುಕ್ತಗೊಳಿಸಿದ್ದೇವೆ. ಮುಸ್ಲಿಂ ಸಹೋದರಿಯರು ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಲು ಪ್ರಾರಂಭಿಸಿದಾಗಿನಿಂದ ಕೆಲವರಿಗೆ ಸಂಕಷ್ಟ ಶುರುವಾಗಿದೆ. ಮುಸ್ಲಿಮ್ ಹೆಣ್ಣು ಮಕ್ಕಳ ಪ್ರಗತಿಯನ್ನು ತಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ಮುಸ್ಲಿಂ ಮಹಿಳೆಯರ ಬೆಂಬಲಕ್ಕೆ ನಿಲ್ಲುತ್ತದೆ” ಎಂದಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅವರ ಸಂಪುಟ ಸಹೋದ್ಯೋಗಿಗಳು, ಅವರದೇ ಪಕ್ಷದ ಮುಖ್ಯಮಂತ್ರಿಗಳು ಈ ಹೇಳಿಕೆಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ಅಷ್ಟೇಕೆ ಹಲವು ಬಾರಿ ಸ್ವತಃ ಮೋದಿಯವರೇ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.
2019 ರಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ನರೇಂದ್ರ ಮೋದಿ ಅವರು “ಪ್ರತಿಭಟನಾಕಾರರ ಉದ್ದೇಶವನ್ನು ಅವರು ಧರಿಸಿರುವ ಬಟ್ಟೆಯಿಂದ ಗುರುತಿಸಬಹುದು” ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು CAA ವಿರುದ್ಧ ಪ್ರತಿಭಟಿಸಲು ಮಹಿಳೆಯರನ್ನು ಕಳುಹಿಸಿದ ಮುಸ್ಲಿಂ ಪುರುಷರು ರಜಾಯಿ ಹೊದ್ದುಕೊಂಡು ಕುಳಿತಿದ್ದಾರೆ ಎಂದಿದ್ದರು. ಸ್ವತಂತ್ರ ಭಾರತದ ಅತ್ಯಂತ ದೊಡ್ಡ ನಾಗರಿಕ ಹಕ್ಕುಗಳ ಆಂದೋಲನಗಳಲ್ಲಿ ಒಂದಾಗಿರುವ ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ ಇಡೀ ಮಹಿಳಾ ಸಮೂಹಕ್ಕೆ ಸ್ವತಂತ್ರ ವ್ಯಕ್ತಿತ್ವ ಇಲ್ಲ ಎಂದು ಆಪಾದಿಸುವ ರೀತಿಯಲ್ಲಿತ್ತು ಅವರ ಹೇಳಿಕೆ.
ಇದೇ ಯೋಗಿ ಆದಿತ್ಯನಾಥ್ ಅವರು 2007-08ರಲ್ಲಿ ವಿರಾಟ್ ಹಿಂದೂ ಚೇತನ ರ್ಯಾಲಿಯನ್ನುದ್ದೇಶಿಸಿ ಮಾತನಾಡಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ವಾಸಿಸುವ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಅವರ ಸಮ್ಮುಖದಲ್ಲೇ ಹಿಂದೂ ಯುವ ವಾಹಿನಿಯ ಸದಸ್ಯರೊಬ್ಬರು “ಇದೀಗ ಅವರ ತಾಯಿ ಮತ್ತು ಹೆಣ್ಣು ಮಕ್ಕಳನ್ನು ಸಮಾಧಿಯಿಂದ ಹೊರತರುವ ಮತ್ತು ಅವರ ಮಕ್ಕಳ ಮೇಲೆ ಅತ್ಯಾಚಾರ ಮಾಡುವ ಸಮಯ. ಇದು ಇಂದಿನ ಅಗತ್ಯವಾಗಿದೆ ಗೆಳೆಯರೇ. ಮತ್ತು ಹಿಂದೂ ಯುವ ವಾಹಿನಿ ಮಾತ್ರ ಇದನ್ನು ಮಾಡಬಹುದು” ಎಂದಿದ್ದರು. ಹಿಂದೂ ಯುವ ವಾಹಿನಿಯನ್ನು ಸ್ಥಾಪಿಸಿದ್ದ ಯೋಗಿ ಅವರು ಕನಿಷ್ಠ ಅದನ್ನು ಖಂಡಿಸುವ ಸೌಜನ್ಯವನ್ನೂ ತೋರಲಿಲ್ಲ.

ಇಷ್ಟು ಮಾತ್ರ ಅಲ್ಲದೆ ಸಾಮಾಜಿಕ ಹೋರಾಟಗಾರರು, ಪತ್ರಕರ್ತರಾಗಿರುವ ಮುಸ್ಲಿಂ ಮಹಿಳೆಯರನ್ನು ‘ಬುಲ್ಲಿ ಬಾಯಿ’ ಮತ್ತು ‘ಸುಲ್ಲಿ ಡೀಲ್ಸ್’ ನಂತಹ ಅಪ್ಲಿಕೇಶನ್ಗಳಲ್ಲಿ ಆನ್ಲೈನ್ನಲ್ಲಿ “ಹರಾಜು” ಮಾಡುವ ಮೂಲಕ ಅತ್ಯಂತ ಕೆಳ ಮಟ್ಟದ ಮಾನಸಿಕತೆಯನ್ನು ಪ್ರದರ್ಶಿಸಿದ ಹಿಂದುತ್ವದ ಕಾಲಾಳುಗಳನ್ನು ಪ್ರತಿರೋಧಿಸುವ ಒಂದೇ ಒಂದು ಹೇಳಿಕೆ ಆಡಳಿತ ಪಕ್ಷದಿಂದ ದಾಖಲಾಗಲಿಲ್ಲ. ಬದಲಾಗಿ ಹಿಂದುತ್ವದ ಪುರುಷಾಹಂಕಾರದ ಈ ಕೃತ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಒಂದು ಸತ್ಕರ್ಮವೆಂಬಂತೆ ಸಂಭ್ರಮಿಸಲಾಯಿತು. ದೇಶದ ನಾಯಕತ್ವವೂ ಈ ಸಂಭ್ರಮವನ್ನು ಮೌನವಾಗಿಯೇ ಅನುಮೋದಿಸಿತು.
ಅದೆಲ್ಲಾ ಇರಲಿ, ಮೋದಿ ಅವರು ಮುಸ್ಲಿಂ ಮಹಿಳೆಯರ ಸಂರಕ್ಷಕ ಎಂದು ಹೇಳುತ್ತಿರುವಾಗಲೇ ಭಜರಂಗದಳದ ಕಾರ್ಯಕರ್ತರು ಕರ್ನಾಟಕದಲ್ಲಿ ಪ್ರತಿಭಟನೆಗಳನ್ನು ನಡೆಸಿ ಹಿಜಾಬ್ ಧರಿಸಿದ ಮುಸ್ಲಿಂ ಹುಡುಗಿಯರನ್ನು ಶಾಲೆಯಿಂದ ದೂರ ಇಡುವಲ್ಲಿ ಯಶಸ್ವಿಯಾದರು. ಈ ಬಗ್ಗೆ ಒಂದೇ ಒಂದು ಖಂಡನೆಯ ಮಾತು ಪ್ರಧಾನಿಯಿಂದ ಬರಲಿಲ್ಲ. ಮುಸ್ಲಿಂ ಮಹಿಳೆಯರನ್ನು ಬೆಂಬಲಿಸುತ್ತೇವೆ, ಮುಸ್ಲಿಂ ಹೆಣ್ಣುಮಕ್ಕಳ ಅವಬಿವೃದ್ಧಿಗೆ ಯತ್ನಸುತ್ತೇವೆ ಎಂದು ಹೇಳುವ ಪ್ರಧಾನಿ ಮತ್ತವರ ಪಕ್ಷದ ಅಜೆಂಡಾದಲ್ಲಿ ನಿರಾಂತಕ ಶಿಕ್ಷಣ, ಘನತೆಯ ಬದುಕಿಗೆ ಖಾತರಿ ಇಲ್ಲದಿದ್ದರೆ ಅಂತಹ ಬೆಂಬಲವೇ ಬೇಡ.