ಚೆನ್ನೈ: ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ತೊರೆದ ಬಳಿಕ ತಮ್ಮ ಹೊಸ ರಾಜಕೀಯ ಸಂಘಟನೆ ‘ವಿ ದಿ ಲೀಡರ್ಸ್’ (We The Leaders) ವೇದಿಕೆಯಲ್ಲಿ ಧರ್ಮ ಮತ್ತು ಜಾತಿ ರಾಜಕೀಯದ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಂಘಟನೆಯ ಮೊದಲ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುವ ರಾಜಕೀಯದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

“ನಾನು ಹಿಂದೂ. ಹಣೆಯ ಮೇಲೆ ವಿಭೂತಿ ಮತ್ತು ಕುಂಕುಮ ಧರಿಸುತ್ತೇನೆ. ಆದರೆ ಮನೆಯಿಂದ ಹೊರಬಂದಾಗ ನನ್ನ ಧರ್ಮ ಮತ್ತು ಜಾತಿಯನ್ನು ಮನೆಯಲ್ಲೇ ಬಿಟ್ಟು, ಎಲ್ಲರನ್ನೂ ಸಮಾನವಾಗಿ ಕಾಣುವ ಸಾಮಾನ್ಯ ವ್ಯಕ್ತಿಯಾಗಿ ಜನರ ಮುಂದೆ ನಿಲ್ಲುತ್ತೇನೆ. ಜನಸೇವೆಗೆ ಧರ್ಮ ಅಥವಾ ಜಾತಿಯನ್ನು ಪ್ರದರ್ಶಿಸುವ ಅಗತ್ಯವಿಲ್ಲ,” ಎಂದು ಅಣ್ಣಾಮಲೈ ಹೇಳಿದರು. ಅವರು ಮುಂದುವರಿದು, “ನಿಜವಾದ ಹಿಂದೂ ಎಲ್ಲರನ್ನು ಸಮಾನವಾಗಿ ಕಾಣುತ್ತಾನೆ. ಯಾರೂ ಶ್ರೇಷ್ಠರಲ್ಲ, ಯಾರೂ ಕೀಳಲ್ಲ. ಎಲ್ಲರೂ ಒಟ್ಟಾಗಿ ಮುನ್ನಡೆಯಬೇಕು ಎಂಬುದೇ ನನ್ನ ಹಿಂದೂ ತತ್ವ,” ಎಂದು ಹೇಳಿದರು.

ಈ ವೇಳೆ ‘ವಿ ದಿ ಲೀಡರ್ಸ್’ ಸಂಘಟನೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳಲಿದೆ ಎಂದು ಅಣ್ಣಾಮಲೈ ಘೋಷಿಸಿದರು. ಸಂಘಟನೆಯ ಉದ್ದೇಶ ಆಡಳಿತ, ಜನಸೇವೆ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಆದ್ಯತೆ ನೀಡುವುದಾಗಿದ್ದು, ಧರ್ಮ ಸಂಘಟನೆಯ ವ್ಯಾಪ್ತಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲ್ಲಾಚಿಯ ಈ ಸಮಾವೇಶವು ಬಿಜೆಪಿ ತೊರೆದ ನಂತರ ಅಣ್ಣಾಮಲೈ ಅವರ ಮೊದಲ ಪ್ರಮುಖ ಸಾರ್ವಜನಿಕ ರಾಜಕೀಯ ಕಾರ್ಯಕ್ರಮವಾಗಿದ್ದು, ಅವರ ಹೊಸ ರಾಜಕೀಯ ನಿಲುವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.






