ರಾಜ್ಯದಲ್ಲಿ ಒಂದೂವರೆ ಕೋಟಿ ಜನ ಪಂಚಮಸಾಲಿ ಸಮುದಾಯದವರಿದ್ದೇವೆ. ಅದರಲ್ಲಿ ಒಟ್ಟು ಮತದಾರರ ಪೈಕಿ 25ಲಕ್ಷ ಕ್ಕೂ ಹೆಚ್ಚು ಮಹಿಳಾ ಮತದಾರರಿದ್ದು, ಸರ್ಕಾರ ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದ ಸೌಲಭ್ಯ ಪಡೆಯಲು 2ಎ ಮೀಸಲಾತಿ ನೀಡದಿದ್ದರೆ ಮತದಾನ ಬಹಿಷ್ಕಾರಕ್ಕೂ ಹಿಂಜರಿಯುವುದಿಲ್ಲ ಎಂದುಪಂಚಮಸಾಲಿ ಸಮುದಾಯದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ ಎಚ್ಚರಿಸಿದರು.
ಗದಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲಸಂಗಮದ ಪೂಜ್ಯ ಬಸವಯ ಜಯ ಮೃತ್ಯುಂಜಯ ಶ್ರೀಗಳು ಕಳೆದ ಜೂ.27 ರಂದು ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿಗಳ ಮನೆ ಎದುರು ಧರಣಿಗೆ ನಿರ್ಧರಿಸಿದ್ದರು. ಆದರೆ, ಸರ್ಕಾರದ ಪಾಲುದಾರರಾಗಿರುವ ಸಚಿವರು, ಸರ್ಕಾರ ಹಾಗೂ ಮುಖ್ಯಮಂತ್ರಿಗಳ ನಿಲುವನ್ನು ಸ್ಪಷ್ಟಪಡಿಸಿ, ಸಮಯ ಕೇಳಿದ್ದಾರೆ. ಇದೀಗ ಬರುವ ಆಗಷ್ಟ ಅಂತ್ಯದೊಳಗೆ ಮೀಸಲಾತಿ ನೀಡದಿದ್ದರೆ ಹೋರಾಟ ನಿರಂತರವಾಗಿರಲಿದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಮಹಿಳಾ ಸಂಘಟನೆಗಾಗಿ ಶ್ರಾವಣ ಮಾಸದಲ್ಲಿ ಉಡಿ ತುಂಬುವ, ಅರಿಷಿಣ-ಕುಂಕುಮ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಮಹಿಳಾ ಆರ್ಥಿಕ ಸಬಲತೆ ಬಗ್ಗೆಯೂ ಜಾಗೃತಿ ಮೂಡಿಸುತ್ತೇವೆ ಎಂದರು.

ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಆಗಷ್ಟ ವೇಳೆಗೆ 2ಎ ಮೀಸಲಾತಿ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾದೀತು. ಜೊತೆಗೆ ಹಾಲುಮತ ಸಮಾಜದ ಬೇಡಿಕೆ ಹಾಗೂ ಎಸ್ಟಿ ಮೀಸಲಾತಿ ಸಹ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.