ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ಮಾಡಿಕೊಳ್ತಿದೆ. ಎರಡು ಆಯಾಮದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದ್ದು, ಒಂದು ಕಾಂಗ್ರೆಸ್ ಪಕ್ಷಕ್ಕೆ ಯಾರೆಲ್ಲಾ ಸೇರ ಬಯಸುತ್ತಾರೆ ಅವರನ್ನು ಪಕ್ಷಕ್ಕೆ ನೇರವಾಗಿಯೇ ಸೇರ್ಪಡೆ ಮಾಡಿಕೊಳ್ಳುವುದು. ಎರಡನೇ ಲೆಕ್ಕಾಚಾರದಲ್ಲಿ ಯಾರೆಲ್ಲಾ ಸದ್ಯಕ್ಕೆ ಪಕ್ಷ ಸೇರ್ಪಡೆ ಸಾಧ್ಯವಿಲ್ಲ ಎನ್ನುವ ನಾಯಕರನ್ನು ಪರೋಕ್ಷವಾಗಿ ಸೆಳೆದು ಲೋಕಸಭಾ ಚುನಾವಣೆಯಲ್ಲಿ ಬೆಂಬಲ ಪಡೆದುಕೊಳ್ಳುವುದು ಆಗಿದೆ. ಮೊದಲಿಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದ ಶಾಸಕರನ್ನು ಸೆಳೆಯುವ ಪ್ರಕ್ರಿಯೆ ಹೆಚ್ಚು ಕಡಿಮೆ ಶುರುವಾಗಿದೆ. ಆದರೆ ಬಿಜೆಪಿ ನಾಯಕರು ಮಾತ್ರ ನಾನು ಹೋಗಲ್ಲ ನಾನು ಹೋಗಲ್ಲ ಎನ್ನುತ್ತಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ BJP ಶಾಸಕ ಮುನಿರತ್ನ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಹೋಗಲ್ಲ, ಕಳೆದ ಬಾರಿ ನನ್ನನ್ನು ಸೋಲಿಸಲು ಭಾರೀ ಪ್ರಯತ್ನ ಮಾಡಿದ್ರು. ಉಳಿದೆಲ್ಲಾ ಕ್ಷೇತ್ರಗಳ ಜನರು ಬಂದರೂ ಭೇಟಿ ಮಾಡದ ಡಿ.ಕೆ ಶಿವಕುಮಾರ್, ಆರ್.ಆರ್ ನಗರ ಕ್ಷೇತ್ರದಿಂದ ಯಾರೇ ಬಂದರೂ ಭೇಟಿ ಮಾಡುತ್ತಾರೆ ಎಂದಿದ್ದಾರೆ. ಇನ್ನು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದು, ಬಾಂಬೆ ಟೀಂ ಕಾಂಗ್ರೆಸ್ ಸೇರುವ ವಿಚಾರ ಮಾಧ್ಯಮಗಳಿಂದ ಗೊತ್ತಾಗಿದೆ. ನಾನು ಯಾವುದೇ ಸಭೆ, ಸಮಾರಂಭ ಅಥವಾ ಚರ್ಚೆಗಳಲ್ಲಿ ಭಾಗವಹಿಸಿಲ್ಲ. ಅಂತಹ ಪರಿಸ್ಥಿತಿ ಬಂದಾಗ ಕ್ಷೇತ್ರದ ಜನರನ್ನ ಬಿಟ್ಟು ರಾಜಕಾರಣ ಮಾಡೋಕಾಗಲ್ಲ. ಅಂತಿಮವಾಗಿ ನಮ್ಮ ಹಣೆಬರಹ ಬರೆಯೋದು ಕ್ಷೇತ್ರದ ಜನರು. ಪ್ರಮುಖವಾದ ಯಾವುದೇ ನಿರ್ಣಯವನ್ನ ಕ್ಷೇತ್ರದಲ್ಲಿ ಚರ್ಚೆ ಮಾಡದೇ ಮಾಡೋಕಾಗಲ್ಲ ಎಂದಿದ್ದಾರೆ. ಅಂದರೆ ಬಿಜೆಪಿಯನ್ನು ಬಿಟ್ಟು ಹೋಗುವುದಾದರೆ ಕ್ಷೇತ್ರದ ಜನರ ಜೊತೆಗೆ ಚರ್ಚಿಸಿ ನಿರ್ಧಾರ ಎಂದಿದ್ದಾರೆ.
ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಸ್ಥಳೀಯ ಬಿಜೆಪಿ ನಾಯಕರಿಂದ ನನಗೆ ತೊಂದರೆಗಳಾಗುತ್ತಿವೆ. ಕಳೆದ ಬಾರಿ ಚುನಾವಣೆಯಲ್ಲಿ ಮೂಲ ಬಿಜೆಪಿ ನಾಯಕರು ಹಾಗು ಕಾರ್ಯಕರ್ತರು ನನ್ನನ್ನು ಸೋಲಿಸುವುದಕ್ಕೆ ಭಾರೀ ಯತ್ನ ನಡೆಸಿದರು. ನಾನು ಈ ಬಗ್ಗೆ ರಾಜ್ಯ ಕಮಿಟಿಗೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ನನಗೆ ಅಸಮಾಧಾನವಿದೆ ಎಂದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿದ್ದ 14 ಜನ ಕಾಂಗ್ರೆಸ್ ಶಾಸಕರಲ್ಲಿ 9 ಜನರು ಸೋಲುಂಡಿದ್ದು, ಅವರನ್ನು ನೇರವಾಗಿ ಕಾಂಗ್ರೆಸ್ಗೆ ಸೆಳೆಯುವ ಕಸರತ್ತು ನಡೆದಿದೆ. ಅದರ ಜೊತೆಗೆ ಮಹಾಲಕ್ಷ್ಮೀ ಲೇಔಟ್ನ ಗೋಪಾಲಯ್ಯರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆದಿದ್ದು, ಬಿಬಿಎಂಪಿ ಚುನಾವಣೆ ಬಳಿಕ ಪಾಲಿಕೆಯಲ್ಲಿ ಮೇಯರ್ ಆಮೀಷ ಒಡ್ಡಲಾಗಿದೆ ಎನ್ನಲಾಗ್ತಿದೆ.
ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್, ಬಿಜೆಪಿ ನಾಯಕರೇ ನನ್ನನ್ನ್ನು ಪಕ್ಷದಿಂದ ಹೊರ ಹಾಕುವ ಪರಿಸ್ಥಿತಿ ಇದೆ ಎಂದು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಬಳಿಕ BJP ನಾಯಕರು ಕಂಗಾಲಾಗಿದ್ದು, ನಳೀನ್ ಕುಮಾರ್ ಕಟೀಲ್, ಸಿ.ಟಿ ರವಿ, ಸೇರಿದಂತೆ ಬಹುತೇಕ ನಾಯಕರು ಕರೆ ಮಾಡಿ ಮನವೊಲಿಕೆ ಕಸರತ್ತು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಅಧಿಕಾರ ಮತ್ತು ಹಳೇ ಕೇಸ್ಗಳ ಸಂಬಂಧ ಯಾವುದೇ ಬಿಕ್ಕಟ್ಟಿಗೆ ಸಿಲುಕುವ ಮನಸ್ಸಿಲ್ಲದ ಬಿಜೆಪಿ ನಾಯಕರು ಹಾಗು ಕಾಂಗ್ರೆಸ್ನಿಂದ ಬಿಜೆಪಿ ಸೇರ್ಪಡೆಯಾಗಿ ಸೋಲುಂಡು ಮಾಜಿ ಶಾಸಕರಾಗಿರುವ ಡಾ ಸುಧಾಕರ್ ಸೇರಿದಂತೆ ಬಹುತೇಕರು ಮರಳಿ ಕಾಂಗ್ರೆಸ್ಗೆ ವಾಪಸ್ ಬರುವುದು ನಿಚ್ಛಳ ಆಗುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದ ಹಾಗೆ ಕೆಲವರು ಕಾಂಗ್ರೆಸ್ಗೆ ವಾಪಸ್ ಆದರೆ ಇನ್ನೂ ಕೆಲವರು ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲಿಸುವ ಸಾಧ್ಯತೆಯಿದೆ.
ಕೃಷ್ಣಮಣಿ