ತಮ್ಮನ್ನು ಬಿಜೆಪಿ ವಕ್ತಾರ ಎಂದು ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ (ಆಗಸ್ಟ್ 15) ತಿರುಗೇಟು ನೀಡಿದ್ದಾರೆ. ನಾನು ಆರೂವರೆ ಕೋಟಿ ಕನ್ನಡಿಗರ ವಕ್ತಾರ ಎಂದು ಹೇಳಿದ್ದಾರೆ.
ಜಾತ್ಯತೀತ ಜನತಾದಳ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಚ್.ಡಿ.ಕುಮಾರಸ್ವಾಮಿ ಭಾಷಣ ಮಾಡಿದರು.
“ನಾನು ಜನರ ವಕ್ತಾರನೇ ಹೊರತು ಯಾವುದೇ ಪಕ್ಷದ ವಕ್ತಾರ ಅಲ್ಲ. ಅವರು ನನ್ನನ್ನು ಪ್ರತಿಪಕ್ಷ ಸ್ಥಾನದಲ್ಲಿ ಇರಿಸಿದ್ದಾರೆ. ಅವರ ಪರವಾಗಿ ಸರ್ಕಾರವನ್ನು ಪ್ರಶ್ನಿಸುವುದೇ ನನ್ನ ಕೆಲಸ ಹಾಗೂ ಜನರ ಪರವಾಗಿ ನಾನು ದನಿಯೆತ್ತಲೇ ಬೇಕಿದೆ, ಅವರ ಕಾವಲುಗಾರನಾಗಿ ನಾನು ಕೆಲಸ ಮಾಡುತ್ತೇನೆ. ನನ್ನ ದನಿಯನ್ನು ಉಡುಗಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಎಚ್.ಡಿ.ಕಮಾರಸ್ವಾಮಿ ಗುಡುಗಿದರು.
ಅಸಮಾನತೆಯ ಗ್ಯಾರಂಟಿ ನೀಡಿದ್ದಾರೆ
“ಹಿಂದೆ ಇದೇ ಕಾಂಗ್ರೆಸ್ ಪಕ್ಷದವರು ದೇಶದಲ್ಲಿ ಗರೀಬಿ ಹಠಾವೋ ಮಾಡುತ್ತೇವೆ ಎಂದರು. 1971ರಲ್ಲಿ ಮೊಳಗಿದ ಈ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಈಗ 77ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಿದ್ದಾಗಲೂ ಬಡತನ ನಿವಾರಣೆ, ಪುಕ್ಕಟೆ ವಿಷಯಗಳ ಬಗ್ಗೆಯೇ ಮಾತನಾಡಲಾಗುತ್ತಿದೆ. ಹಾಗಿದ್ದರೆ ಹಿಂದೆ ಮಾಡಿದ ಘೋಷಣೆಗಳು, ಹಮ್ಮಿಕೊಂಡ ಕಾರ್ಯಕ್ರಮಗಳೆಲ್ಲವೂ ಎಲ್ಲಿ ಹೋದವು” ಎಂದು ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.
“ಕಾಂಗ್ರೆಸ್ ಪಕ್ಷದವತು ಸಮಾನತೆ ತರುತ್ತೇವೆ ಎಂದು ಹೇಳಿದ್ದಾರೆ. ಯಾವುದರಲ್ಲಿ ಸಮಾನತೆ ತರುತ್ತಾರೆ ಇವರು? ಪುಕ್ಕಟೆ ಕೊಡುವ ಮೂಲಕ ಎಲ್ಲರೂ ತಮ್ಮ ಮುಂದೆ ಕೈ ಒಡ್ಡುವಂತೆ ಮಾಡಿದ್ದಾರೆ. ದುಡಿಯುವ ಕೈಗಳಿಗೆ ಶಕ್ತಿ ತುಂಬುವ ಬದಲು ಅವರು ಕೈ ಚಾಚಿ ನಿಲ್ಲುವಂತೆ ಮಾಡಿದ್ದಾರೆ. ಜನರನ್ನು ಕೈಯೊಡ್ಡಿ ನಿಲ್ಲಿಸುವ ವಿಚಾರದಲ್ಲಿ ಇವರು ಸಮಾನತೆ ಸಾಧಿಸುತ್ತಿದ್ದಾರೆ. ಇದಕ್ಕಿಂತ ದುಸ್ಥಿತಿ ಇನ್ನೇನಿದೆ” ಎಂದು ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ. ನಾಡಿನ ಜನರು ತಮ್ಮ ರಕ್ತ ಸುರಿಸಿ ಖಜಾನೆ ತುಂಬುತ್ತಿದ್ದಾರೆ. ಹಿಂದೆ ಯಾವುದಾದರೂ ಕಾರ್ಯಕ್ರಮ ಬಂದರೆ ಹಣವನ್ನು ಎಲ್ಲಿಂದ ತರುವುದು? ಎನ್ನುವ ಪ್ರಶ್ನೆ ಇರುತ್ತಿತ್ತು. ಈಗ ಸಂಪತ್ತಿಗೆ ಕೊರತೆ ಇಲ್ಲ. ಆದರೆ, ಇರುವ ಹಣವನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ ಎಂದು ಆಳುವ ಮಂದಿಯನ್ನು ಕೇಳಬೇಕಾದ ಸ್ಥಿತಿ ಬಂದಿದೆ” ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆಯ ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
“ಸ್ವಾತಂತ್ರ್ಯಪೂರ್ವದಲ್ಲಿ ಒಂದೇ ಒಂದು ಈಸ್ಟ್ ಇಂಡಿಯಾ ಕಂಪನಿ ಇತ್ತು. ಈಗ ಹೆಜ್ಜೆಹೆಜ್ಜೆಗೂ ಅಂಥಾ ಕಂಪನಿಗಳು ಕಾಣುತ್ತಿವೆ. ರಾಷ್ಟ್ರೀಯ ಪಕ್ಷಗಳು ಈಸ್ಟ್ ಇಂಡಿಯಾ ಕಂಪನಿಗಳಂತೆ ಜನರನ್ನು ಸುಲಿಗೆ ಮಾಡುತ್ತಿವೆ. ಈ ದೇಶದ ಸಂಪತ್ತಿಗೆ ಶಕ್ತಿ ತುಂಬುವ ಕೆಲಸವನ್ನು ಕನ್ನಡಿಗರು ಮಾಡುತ್ತಿದ್ದಾರೆ. ತೆರಿಗೆ ಸಂಗ್ರಹ ಮಾಡಿ ಕೇಂದ್ರದ ಖಜಾನೆ ತುಂಬುವ ಎರಡನೇ ಸಂಪದ್ಭರಿತ ರಾಜ್ಯವಾಗಿದೆ ಕರ್ನಾಟಕ. ಆದರೆ, ಆದರೆ ನಮಗೆ ಆಗುತ್ತಿರುವ ಅನ್ಯಾಯ ಬಗ್ಗೆ ದನಿ ಎತ್ತುವವರು ಯಾರು? ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿ ಸೇರಿ ಪಕ್ಷದ ನಗರ ಘಟಕದ ಅಧ್ಯಕ್ಷರಾದ ಎಚ್.ಎಂ.ರಮೇಶ್ ಗೌಡ, ಪಕ್ಷದ ಹಿರಿಯ ನಾಯಕರಾದ ನಾರಾಯಣ ರಾವ್, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ.ಶರವಣ ಸೇರಿ ಅನೇಕ ನಾಯಕರು, ಕಾರ್ಯಕರ್ತರು, ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.