ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ಚರ್ಚೆ ಮುಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಯಾರು ಎಂಬುದು. ಇದೇ ಕಾರಣಕ್ಕಾಗಿ ಹಿರಿಯ ನಾಯಕರು ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಘಟನೆಗಳು ನಡೆದಿದ್ದವು. ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಮತ್ತೆ ಸೋನಿಯಾ ಗಾಂಧಿಗೆ ಪೂರ್ಣಾವಧಿ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ.

ಹೌದು, ಕಾಂಗ್ರೆಸ್ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಎದ್ದಿದ್ದ ಗೊಂದಲಕ್ಕೇ ಕೊನೆಗೂ ತೆರೆಬಿದ್ದಿದೆ. ಎಲ್ಲಾ ಟೀಕೆ ಟಿಪ್ಪಣಿಗಳಿಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ತೆರೆ ಎಳೆದಿದ್ದಾರೆ. ಕಾಂಗ್ರೆಸ್ನಲ್ಲಿ ನಾನೇ ಪೂರ್ಣಾವಧಿ ಅಧ್ಯಕ್ಷೆ ಎಂದು ಹೇಳುವ ಮೂಲಕ ಪಕ್ಷದ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.
2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ಕಾಂಗ್ರೆಸ್ ನಾಯಕನಿಲ್ಲದೆ ಪರದಾಡಬೇಕಾಯ್ತು. ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮುಂದವರಿದರೂ ಪೂರ್ಣ ಪ್ರಮಾಣದ ಅಧ್ಯಕ್ಷ ಸ್ಥಾನಕ್ಕಾಗಿ ಹಿರಿಯ ನಾಯಕರು G23 ಒಕ್ಕೂಟ ರಚಿಸಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧವೇ ತಿರುಗಿ ಬಿದ್ದಿದ್ದರು.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿಯ ರಾಜೀನಾಮೆ ಬಳಿಕ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರಿದಿದ್ದರು. ಆದರೂ, ಕಳೆದೊಂದು ವರ್ಷದಿಂದ ಪಕ್ಷದ ನಾಯಕತ್ವದ ಬಗ್ಗೆ ಜಿ-23 ನಾಯಕರು ಪ್ರಶ್ನೆಗಳನ್ನ ಎತ್ತಿದ್ದರು. ಇದು ಪಕ್ಷದಲ್ಲಿ ಹಲವು ಗೊಂದಲಗಳನ್ನ ಸೃಷ್ಟಿಸಿತ್ತು. ಸದ್ಯ ಈ ಎಲ್ಲಾ ಗೊಂದಲಗಳಿಗೂ ಇಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ತೆರೆ ಎಳೆದಿದ್ದಾರೆ.
ಶನಿವಾರ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಾಯ್ತು. ಸಭೆಯಲ್ಲಿ ವೇಣುಗೋಪಾಲ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲ, ಎ.ಕೆ. ಆ್ಯಂಟನಿ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಲವು ಮುಖಂಡರು ಭಾಗಿಯಾಗಿದ್ರು.
ಪ್ರಸ್ತುತ ರಾಜಕೀಯ ಸ್ಥಿತಿಗತಿಗಳ ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆ ಬಗ್ಗೆ ಚರ್ಚಿಸಲಾಯ್ತು. ಅಲ್ಲದೆ ಪಕ್ಷದ ಪೂರ್ಣ ಅವಧಿಯ ಅಧ್ಯಕ್ಷರ ನೇಮಕಾತಿ ವಿಚಾರವೂ ಚರ್ಚೆಗೆ ಬಂತು. ಈ ವೇಳೆ ಪಕ್ಷದ ಪೂರ್ಣಾವಧಿ ಅಧ್ಯಕ್ಷೆಯಾಗಿ ನಾನೇ ಮುಂದುವರಿಯೋದಾಗಿ ಹೇಳೋ ಮೂಲಕ ಸೋನಿಯಾಗಾಂಧಿ ಇದ್ದ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಇದಕ್ಕೆ ಎಲ್ಲರೂ ಒಮ್ಮತದ ಒಪ್ಪಿಗೆಯೂ ನೀಡಿದ್ದಾರೆ.

ಸದ್ಯ ಕಳೆದೊಂದು ವರ್ಷದಿಂದ ಪಕ್ಷದ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಎದ್ದಿದ್ದ ಮಹಾ ಬಿಕ್ಕಟ್ಟಿಗೆ ಕೊನೆಗೂ ಸೋನಿಯಾ ಗಾಂಧಿ ಉತ್ತರ ಕೊಟ್ಟಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಧ್ವನಿ ಎತ್ತಿದ್ದ ಜಿ 23 ನಾಯಕರಿಗೂ ಖಡಕ್ ಸಂದೇಶವನ್ನೂ ಕೊಟ್ಟಿದ್ದಾರೆ.
2022ರ ಅಕ್ಟೋಬರ್ವರೆಗೂ ನಾನೇ ಕಾಂಗ್ರೆಸ್ ಅಧ್ಯಕ್ಷೆಯಾಗಿರುತ್ತೇನೆ. ಸುಮ್ಮನೆ ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ಸಂದೇಶ ರವಾನಿಸೋದು ಬೇಡ. ಸದ್ಯ ಎಲ್ಲ ಸಮಸ್ಯೆಗಳೂ ಬಗೆಹರಿದಿದ್ದು, ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಪಕ್ಷದಲ್ಲಿ ನಾಯಕರು ಶಿಸ್ತು, ನಿಯಮ ಪಾಲಿಸಿ ಬೇಗುದಿ ಬಿಟ್ಟು ಪಕ್ಷದ ಪರ ಕೆಲಸ ಮಾಡಬೇಕು. ಪಕ್ಷ ಸಂಘಟನೆಗೆ ನಾವೆಲ್ಲರೂ ಸೇರಿ ಒತ್ತು ನೀಡಬೇಕಿದೆ. ಪಕ್ಷ, ಆಂತರಿಕ ಚುನಾವಣೆ ಎದುರಿಸಲು ಸಿದ್ಧವಿದ್ದು, ಒಗ್ಗಟ್ಟು ಹಾಗೂ ಪಕ್ಷದ ಹಿತಾಸಕ್ತಿಯ ದೃಷ್ಟಿಯಿಂದ ಎಲ್ಲರು ಕೆಲಸ ಮಾಡಬೇಕಿದೆ ಅಂತಾ ಸೋನಿಯಾ ತಮ್ಮ ನಾಯಕರಿಗೆ ಸಂದೇಶವನ್ನ ರವಾನಿಸಿದ್ದಾರೆ.
ಅಂತೂ ದೀರ್ಘ ಕಾಲದಿಂದ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಎದ್ದಿದ್ದ ಬಹುದೊಡ್ಡ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕಡ್ಡಿ ಮುರಿದಂತೆ ನಾನೇ ಪೂರ್ಣಾವಧಿ ಅಧ್ಯಕ್ಷೆ ಅಂತೇಳೋ ಮೂಲಕ ಸೋನಿಯಾ ಗಾಂಧಿ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಆದ್ರೆ ಇದಕ್ಕೆ ಬಂಡಾಯ ಎದ್ದಿದ್ದ ಜಿ23 ನಾಯಕರ ನಿಲುವೇನು ಎಂಬುದೇ ಸದ್ಯದ ಪ್ರಶ್ನೆ
