ಕರ್ನಾಟಕದಲ್ಲಿ ಲಿಂಗಾಯತ ಮಠಗಳು ಒಂದು ಉದಾತ್ ಉದ್ದೇಶದಿಂದ ಹುಟ್ಟಿಕೊಂಡಂತವು. ಬಸವಣ್ಣನ ಸಮಯದಲ್ಲಿ ಮಠ ಪರಂಪರೆ ಇರಲಿಲ್ಲ. ೧೯೦೪ ಕ್ಕಿಂತ ಮೊದಲು ಮಠಾಧೀಶರಿಗೆ ಅಂತ ಯಾವುದೇ ತರಬೇತಿ ಸಂಸ್ಥೆಗಳು ಕೂಡ ಇರಲಿಲ್ಲ. ಆಗ ಮಠಾಧೀಶರಾದವರಲ್ಲಿ ಹಲವರು ಬಸವ ತತ್ವ ಪ್ರಚಾರ ಕಾರ್ಯವನ್ನು ಸೂಕ್ತ ರೀತಿಯಲ್ಲೇ ಮಾಡಿದ್ದಾರೆ. ಆದರೆ 1904ರ ನಂತರ ತರಬೇತಿ ಸಂಸ್ಥೆಯಿಂದ ತಯ್ಯಾರಾದ ಮಠಾಧೀಶರಲ್ಲಿ ಬಹುತೇಕರು ತತ್ವಹೀನರುˌ ಅಂತರಂಗದಲ್ಲಿ ಬಸವ ದ್ರೋಹಿಗಳುˌ ಜಾತಿವಾದಿಗಳು ಆಗಿದ್ದಾರೆ. ಲಿಂಗಾಯತ ಮಠಗಳ ಮುಖ್ಯಸ್ಥನಿಗೆ ಸಂಸ್ಕೃತದ ಜ್ಞಾನದ ಅಗತ್ಯವಿಲ್ಲ. ಆತ ಕನ್ನಡ ಭಾಷೆ ಮತ್ತು ವಚನ ಸಾಹಿತ್ಯವನ್ನು ತಿಳಿದವನಾಗಿದ್ದು ಬಸವ ನಿಷ್ಟನಾಗಿದ್ದರೆ ಸಾಕು. ಆದರೆ ಬಸವ ಪರಂಪರೆಯ ಮಠಗಳು ಬಸವನಿಷ್ಟೆ ಮರೆತಿವೆ. ಆದ್ದರಿಂದ ಇಂದು ಕರ್ನಾಟಕದಲ್ಲಿ ಬಸವದ್ರೋಹಿ ವೈದಿಕ ಪರಂಪರೆ ಅಟ್ಟಹಾಸ ಮೆರೆಯುತ್ತಿದೆ.

ಕರ್ನಾಕಟದಲ್ಲಿ ಮಠ ಸಂಸ್ಕೃತಿಗೆ ೧೫ ನೇ ಶತಮಾನದಲ್ಲಿ ಹುಟ್ಟಿಕೊಂಡು ಬಸವಣ್ಣ ಸ್ಥಾಪಿಸಿದ ಧರ್ಮ ಪ್ರಚಾರಕ್ಕೆಂದು ಚರ ಜಂಗಮರ ತಂಡವನ್ನೊಳಗೊಂಡಿತ್ತು. ಆನಂತರ ಅವು ಸ್ಥಾವರ ಗದ್ದುಗೆಗಳಾದ ಅವು ಚಲನಶೀಲತೆಯನ್ನು ಕಳೆದುಕೊಂಡು ಜಾತಿಕೂಪಗಳಾದವು. ಪೂರ್ವಾಶ್ರಮದ ಹಂಗು ಹರಿದುಕೊಳ್ಳದ ಮಠಾಧೀಶರಿಂದ ರಕ್ತ ಸಂಬಂಧಿಗಳು ಹಾಗು ಜಾತಿ ಬಾಂಧವರ ಕಾರೋಬಾರು ಕೇಂದ್ರಗಳಾದವು. ಬಸವ ಪರಂಪರೆಗೆ ವಿದಾಯ ಹೇಳಿ ವೈದಿಕ ಕಂದಾಚಾರಗಳು ಮತ್ತು ಮೌಢ್ಯಗಳನ್ನು ಬಿತ್ತುವ ಕೇಂದ್ರಗಳಾದವು. ಜಾತಿ ಉಪಜಾತಿಯ ರಾಜಕಾರಣಿಗಳ ಅಕ್ರಮ ಸಂಪತ್ತಿನ ರಕ್ಷಣಾ ಕೇಂದ್ರಗಳಾದವು. ಈಗ ಈ ಮಠಗಳೆಲ್ಲವೂ ಮಹಾಮನೆ ಅಥವಾ ಅನುಭವ ಮಂಟಪಗಳಾಗಿ ಬದಲಾಗಬೇಕಿದೆ.
ಬಸವ ಪರಂಪರೆಯ ಲಿಂಗಾಯತ ಮಠಗಳು ಏನನ್ನು ಮಾಡಬೇಕು ಎನ್ನುವ ಕುರಿತು ನಾನು ಈ ಕೆಳಗೆ ಒಂದಷ್ಟು ಸಲಹೆಗಳನ್ನು ನೀಡಿದ್ದೇನೆ. ಈ ಸಲಹೆಗಳು ಕಾರ್ಯಸಾಧು ಅಲ್ಲದ್ದವೇನಲ್ಲ. ಆದರೆ ಮಠಾಧೀಶರು ಬಸವ ಮಾರ್ಗ ಬಿಟ್ಟು ಬಹಳಷ್ಟು ದೂರಕ್ಕೆ ಸಾಗಿದ್ದಾರೆ. ಅವರಿಗೆ ಈ ಸಲಹೆಗಳು ಪತ್ಯವಾಗಲಾರವು. ಈ ನನ್ನ ಸಲಹೆಗಳನ್ನು ಒಪ್ಪಿಕೊಂಡು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಬಹಿರಂಗವಾಗಿ ಯಾರೊಬ್ಬ ಮಠಾಧೀಶನೂ ಮುಂದೆ ಬರಲಾರನೆಂತಲೂ ನಾನು ಬಲ್ಲೆ.
ಒಂದು ವೇಳೆ ಮಠಗಳು ಬದಲಾಗದಿದ್ದರೆ ಬಸವತತ್ವನಿಷ್ಟ ಲಿಂಗಾಯತರು ಮಠೀಯ ವ್ಯವಸ್ಥೆಯಿಂದ ದೂರ ಸರಿದು ಅದಕ್ಕೆ ಪರ್ಯಾಯ ವ್ಯವಸ್ಥೆ ನಿರ್ಮಿಸುವ ಅಗತ್ಯವಿದೆ. ಅದು ಕಠಿಣವಾದ ಸವಾಲೇನಲ್ಲ. ಈಗಾಗಲೇ ಹಲವು ಲಿಂಗಾಯತರು ಮಠೀಯ ವ್ಯವಸ್ಥೆಯಿಂದ ನಿರಾಶೆಗೊಳ್ಳುತ್ತಿದ್ದಾರೆ. ಮುಂದೊಂದು ದಿನ ಇದು ಇನ್ನೂ ಹದಗೆಡುವ ಮೊದಲು ಲಿಂಗಾಯತರು ಮತ್ತು ಮಠಾಧೀಶರು ಈರ್ವರೂ ಬದಲಾಗುವ ಅನಿವಾರ್ಯತೆ ಇದೆ. ಅಲ್ಲಲ್ಲಿ ಅನೇಕ ಸಣ್ಣ ಪುಟ್ಟ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಅವು ಲಿಂಗಾಯತ ಧರ್ಮದ ನಿಜಾಚರಣೆಗಳು ಮತ್ತು ತತ್ವ ಸಿದ್ದಾಂತಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.
ಬಸವ ಪರಂಪರೆಯ ಲಿಂಗಾಯತ ಮಠಗಳು ಏನು ಮಾಡಬೇಕು?:
1. ಪ್ರಥಮದಲ್ಲಿ ತಮ್ಮತಮ್ಮ ಮಠಗಳ ಭಕ್ತ ಸಮೂಹದಲ್ಲಿ ಬೇರೂರಿರುವ ಜಾತಿˌ ಉಪಜಾತಿಯ ಭಾವ ಹೋಗಲಾಡಿಸಿˌ ಕೊಡುಕೊಳ್ಳುವ ಸಂಬಂಧ ಬೆಸೆಯುವ ಮೂಲಕ ಭಕ್ತರೆಲ್ಲರಲ್ಲಿ ಲಿಂಗಾಯತರೆಲ್ಲ ಒಂದೇ ಎನ್ನುವ ಮನೋಭೂಮಿಕೆ ಸ್ಥಿರಗೊಳಿಸಬೇಕು.
2. ತಮ್ಮ ತಮ್ಮ ಮಠಗಳಲ್ಲಿ ಭಕ್ತರು ಕಾಲು ಮುಗಿಯುವˌ ಗದ್ದುಗೆ ಪೂಜಿಸುವˌ ಪಾದಪೂಜೆ ಮಾಡುವ ಮುಂತಾದ ಅನಿಷ್ಟ ಪದ್ದತಿಗಳನ್ನು ಎಲ್ಲ ಮಠಾಧೀಶರು ಹಂತಹಂತವಾಗಿ ನಿಲ್ಲಿಸುವುದು ಮತ್ತು ಭಕ್ತರೇ ಸ್ವತಃ ಆಗ್ರಹಿಸಿದರೂ ಕೂಡ ಅವರಿಗೆ ವಚನ ಸಾಹಿತ್ಯದ ಆಧಾರದಲ್ಲಿ ತಿಳಿ ಹೇಳುವುದು. ಹಾಗೆ ಮಾಡುವುದರಿಂದ ಭಕ್ತ ಸಮೂಹ ಇಂಥ ಅನಿಷ್ಟ ಪರಂಪರೆಗಳಿಂದ ಹೊರಬರಲು ಪ್ರೇರೇಪಿಸಿದಂತಾಗುತ್ತದೆ. ಬಸವ ಪರಂಪರೆಯ ಜಗದ್ಗುರುವಾಗಲಿˌ ಸಾಮಾನ್ಯ ಭಕ್ತನಾಗಲಿ ಪರಸ್ಪರ ಬಾಗಿದ ತಲೆ ಮುಗಿದ ಕೈಯ ಗೌರವ ವಂದನೆ ಕಡ್ಡಾಯವಾಗಿ ಅನುಷ್ಟಾನಗೊಳಿಸುವುದು.
3. ತಮ್ಮ ಮಠದ ಪರಮ ಭಕ್ತ ಸಮೂಹದಲ್ಲಿ ವಿಧವಾ ವಿವಾಹ ಮಾಡಿಸುವ ಮೂಲಕ ಸಾಮಾಜಿಕ ಸುಧಾರಣೆಗೆ ಮುನ್ನುಡಿ ಬರೆಯುವುದು ಮತ್ತು ಆಡಂಭರದ ಮದುವೆಗಳು ಮಾಡುವ ಭಕ್ತರ ಅವ್ಹಾನವನ್ನು ತಿರಸ್ಕರಿಸುವ ಮೂಲಕ ದುಬಾರಿ ಮದುವೆಗಳು ಆಗದಂತೆ ನೋಡಿಕೊಳ್ಳುವುದು. ಪ್ರತಿ ವರ್ಷ ಮಠಗಳಲ್ಲಿ ಸಾಮೂಹಿಕ ವಿವಾಹಗಳೇರ್ಪಡಿಸಿ ಮಠದ ಶ್ರೀಮಂತ ಭಕ್ತರ ಮಕ್ಕಳ ಮದುವೆ ಮಾಡಿಸುವುದು. ಇದು ಬಡ ಮತ್ತು ಮಧ್ಯಮವರ್ಗದವರವರಲ್ಲಿ ಮಾನಸಿಕ ಪರಿವರ್ತನೆಗೆ ಕಾರಣವಾಗಬಲ್ಲುದು.
4. ಮೇಲ್ಕಾಣಿಸಿದ ಮದುವೆಗಳನ್ನು ಕಡ್ಡಾಯವಾಗಿ ವಚನ ಮಾಂಗಲ್ಯ ಪದ್ದತಿಯಂತೆ ನೆರವೇರುಸುವುದು.
5. ಹೊಸ ಮನೆಯ ಪ್ರವೇಶˌ ಸೀಮಂತˌ ನಾಮಕರಣˌ ಮತ್ತಿತರ ಶುಭ ಸಮಾರಂಭಗಳು ವೈದಿಕ ಪದ್ದತಿಯಂತೆ ನಡೆಸದೆ ಸಂಪೂರ್ಣ ಬಸವತತ್ವಾನುಸಾರ ನೆರವೇರುವಂತೆ ನೋಡಿಕೊಳ್ಳುವುದು.
6. ಲಿಂಗಾಯತ ವ್ಯಕ್ತಿಗಳು ಲಿಂಗೈಕ್ಯರಾದಲ್ಲಿ ವೈದಿಕ ಕ್ರೀಯಾವಿಧಿಗಳನ್ನು ಮಾಡದೆ ಸರಳ ಲಿಂಗಾಯತ ತತ್ವಾನುಸಾರ ವಿಧಿವಿಧಾನಗಳನ್ನು ಪೂರೈಸುವ ಪದ್ದತಿ ಜಾರಿಗೊಳಿಸುವುದು.
7. ಲಿಂಗಾಯತರ ಮನೆಗಳಲ್ಲಿ ಲಿಂಗಸಂಸ್ಕಾರˌ ಲಿಂಗದೀಕ್ಷೆ ಮುಂತಾದ ಧಾರ್ಮಿಕ ಸಂಸ್ಕಾರದ ವಿಧಿಗಳನ್ನು ಕಡ್ಡಾಯವಾಗಿ ಸೂಕ್ತ ಸಮಯದಲ್ಲಿ ನೆರವೇರುವಂತೆ ಭಕ್ತವರ್ಗಕ್ಕೆ ಮಾರ್ಗಸೂಚಿಗಳನ್ನಿತ್ತು ಅನುಷ್ಟಾನಗೊಳಿಸುವುದು.
8. ಮಠದ ಭಕ್ತವರ್ಗದವರು ತಿರುಪತಿˌ ಮಂತ್ರಾಲಯˌ ಸಿರಡಿˌ ಧರ್ಮಸ್ಥಳˌ ಶ್ರೀಶೈಲ ಮುಂತಾದ ಧಾರ್ಮಿಕ ಕ್ಷೇತ್ರಗಳಿಗೆ ಹರಕೆ ಹೊರುವುದುˌ ನಿಯಮಿತ ಭೇಟಿ ಕೊಡುವ ಕಾರ್ಯಗಳನ್ನು ತಡೆಯುವುದು. ಬ್ರಹ್ಮಕುಮಾರಿˌ ಮುಂತಾದ ಪರಂಪರೆಗಳಿಗೆ ಮಾರು ಹೋಗದಂತೆ ಮಾಡುವುದು. ಹಾಗೆ ಮಾಡುವ ಭಕ್ತವರ್ಗಗಳಿಗೆ ಮಠ ಪ್ರವೇಶ ನಿಷೇಧಿಸುವುದು.
9. ಲಿಂಗಾಯತ ಧರ್ಮಿಯರು ತಮ್ಮ ಮದುವೆ ಮುಂತಾದ ಶುಭಕಾರ್ಯಗಳಿಗೆ ಮೂಹೂರ್ತ ಮತ್ತು ಶುಭಘಳಿಗೆಗಳನ್ನು ಗುರುತಿಸಲು ಪಂಚಾಂಗದ ಮೊರೆ ಮೋಗುವುದನ್ನು ನಿಷೇಧಿಸುವುದು.
10. ಲಿಂಗಾಯತ ಯುವಕರಲ್ಲಿ ವಚನಗಳ ಪ್ರಜ್ಞೆˌ ಲಿಂಗಾಯತ ಧಾರ್ಮಿಕ ಸಂಸ್ಕಾರಗಳ ಅರಿವು ಮುಂತಾದ ತಿಳುವಳಿಯನ್ನು ಮೂಡಿಸಲು ಮಠಗಳಲ್ಲಿ ನಿಯಮಿತವಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು.
11. ಮಠಗಳಲ್ಲಿ ನಡೆಯುವ ಗದ್ದುಗೆ ಪೂಜೆˌ ರುದ್ರಾಭಿಷೇಕˌ ಸಾರೋಟ ಮೆರವಣಿಗೆˌ ಪಲ್ಲಕ್ಕಿ ಮೆರವಣಿಗೆˌ ಹೋಮˌ ಹವನ ಮುಂತಾದ ಜೀವವಿರೋಧಿ ಮೌಢ್ಯಾಚರಣೆಗಳನ್ನು ನಿಲ್ಲಿಸುವುದು.
12. ಮಠಗಳು ನಡೆಸುವ ಶಾಲೆˌ ಕಾಲೇಜುಗಳಲ್ಲಿ ಬಡ ಲಿಂಗಾಯತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು. ಮಠಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲದಿದ್ದರೆ ಅಂಥ ಮಠಾಧೀಶರು ಬಡ ಲಿಂಗಾಯತ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವುದು.
13. ಲಿಂಗಾಯತ ಸಮಾಜವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಮಾಜ ಸುಧಾರಣೆˌ ಪರಿಸರ ರಕ್ಷಣೆˌ ನೈಸರ್ಗಿಕ ವಿಕೋಪಗಳ ನಿರ್ವಹಣೆˌ ಗಿಡ ನೆಡುವುದುˌ ಮೌಢ್ಯ ನಿರ್ಮೂಲನಾ ಅಭಿಯಾನಗಳನ್ನು ಹಮ್ಮಿಕೊಳ್ಳುವುದು.
14. ಲಿಂಗಾಯತ ಧರ್ಮಕ್ಕೆ ಉಪಯೋಗವಾಗುವ ಗ್ರಂಥˌ ಪುಸ್ತಕಗಳನ್ನು ಪ್ರಕಟಿಸುವುದು ಅಥವಾ ಪ್ರಕಟಿಸಲು ಸಹಾಯ ಮಾಡುವುದು.
15. ಬಸವ ಸಂಪ್ರದಾಯದ ಲಿಂಗಾಯತ ಮಠಗಳ ಆವರಣದ ಪ್ರಮುಖ ಸ್ಥಳಗಳಲ್ಲಿ ಧರ್ಮಗುರು ಬಸವಣ್ಣನವರ ಭಾವಚಿತ್ರ ಹೊರತುಪಡಿಸಿ ಮಠದ ಹಿಂದಿನ ಗುರುಗಳ ಅಥವಾ ಇನ್ನಾವುದೊ ಮಠಾಧೀಶರ ಭಾವಚಿತ್ರಗಳು ಇರದಂತೆ ಕಡ್ಡಾಯವಾಗಿ ನೋಡಿಕೊಳ್ಳುವುದು.
16. ಮಠದ ಹಿಂದಿನ ಮಠಾಧೀಶರುಗಳ ಭಾವಚಿತ್ರಗಳಿಗಾಗಿಯೇ ಒಂದು ಪ್ರತ್ಯೇಕ ಹಜಾರವನ್ನು ನಿಗದಿಗೊಳಿಸಿ ಅಲ್ಲಿ ಹಿಂದಿನವರು ಬಳಸುತ್ತಿದ್ದ ವಸ್ತುಗಳುˌ ಅವರ ಸಾಧನೆಗಳ ಪ್ರಾತ್ಯಕ್ಷಿಕೆಯನ್ನು ಕಾಲಮಾನದ ಅನುಕ್ರಮದಲ್ಲಿ ಪ್ರದರ್ಶಿಸುವುದು.
17. ಮಠದಲ್ಲಿ ನಡೆಯುವ ಎಲ್ಲ ಪ್ರಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಥಿತಿಗಳಿಗೆ ಹಾಗು ಮಠಕ್ಕೆ ಯಾರಾದರೂ ಗಣ್ಯ ವ್ಯಕ್ತಿಗಳು ಭೇಟಿಕೊಟ್ಟಾಗ ತಮ್ಮ ಅಥವಾ ಹಿಂದಿನ ಮಠಾಧೀಶರ ಭಾವಚಿತ್ರ ನೀಡದೆ ಕೇವಲ ಧರ್ಮಗುರು ಬಸವಣ್ಣನವರ ಭಾವಚಿತ್ರ ಮಾತ್ರ ನೀಡಬೇಕು ಹಾಗು ಲಿಂಗಾಯತ ಧರ್ಮಗ್ರಂಥ ಸಿದ್ದಗೊಳಿಸಿ ನೀಡುವ ಪದ್ದತಿ ಜಾರಿಗೆಗೊಳಿಸುವುದು.
18. ಮಠದ ದೈನಂದಿನ ಹಾಗು ವಿಶೇಷ ಚಟುವಟಿಕೆಗಳಲ್ಲಿ ಜೀವವಿರೋಧಿ ಹಾಗು ಫ್ಯಾಸಿಷ್ಟ ಸಂಘಟನೆಗಳಿಗೆ ಹಾಗು ಅಂತಹ ಸಂಸ್ಥೆಗಳಿಗೆ ಸೇರಿದ ವ್ಯಕ್ತಿಗಳನ್ನು ಅವ್ಹಾನಿಸುವ ಅಥವಾ ಅಂತವರೊಂದಿಗೆ ವೇದಿಕೆ ಹಂಚಿಕೊಳ್ಳುವ ಕಾರ್ಯಗಳಿಂದ ಲಿಂಗಾಯತ ಮಠಗಳು ದೂರವಿರುವುದು.
19. ಮಠದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ˌ ರಾಷ್ಟ್ರೀಯತೆಯ ಪಾಠ ಮಾಡುತ್ತೇವೆಂದು ಬರುವ ಫ್ಯಾಸಿಷ್ಟರನ್ನು ನಯವಾಗಿ ಮಠದೊಳಗೆ ಪ್ರವೇಶ ಮಾಡದಂತೆ ತಡೆಯುವುದು. ಏಕೆಂದರೆ ಲಿಂಗಾಯತ ಧರ್ಮ ತತ್ವಕ್ಕಿಂತ ಮಿಗಿಲಾದ ರಾಷ್ಟ್ರೀಯತೆ ಮತ್ತೊಂದಿಲ್ಲ.
20. ಮಠಾಧೀಶರು ತಮ್ಮ ಉತ್ತರಾಧಿಕಾರಿಯಾಗಿ ಬಸವ ತತ್ವನಿಷ್ಟ ಮಹಿಳೆಯರನ್ನು ˌ ಲಿಂಗಾಯತ ಕಾಯಕವರ್ಗದ ಭಕ್ತರನ್ನು ಹಾಗು ಸಾಧ್ಯವಾದಲ್ಲಿ ಉಳಿದ ಶೋಷಿತ ವರ್ಗದವರನ್ನು ಕಡ್ಡಾಯವಾಗಿ ನೇಮಿಸುವ ಪದ್ದತಿ ಜಾರಿಗೆ ತರುವುದು. ಪ್ರಸ್ತುತ ಮಠಾಧೀಶರು ಪ್ರತಿನಿಧಿಸುವ ಉಪವರ್ಗದವರನ್ನು ಹೊರತು ಪಡಿಸಿ ಅನ್ಯ ಉಪವರ್ಗಕ್ಕೆ ಮನ್ನಣೆ ನೀಡುತ್ತಾ ಲಿಂಗಾಯತ ಪ್ರತಿಯೊಂದು ಉಪವರ್ಗದವರಿಗೂ ಆವರ್ತನ ರೂಪದಲ್ಲಿ ಅವಕಾಶ ಸಿಗುವಂತೆ ನಿಯಮ ರೂಪಿಸಬೇಕು.
21. ರಾಜರಾರಣಿಗಳನ್ನು ಲಿಂಗಾಯತ ಸಮುದಾಯದ ಅಭ್ಯುದಯಕ್ಕಾಗಿ ಬಳಸಿಕೊಳ್ಳುವುದೇ ಹೊರತು ಮಠಗಳನ್ನು ಹಾಗು ಸಮುದಾಯವನ್ನು ಬಳಸಿಕೊಂಡು ರಾಜಕಾರಣಿಗಳು ಬೆಳೆಯದಂತೆ ನೋಡಿಕೊಳ್ಳುವುದು. ಸಮುದಾಯಕ್ಕೆ ಉಪಕಾರಿಯಾದ ರಾಜಕಾರಣಿಗಳನ್ನು ಮಾತ್ರ ಬೆಂಬಲಿಸುವುದು.
22. ಶ್ರೀಮಂತ ಮಠಗಳು ಲಿಂಗಾಯತ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಮಾಡುವುದುˌ ವಿದ್ಯಾರ್ಥಿ ವೇತನˌ ಸ್ಕಾಲರಶಿಪ್ ಮುಂತಾದ ಯೋಜನೆಗಳನ್ನು ಜಾರಿಗೆಗೊಳಿಸುವುದು.
23. ನಾಡುˌ ನುಡಿˌ ನೆಲˌ ಜಲˌ ಕೃಷಿˌ ಕಾಯಕˌ ಸಂಸ್ಕೃತಿˌ ಪರಂಪರೆಗಳ ವಿಷಯ ಬಂದಾಗ ಬಸವ ಪರಂಪರೆಯ ಮಠಗಳು ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು.
24. ಯಾವುದೇ ಧರ್ಮದ ಧರ್ಮಾಂಧರು ನಾಡಿನ ಶಾಂತಿ ಕದಡುವ ಇಲ್ಲವೆ ಸೌಹಾರ್ದತೆ ಕೆಡಿಸುವ ಕೃತ್ಯಗಳಿಗೆ ಕೈಹಾಕಿದಾಗ ಲಿಂಗಾಯತ ಮಠಗಳು ಅವುಗಳ ವಿರುದ್ಧ ಸಾಂಘಿಕವಾಗಿ ಹೋರಾಟಕ್ಕೆ ನಿಲ್ಲುವುದು ಹಾಗು ನಾಡಿನ ಸೌಹಾರ್ದತೆ ಕಾಪಾಡುವುದು.
25. ಲಿಂಗಾಯತ ಧರ್ಮಿಯರಿಗೆ ಅದರಲ್ಲೂ ವಿಶೇಷವಾಗಿ ಯುವಕರು ಹಾಗು ಮಹಿಳೆಯರಿಗಾಗಿ ನಿರಂತರವಾಗಿ ಅಧ್ಯನ ಮತ್ತು ತರಬೇತಿ ಶಿಬಿರಗಳನ್ನು ಆಯೋಜಿಸುವುದು. ಅದಕ್ಕಾಗಿ ತಜ್ಞರ ಸಹಾಯದಿಂದ ಪಠ್ಯಕ್ರಮವನ್ನು ಸಿದ್ಧಪಡಿಸಿ ಜಿಲ್ಲಾವಾರು ಅಗತ್ಯ ಸಂಖ್ಯೆಯ ಸಂಪನ್ಮೂಲ ವ್ಯಕ್ತಿಗಳನ್ನು ಅಣಿಗೊಳಿಸುವುದು.
26. ಮೇಲ್ಕಾಣಿಸಿದ ಎಲ್ಲ ವಿಷಯಗಳ ಕುರಿತು ಚಿಂತಿಸಲು ಹಾಗು ಅವುಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆಯನ್ನು ರೂಪಿಸುವುದು. ತಮ್ಮ ತಮ್ಮ ಮಠಗಳ ಶಕ್ತಿ ˌ ದೌರ್ಬಲ್ಯ ˌ ಅವಕಾಶಗಳು ಹಾಗು ಅಡಚಣಿಗಳ ಕುರಿತು ವಿಶ್ಲೇಷಣೆ ಮಾಡಿ ಸೂಕ್ತ ಕಾರ್ಯಯೋಜನೆ ಸಿದ್ದಗೊಳಿಸಿ ಅನುಷ್ಠಾನಕ್ಕೆ ತರುವುದು.
27. ಮಠಾಧೀಶರು ಪ್ರಕೃತಿ ಸಹಜ ಅಡಿಷಡ್ವರ್ಗಗಳನ್ನು ಮೀರಲು ಸಾಧ್ಯವಾಗದಿದ್ದಲ್ಲಿ ಅಕ್ರಮ ಮಾರ್ಗಗಳನ್ನು ಅನುಸರಿಸದೆ ಯಾವ ಭಯವು ಇಲ್ಲದೆ ಸಂಸಾರಸ್ತರಾಗಬೇಕು. ಏಕೆಂದರೆ ಬಸವ ಧರ್ಮ ಸಂಸಾರ ಧರ್ಮವಾಗಿದೆ.
28. ಮಠಾಧೀಶರು ಕಾವಿ ಬಟ್ಟೆಯನ್ನು ತ್ಯಜಿಸಿ ಶ್ವೇತ ವಸ್ತ್ರಧಾರಿಗಳಾದರೆ ಅತ್ಯಂತ ಸಮಂಜಸವೆನ್ನಿಸುವುದು.
29. ಪ್ರತಿ ಮಠಗಳು ವರ್ಷದಲ್ಲಿ ಎರಡು ಬಾರಿಯಾದರೂ ಕಡ್ಡಾಯವಾಗಿ ಭಕ್ತವರ್ಗಕ್ಕೆ ಸಂವಿಧಾನದ ಕುರಿತು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು.
30. ಮಠಗಳು ನಾಡಿನ ಬಸವ ತತ್ವನಿಷ್ಟ ಚಿಂತಕರನ್ನೊಳಗೊಂಡ ಸಲಹಾ ಮಂಡಳಿಯನ್ನು ರಚಿಸಿಕೊಂಡು ಕಾಲಕಾಲಕ್ಕೆ ಅವರ ಸಲಹೆಯನ್ನು ಪಡೆದು ತಮ್ಮ ಕಾರ್ಯಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅದರಂತೆ ತಾವು ಹಮ್ಮಿಕೊಂಡ ಕಾರ್ಯಗಳ ವಿಮರ್ಶೆಗೆ ಮತ್ತೊಂದು ವಿಮರ್ಶಾ ಮಂಡಳಿಯನ್ನು ರಚಿಸಿಕೊಳ್ಳಬೇಕು.
ಇಂದು ಲಿಂಗಾಯತ ಮಠಗಳು ತಮ್ಮನ್ನು ತಾವು ಮೊದಲು ಬಸವತತ್ವ ನಿಷ್ಠಗೊಳಿಸಿಕೊಂಡು ಅನೇಕ ಜೀವಪರ ಚಿಂತನೆ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಯಾವುದಾದರೂ ಸ್ವಪ್ರತಿಷ್ಟೆಯ ಆಡಂಬರದ ಅಭಿಯಾನಗಳುˌ ಲಕ್ಷ ದೀಪೋತ್ಸವದಂತ ದುಂಧು ಹಾಗೂ ಸಾಂಕ್ರಮಿಕ ಮೌಢ್ಯಗಳನ್ನು ಹಮ್ಮಿಕೊಳ್ಳುವುದರಲ್ಲಿ ಅರ್ಥವಿಲ್ಲ. ಲಿಂಗಾಯತ ಮಠಗಳು ಮಾಡುವ ಕೆಲಸಗಳು ಸಮುದಾಯದವನ್ನು ಸೈದ್ಧಾಂತಿಕವಾಗಿ ಸಜ್ಜುಗೊಳಿಸುವ ದೀರ್ಘಾವಧಿ ಗುರಿ ಹೊಂದಿರಬೇಕು. ಹಾಗೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಮಠಗಳು ಮತ್ತು ಸಮುದಾಯ ಉಳಿಯಬಲ್ಲದು. ಇಲ್ಲವಾದಲ್ಲಿ ಇವರೆಡನ್ನೂ ಏಕಕಾಲಕ್ಕೆ ಮುಗಿಸಲು ಫ್ಯಾಸಿಷ್ಟರು ಮಾಡಿರುವ ಸಂಚಿಗೆ ಬಲಿಯಾಗುವುದು ನಿಶ್ಚಿತ.