ಇಲ್ಲಿ ಸಿಬಿಎಸ್ಸಿ ಪರೀಕ್ಷೆಗಳಿಲ್ಲ. ಅಷ್ಟೇಕೆ ನಿರ್ಣಾಯಕ ಎನಿಸುವ ಪಿಯುಸಿ ಪರೀಕ್ಷೆಯೂ ರದ್ದಾಗಿದೆ. ಆದರೆ 8 ಲಕ್ಷ 76 ಸಾವಿರ ವಿದ್ಯಾರ್ಥಿಗಳು ಭಾಗವಹಿಸುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜುಲೈ 19-22ರಂದು ನಡೆಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.
ಇಲ್ಲಿ ರಾಜ್ಯ ಸರ್ಕಾರ ಎನ್ನುವುದಕ್ಕಿಂತ ಶಿಕ್ಷಣ ಸಚಿವ ಸುರೇಶ ಕುಮಾರ್ ಎನ್ನುವುದೇ ಸೂಕ್ತ. ದೇಶಾದ್ಯಂತ ಸಿಬಿಎಸ್ ಸಿ, ಐಸಿಎಸ್ ಸಿ ಅಷ್ಟೇ ಅಲ್ಲದೆ ಬಹುತೇಕ ರಾಜ್ಯಗಳ ಪಿಯು ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನು ಕೂಡ ಕೋವಿಡ್ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಕರೋನಾ ಪರೀಕ್ಷೆಯ ನಡುವೆ ಮಕ್ಕಳು, ಶಿಕ್ಷಕರು ಮತ್ತು ಪೋಷಕರಷ್ಟೇ ಅಲ್ಲದೆ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಿ ಪರೀಕ್ಷೆ ನಡೆಸುವುದು ಅಗತ್ಯವಿಲ್ಲ ಎಂಬ ನಿಲುವಿಗೆ ಬಂದ ಕೇಂದ್ರೀಯ ಪರೀಕ್ಷಾ ಮಂಡಳಿ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ಹಿಂದಿನ ಪರೀಕ್ಷೆಗಳ ಅಂಕಗಳನ್ನೇ ಮಾನದಂಡವಾಗಿ ಪರಿಗಣಿಸಿ ಅಂಕ ಅಥವಾ ಗ್ರೇಡ್ ಪರಿಗಣಿಸಿ ಮುಂದಿನ ತರಗತಿಗೆ ಬಡ್ತಿ ನೀಡಲು ನಿರ್ಧರಿಸಿವೆ.

ಆದರೆ, ಕರ್ನಾಟಕದ ಶಿಕ್ಷಣ ಸಚಿವರು ಮಾತ್ರ ಕಳೆದ ವರ್ಷದಿಂದಲೂ ಪರೀಕ್ಷೆ ನಡೆಸುವ ವಿಷಯದಲ್ಲಿ ಹಠಕ್ಕೆ ಬಿದ್ದಂತೆ ತೀರ್ಮಾನ ಕೈಗೊಳ್ಳುತ್ತಿದ್ದು, ಈ ಬಾರಿ ಕೂಡ ಅದೇ ಧೋರಣೆ ತಳೆದಿದ್ದಾರೆ. ಪೋಷಕರು, ಸಾರ್ವಜನಿಕರ ಒತ್ತಡಕ್ಕೆ ಮಣಿದು ಪಿಯು ಪರೀಕ್ಷೆ ರದ್ದು ಮಾಡಿದ ಸಚಿವರು, ಎಸ್ ಎಸ್ ಎಲ್ ಸಿ ವಿಷಯದಲ್ಲಿ ಮಾತ್ರ ಯಾಕೆ ಇಷ್ಟೊಂದು ಪಟ್ಟು ಹಿಡಿದು ಭೀಕರ ಎರಡನೇ ಅಲೆಯ ನಡುವೆಯೇ ಪರೀಕ್ಷೆಗೆ ಮುಂದಾಗಿದ್ದಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಆ ಹಿನ್ನೆಲೆಯಲ್ಲಿ, ‘ಪ್ರತಿಧ್ವನಿ’ ನಾಡಿನ ಪ್ರಜ್ಞಾವಂತ ನಾಯಕರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿ ಸಂಘಟನೆಗಳ ಪ್ರಮುಖರ ಪ್ರತಿಕ್ರಿಯೆಗಳನ್ನು ಕೇಳಿದ್ದು, ಅವರುಗಳು ಬಹುತೇಕ ಶಿಕ್ಷಣ ಸಚಿವರ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ಧಾರೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, “ಪರೀಕ್ಷೆ ನಡೆಸಲು ಮುಂದಾಗಿದ್ದ ಆಂಧ್ರಪ್ರದೇಶ ಸರ್ಕಾರವನ್ನು ಸುಪ್ರಿಂಕೋರ್ಟ್ ತರಾಟೆಗೆ ತೆಗೆದುಕೊಂಡು, ಪ್ರತಿ ವಿದ್ಯಾರ್ಥಿಯ ಜೀವಕ್ಕೆ ಸರ್ಕಾರ ಹೊಣೆ ಹೊರಬೇಕು ಮತ್ತು ಪ್ರತಿ ವಿದ್ಯಾರ್ಥಿಗೂ ಒಂದೂವರೆ ಕೋಟಿ ರೂ. ಗಳ ಜೀವವಿಮೆ ನೀಡಬೇಕು ಎಂದಿದೆ. ಆ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡಿದೆ. ಹಾಗೆ ನೋಡಿದರೆ, ಸುಪ್ರೀಂಕೋರ್ಟಿನ ಆ ಆದೇಶ ರಾಜ್ಯಕ್ಕೂ ಅನ್ವಯಿಸುತ್ತದೆ. ಆ ಆದೇಶವನ್ನೂ ಮೀರಿ ರಾಜ್ಯ ಸರ್ಕಾರ ಪರೀಕ್ಷೆ ನಡೆಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿ ಸಂಘಟನೆ ಎಸ್ಎಫ್ಐನ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವ ರೆಡ್ಡಿ “ಖಾಸಗಿ ಪಿಯುಸಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಹುನ್ನಾರ ಇದು. ಸಚಿವ ಸುರೇಶಕುಮಾರ್ ಶಿಕ್ಷಣ ಸಚಿವರಾಗಿರದೆ ಪರೀಕ್ಷಾ ವ್ಯಾಪಾರಿಯಾಗಿದ್ದಾರೆ. ಕಳೆದ ವರ್ಷವೂ ಅವರು ಹಠಕ್ಕೆ ಬಿದ್ದವರಂತೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದ್ದರು’ ಎಂದು ಸಚಿವರ ನಡೆಯನ್ನು ಖಂಡಿಸಿದರು.
“ಮಕ್ಕಳಿಗೆ ಕಲಿಕೆ-ಬೊಧನೆ ಇಲ್ಲದೆಯೇ ಪರೀಕ್ಷೆ ಮಾಡುವುದು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಒಂಥರಾ ಕ್ರೌರ್ಯವೇ. ಈ ಸರ್ಕಾರಕ್ಕೆ ಒಂದು ಸ್ಪಷ್ಟ ನಿಲುವೇ ಇಲ್ಲ. ಪಿಯುಸಿ ಪರೀಕ್ಷೆ ನಡೆಸುವುದಾಗಿ ಹೇಳಿ, ನಂತರ ರದ್ದು ಮಾಡಿದರು. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಎಷ್ಟು ಗೊಂದಲ, ಆತಂಕಕ್ಕೆ ಈಡಾದರು ಎಂಬುದು ಈ ಸರ್ಕಾರಕ್ಕೆ ಅರ್ಥವೇ ಆಗಿಲ್ಲ. ಎಲ್ಲರನ್ನೂ ಪಾಸು ಮಾಡಬೇಕು, ಎಸ್ಎಸ್ಎಲ್ಸಿ ಪರೀಕ್ಷೆ ರದ್ದು ಮಾಡಬೇಕು’ ಎಂದು ಕರ್ನಾಟಕ ವಿದ್ಯಾರ್ಥಿ ಸಮಿತಿ(ಕೆವಿಎಸ್) ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ಹೇಳುತ್ತಾರೆ.
ಕೋವಿಡ್ ಅಪಾಯದ ನಡುವೆಯೂ ಪೋಷಕರು, ಸಾರ್ವಜನಿಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಶಿಕ್ಷಣ ಸಚಿವರ ನಡೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ಮಟ್ಟು, ‘ಈ ಶಿಕ್ಷಣ ಸಚಿವರನ್ನು ಸಜ್ಜನ, ಪ್ರಾಮಾಣಿಕ ಅಂತೆಲ್ಲ ಇಲ್ಲಿವರೆಗೂ ಮಾಧ್ಯಮಗಳು, ಜೊತೆಗೆ ಕೆಲವು ಪ್ರಗತಿಪರರೂ ಬಿಂಬಿಸುತ್ತ ಬಂದಿದ್ದೇ ಈಗ ಅಪಾಯಕಾರಿಯಾಗಿದೆ. ಇವರೀಗ ಖಾಸಗಿ ಶಾಲೆ ಮತ್ತು ಕಾಲೇಜುಗಳ ಮುಂದೆ ಮಂಡಿಯೂರಿದ್ದಾರೆ. ಖಾಸಗಿ ಸಂಸ್ಥೆಯವರು ಪ್ರತಿಭಟನೆ ಮಾಡಿದ ಕೂಡಲೇ ಇವರು ಸಂಧಾನಕ್ಕೆ ಮುಂದಾಗುತ್ತಾರೆ. ಇವರ ಬಳಿ ಇರುವ ಅಧಿಕಾರ ಬಳಸಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಾಠ ಕಲಿಸಬೇಕಿತ್ತು. ಅದು ಆಗಲ್ಲ ಎಂದರೆ ರಾಜೀನಾಮೆ ಕೊಟ್ಟು ಹೊರಹೋಗಬೇಕು. ಸದ್ಯಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಅಗತ್ಯವೇ ಇರಲಿಲ್ಲ. ಆದರೆ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಹುನ್ನಾರದಿಂದ 8 ಲಕ್ಷ 76 ಸಾವಿರ ಮಕ್ಕಳು ಮತ್ತು ಸಾವಿರಾರು ಶಿಕ್ಷಣ ಸಿಬ್ಬಂದಿಯನ್ನು ಅಪಾಯಕ್ಕೆ ದೂಡುವ ಈ ಕ್ರಮ ಯಾವ ದೃಷ್ಟಿಕೋನದಲ್ಲೂ ಒಪ್ಪಿತವಲ್ಲ” ಎಂದು ಹೇಳಿದರು.

“ಡ್ರೈವಿಂಗ್ ಲೈಸೆನ್ಸ್ ಸಲುವಾಗಿ ಈ ಪರೀಕ್ಷೆ ಅನುಕೂಲ ಎಂಬ ಶಿಕ್ಷಣ ಸಚಿವರ ಮಾತೇ ಆಘಾತಕಾರಿ ಮತ್ತು ಅಪಾಯಕಾರಿ. ಖಾಸಗಿ ಪಿಯುಸಿ ಕಾಲೇಜುಗಳನ್ನು ಉದ್ಧಾರ ಮಾಡಲು ಇದೆಂತಹಾ ಗಿಮಿಕ್.? ಈ ಪರೀಕ್ಷೆ ರದ್ದು ಮಾಡುವಂತೆ ಇಲ್ಲಿ ಒಂದು ಅಭಿಯಾನ ನಡೆಯಬೇಕು” ಎಂಬುದು ಹಿರಿಯ ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ಅವರ ಕರೆ.

“ಸುರೇಶ್ ಕುಮಾರ್ ಶಿಕ್ಷಣ ಸಚಿವರೇ ಅಲ್ಲ. ಅವರು ಒಬ್ಬ ಪರೀಕ್ಷಾ ಸಚಿವ ಅಷ್ಟೇ. ಶಿಕ್ಷಣ ಇಲಾಖೆಯೇ ಹೇಳುವಂತೆ ಶೇ. 40ರಷ್ಟು ಮಕ್ಕಳು ಕಲಿಕೆ-ಬೋಧನೆಯಿಂದ ಹೊರಗೆ ಉಳಿದಿದ್ದಾರೆ. ಆನ್ಲೈನ್ ಕ್ಲಾಸಿನ ಲೆಕ್ಕವೇ ತಪ್ಪಾಗಿದೆ. ಹೀಗಾಗಿ ಸುಮಾರು ಶೇ. 60ರಷ್ಟು ಮಕ್ಕಳು ಕಲಿಕೆಯಿಂದ ದೂರವಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಎಂದರೆ ಏನರ್ಥ? ಪಿಯುಸಿ ಪರೀಕ್ಷೆಯೇ ರದ್ದಾದ ಮೇಲೆ ಎಸ್ಎಸ್ಎಲ್ಸಿ ಪರೀಕ್ಷೆಯ ಅಗತ್ಯವಿತ್ತೆ?” ಎಂದು ಪ್ರಶ್ನಿಸುವ ಶಿಕ್ಷಣ ತಜ್ಞ ಶ್ರೀಪಾದ ಭಟ್, “ಖಾಸಗಿ ಪಿಯುಸಿ ಕಾಲೇಜುಗಳಿಗೆ ವ್ಯವಹಾರ ಮಾಡಲು; ಅಂದರೆ, ಡೊನೇಷನ್ ಹೊಡೆದುಕೊಳ್ಳಲು ಅವಕಾಶ ನೀಡಲೆಂದೇ ವಿದ್ಯಾರ್ಥಿಗಳಿಗೆ ಪರ್ಸೆಂಟೇಜ್ ನೀಡಲು ಹೊರಟಿದ್ದಾರೆ ಅಷ್ಟೇ. ಅದಲ್ಲದೇ ಒಎಂಆರ್ ಶೀಟ್ ನೀಡುತ್ತಿದ್ದಾರೆ. ಗ್ರಾಮೀಣ ಮಕ್ಕಳಿಗೆ ಹಿನ್ನಡೆ ಮಾಡುವುದೇ ಇದರ ಉದ್ದೇಶವಾಗಿದೆ ಅಲ್ಲವೇ?” ಎಂದು ಹೇಳಿದ್ದಾರೆ.
“ಮೊದಲಿನಿಂದಲೂ ಈ ಸರ್ಕಾರದ ಶಿಕ್ಷಣ ಧೋರಣೆ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ನಿತ್ಯ ಸಿಎಂ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ನೀಡುವ ಹೇಳಿಕೆ ಗಮನಿಸಿ, ಒಂದಕ್ಕೊಂದು ತದ್ವಿರುದ್ಧವಾಗಿರುತ್ತವೆ. ಶೇ. 40ರಷ್ಟು ಮಕ್ಕಳಿಗೆ ಕಲಿಕೆ-ಬೋಧನೆಯೇ ಸಿಗದಾಗ ಇವರೇನು ಪರೀಕ್ಷೆ ಮಾಡ್ತಾರೆ? ಮಕ್ಕಳಿಗೆ ಪರ್ಸೆಂಟೆಂಜ್ ಕೊಡಲು ಅಷ್ಟೇ. ಆ ಮೂಲಕ ಜಿಲ್ಲೆ-ಜಿಲ್ಲೆಯಲ್ಲಿ ಹರಡಿರುವ ಖಾಸಗಿ ಪಿಯು ಕಾಲೇಜುಗಳ ಖಜಾನೆ ತುಂಬಿಸಲಿಕ್ಕೆ ಅಷ್ಟೇ ಈ ಪರೀಕ್ಷೆ ನಡೆಯುತ್ತಿದೆ. ಇದು ಒಂದು ವ್ಯವಸ್ಥಿತ ಉದ್ಯಮವೂ ಆದಂತಿದೆ. ಈ ಶಿಕ್ಷಣ ಸಚಿವರನ್ನು ಸಜ್ಜನ, ಇದ್ದುದರಲ್ಲೇ ಬಿಜೆಪಿಯಲ್ಲಿ ಉತ್ತಮ ಅಂತಾ ಕೆಲವು ಪ್ರಗತಿಪರರು ಬಿಂಬಿಸುತ್ತ ಬಂದಿದ್ದರು. ಆದರೆ ಈ ಮಹಾಶಯ ಮೆತ್ತಗೆ ಇಡೀ ಸಮಾಜವನ್ನು ಬಲಿಕೊಡುತ್ತಿದ್ದಾರೆ” ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಹೇಳಿದರು.
“ಆಂಧ್ರ ಸರ್ಕಾರ ಹತ್ತನೇ ತರಗತಿ ಪರೀಕ್ಷೆ ನಡೆಸುವ ಕುರಿತು ಪ್ರಶ್ನೆ ಮಾಡಿರುವ ಸುಪ್ರೀಂಕೋರ್ಟ್, ಪ್ರತಿ ವಿದ್ಯಾರ್ಥಿಗೆ 1.50 ಕೋಟಿ ರೂ. ವಿಮೆ ಜಾರಿ ಮಾಡಿದ ಮೇಲಷ್ಟೇ ಪರೀಕ್ಷೆ ನಡೆಸಿ ಎಂದಿದೆ. ಬೆಚ್ಚಿಬಿದ್ದ ಆಂಧ್ರ ಸರ್ಕಾರ ಸದ್ಯಕ್ಕೆ ಪರೀಕ್ಷೆ ನಡೆಸುವುದಿಲ್ಲ ಎಂದಿದೆ. ಈ ಸುರೇಶಕುಮಾರ್ ಮಾತ್ರ ಅವಸರಕ್ಕೆ ಬಿದ್ದಿದ್ದಾರೆ ಏಕೆ? ಇದು ಪರೀಕ್ಷಾ ವ್ಯಾಪಾರಿ ಲಕ್ಷಣವಲ್ಲವೇ’ ಎನ್ನುತ್ತಾರೆ ವಾಸುದೇವ ರೆಡ್ಡಿ.
ಹೀಗೆ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಪತ್ರಕರ್ತರು, ವಿದ್ಯಾರ್ಥಿ ಸಂಘಟನೆಗಳ ಮುಖ್ಯಸ್ಥರು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಸಮಾಜದ ವಿವಿಧ ವಲಯಗಳ ಪ್ರಜ್ಞಾವಂತರು, ಪರೀಕ್ಷೆ ನಡೆಸುವ ಶಿಕ್ಷಣ ಸಚಿವರ ನಡೆಯನ್ನು ಖಂಡತುಂಡವಾಗಿ ಟೀಕಿಸಿದ್ದಾರೆ. ಅದೊಂದು ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರ ಜೀವ ಮತ್ತು ಜೀವನವನ್ನೇ ಅಪಾಯಕ್ಕೆ ಸಿಲುಕಿಸುವ ನಡೆ ಮತ್ತು ಅಂತಹ ಜನವಿರೋಧಿ ನಡೆಯ ಹಿಂದೆ ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಕೋರತನ, ಪರೀಕ್ಷೆ ಸುತ್ತಾ ಇರುವ ವ್ಯವಹಾರ, ವಹಿವಾಟುಗಳು ಕಮೀಷನ್ ದಂಧೆಗಳ ನೆರಳಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಸುಪ್ರೀಂಕೋರ್ಟ್ ಆಂಧ್ರಪ್ರದೇಶ ವಿಷಯದಲ್ಲಿ ನೀಡಿದ ಆದೇಶ ರಾಜ್ಯಕ್ಕೂ ಅನ್ವಯವಾಗಲಿದೆ ಮತ್ತು ರಾಜ್ಯ ಸರ್ಕಾರ ಆ ಆದೇಶವನ್ನು ಉಲ್ಲಂಘಿಸಿ ಪರೀಕ್ಷೆ ನಡೆಸುವುದು ನ್ಯಾಯಾಂಗ ನಿಂದನೆಯಲ್ಲವೆ? ಎಂಬ ಪ್ರಶ್ನೆ ಕೂಡ ಕೇಳಿಬಂದಿದೆ. ಒಟ್ಟಾರೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸುವ ಶಿಕ್ಷಣ ಸಚಿವರ ನಿರ್ಧಾರ ದೊಡ್ಡ ವಿವಾದಕ್ಕೆ ಎಡೆಮಾಡಿದೆ.