“ಒಂದಾನೊಂದು ಕಾಲದಲ್ಲಿ ಜೆ.ಆರ್.ಡಿ. ಟಾಟಾ ಅವರ ಮುಂದಾಳತ್ವದಲ್ಲಿ ಏರ್ ಇಂಡಿಯಾ ಜಗತ್ತಿನ ಪ್ರತಿಷ್ಟಿತ ವಿಮಾನಯಾನ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಸಾಬೀತು ಮಾಡಿಕೊಂಡಿತ್ತು. ಇದನ್ನು ಮತ್ತೆ ಸಾಧಿಸಲು ಟಾಟಾಗಳಿಗೆ ಈಗ ಮತ್ತೊಂದು ಅವಕಾಶ ದೊರಕಿದೆ. ಜೆ.ಆರ್.ಡಿ. ಟಾಟಾ ಅವರು ಈಗ ನಮ್ಮೊಂದಿಗೆ ಇದ್ದಿದ್ದರೆ ಬಹಳ ಸಂತಸ ಪಡುತ್ತಿದ್ದರು,” ಎಂದು ರತನ್ ಟಾಟಾ ಶುಕ್ರವಾರದಂದು ಟ್ವೀಟ್ ಮಾಡಿದ್ದಾರೆ.
ಮೋದಿ ಸರಕಾರ ಸಾರ್ವಜನಿಕ ವಲಯದ ಸ್ವತ್ತಾಗಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಹಲವಾರು ವರ್ಷಗಳಿಂದ ಮಾರಲು ಯತ್ನಿಸುತ್ತಿತ್ತು. ಕೊನೆಗೂ 18,000 ಕೋಟಿ ರುಪಾಯಿಗಳನ್ನು ಬಿಡ್ ಮಾಡುವ ಮೂಲಕ ಟಾಟಾ ಕಂಪನಿಗಳು ಏರ್ ಇಂಡಿಯಾ ಸಂಸ್ಥೆಯನ್ನು ಕೊಂಡುಕೊಂಡವು.
1932 ರಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಸ್ಥಾಪಿಸಿ, 1953 ರಲ್ಲಿ ರಾಷ್ಟ್ರೀಕರಣಕ್ಕೆ ಅದನ್ನು ಕಳೆದುಕೊಂಡು 2021ರಲ್ಲಿ ಮತ್ತೆ ಸಂಸ್ಥೆಯನ್ನು ಕೊಂಡುಕೊಂಡದ್ದು ಟಾಟಾ ಕಂಪನಿಗಳ ಮತ್ತು ಸಂಸ್ಥೆಯ ಪಯಣ ಸಂಪೂರ್ಣ ವೃತ್ತಾಕಾರದಲ್ಲಿ ಸಾಗಿದೆ. ಇಂತಹ ಸಂದರ್ಭದಲ್ಲಿ ಜೆ.ಆರ್.ಡಿ. ಟಾಟಾ ಭಾರತದ ಸಮಾಜವಾದಿ ಆಡಳಿತಗಳ ಕಾಲದಲ್ಲಿ ಹೇಗೆ ವ್ಯವಹಾರ ನಡಿಸಿದರು ಎಂಬುದನ್ನು ಸ್ಮರಿಸಬಹುದು.
ಲಾಭ, ಖಾಸಗಿ ಉದ್ಯಮ ಇತ್ಯಾದಿ ಪರಿಕಲ್ಪನೆಗಳು ಕೆಟ್ಟ ಪದಗಳು ಎಂದು ಪರಿಗಣಿಸಲಾಗಿದ್ದ ಕಾಲದಲ್ಲಿ, ತಮ್ಮಂತಹ ಉದ್ಯಮಿಗಳು ಎದುರಿಸಿದ ಸಂಕಷ್ಟಗಳ ಕುರಿತು ಜೆ.ಆರ್.ಡಿ. ಟಾಟಾ ಹಳೆಯ ಸಂದರ್ಶನವೊಂದರಲ್ಲಿ ವಿಸ್ತಾರವಾಗಿ ಹಂಚಿಕೊಂಡಿದ್ದರು. ಆ ಕಾಲದ ರಾಜಕಾರಣಿಗಳು ಅವರನ್ನು ಹೇಗೆ ನಡೆಸಿಕೊಂಡಿದ್ದರು ಎಂಬುದನ್ನು ಈ ಸಂದರ್ಶನ ಹೊರ ತರುತ್ತದೆ.
1986ರ ಈ ಸಂದರ್ಶನದಲ್ಲಿ ನೆಹರು ಮತ್ತು ಇಂದಿರಾ ಗಾಂಧಿ ಅವರು ಟಾಟಾ ಅವರ ಬಾಯನ್ನು ಹೇಗೆ ಬಹಳ ಗೌರವಾನ್ವಿತವಾಗಿ ಮುಚ್ಚಿದ್ದರು ಎಂದು ಟಾಟಾ ಹಂಚಿಕೊಂಡಿದ್ದಾರೆ. ನೆಹರು ಅವರಿಗೂ ಟಾಟಾ ಅವರಿಗೂ ಎಲ್ಲಾ ಆರ್ಥಿಕ ನೀತಿಗಳ ಮತ್ತು ವಿದೇಶಾಂಗ ನೀತಿಗಳ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದವು ಎಂಬುದು ಇಬ್ಬರಿಗೂ ತಿಳಿದಿತ್ತು. ಹಾಗಾಗಿ ಆರ್ಥಿಕ ವಿಷಯಗಳ ಬಗ್ಗೆ ಟಾಟಾ ಅವರೊಂದಿಗೆ ಚರ್ಚೆ ನಡೆಸಲು ಸಾದ್ಯವೇ ಆಗಿರಲಿಲ್ಲ.

“ಅವರು (ನೆಹರು) ಮತ್ತು ಶ್ರೀಮತಿ ಗಾಂಧಿ ಅವರು ನನಗೆ ಬಾಯಿ ಮುಚ್ಚು ಎಂದು ಸೂಕ್ಷ್ಮವಾಗಿ ಹೇಳುವ ಸಭ್ಯ ಮಾರ್ಗಗಳನ್ನು ಕಂಡುಕೊಂಡಿದ್ದರು. ನಾನು ಆರ್ಥಿಕ ವಿಷಯಗಳ ಬಗ್ಗೆ ಚರ್ಚೆ ಆರಂಭಿಸಲು ಯತ್ನಿಸಿದಾಗಲೆಲ್ಲಾ ನೆಹರು ಕಿಟಕಿಯತ್ತ ತಿರುಗುತ್ತಿದ್ದರು. ಶ್ರೀಮತಿ ಗಾಂಧಿ ಅವರು ಮತ್ತೇನೋ ಮಾಡುತ್ತಿದ್ದರು,” ಎಂದು ಜೆ.ಆರ್.ಡಿ. ಹೇಳುತ್ತಾರೆ.
ಇಂದಿರಾ ಗಾಂಧಿ ಅವರು ಏನು ಮಾಡುತ್ತಿದ್ದರು ಎಂದು ಕೇಳಿದಾಗ, ಅವರು ಹೀಗೆ ಉತ್ತರಿಸಿದರು, “ಅವರು ಲಕೋಟೆಗಳನ್ನು ತೆರೆಯುತ್ತಾ ಪತ್ರಗಳನ್ನು ಹೊರ ತೆಗೆಯುತ್ತಿದ್ದರು. ಇದು ಈ ಕುರಿತು ಅವರಿಗೆ ಆಸಕ್ತಿ ಇಲ್ಲ ಎಂಬ ಸೂಕ್ಷ್ಮ ಸಂದೇಶವಾಗಿತ್ತು.”
ರಾಜೀವ್ ಗಾಂಧಿ ಅವರ ಆಡಳಿತದ ಬಗ್ಗೆ ಮಾತನಾಡುತ್ತಾ, ಮಾಜಿ ಪ್ರಧಾನಿಗಳಿಗೆ ಯುವಕರೆಂದರೆ ಬಹಳ ಆಸಕ್ತಿಯಿದ್ದ ಕಾರಣ ರತನ್ ಟಾಟಾ ಅವರನ್ನು ಹಲವಾರು ಭಾರಿ ಭೇಟಿ ಮಾಡಿದ್ದರೆಂದು ಜೆ.ಆರ್.ಡಿ. ಹೇಳುತ್ತಾರೆ. ಆದರೆ ರಾಜೀವ್ ಗಾಂಧಿ ಅವರನ್ನು ಭೇಟಿ ಮಾಡಲು ಅವರಿಗೆ ಅವಕಾಶವೇ ಬಂದಿರಲಿಲ್ಲ ಎಂದೂ ಹೇಳುತ್ತಾರೆ.
“ಇಷ್ಟು ವರ್ಷಗಳ ಸ್ವಾತಂತ್ರದಲ್ಲಿ ಯಾವುದೇ ಪ್ರಧಾನ ಮಂತ್ರಿಯಾಗಲೀ ಅಥವಾ ಭಾರತ ಸರಕಾರದ ಪ್ರತಿನಿಧಿಯಾಗಲೀ ನನ್ನತ್ತ ಬಂದು ಅಥವಾ ನನ್ನನ್ನು ಕರೆಸಿಕೊಂಡು ಜೆ, ಇದರ ಬಗ್ಗೆ ನಿಮಗೇನು ಅನಿಸುತ್ತದೆ? ಎಂದು ಕೇಳಿಯೇ ಇಲ್ಲ,” ಎಂಬುದನ್ನು 1986ರ ಈ ಸಂದರ್ಶನದಲ್ಲಿ ಅವರು ನಮಗೆ ತಿಳಿಸುತ್ತಾರೆ.
ಜೆ.ಆರ್.ಡಿ. ಅವರಿಗೆ ನೆಹರು ಅವರೊಂದಿಗೆ “ಅಸಮಾನ್ಯ ಸ್ನೇಹವೊಂದು ಇದ್ದಿದ್ದು,” ಸಮಾಜವಾದಿ ಆರ್ಥಿಕ ನೀತಿಗಳು ಅಥವಾ ಏರ್ ಇಂಡಿಯಾದ ರಾಷ್ಟ್ರೀಕರಣ ಅವರ ನಡುವೆ ಯಾವುದೇ ವೈಷಮ್ಯಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದು ಜೆ.ಆರ್.ಡಿ. ಅವರ ಕುರಿತಾದ ಟಾಟಾ ವೆಬ್ಸೈಟ್ ಹೇಳುತ್ತದೆ.

“ಏರ್ ಇಂಡಿಯಾದ ಘಟನೆ ಜೆ.ಆರ್.ಡಿ. ಅವರಿಗೆ ಖಂಡಿತವಾಗಿ ನೋವನ್ನುಂಟು ಮಾಡಿತು, ಆದರೆ ಸೇಡು ತೀರಿಸಿಕೊಳ್ಳುವ ಮನೋಭಾವ ಅವರದ್ದಾಗಿರಲಿಲ್ಲ. ಅವರು ಆ ಸಂಸ್ಥೆಯನ್ನು ಮುನ್ನಡೆಸಬೇಕು ಎಂಬುದು ನೆಹರು ಅವರ ಒತ್ತಾಯವಾಗಿತ್ತು ಮತ್ತು ಅವರು 1977ರ ವರೆಗೂ ಅದನ್ನೇ ಮಾಡಿದರು. ಅದಾದ ನಂತರ ಮತ್ತೊಂದು ಸರಕಾರ ಅವರನ್ನು ಹೊರ ನೂಕಿತು”
ಇಂದಿರಾ ಗಾಂಧಿ ಅವರು ಅಧಿಕಾರಕ್ಕೆ ಬಂದಾಗ ಮತ್ತೆ ಅವರನ್ನು ಚೇರ್ಮನ್ ಆಗಿ ಮಾಡಲಾಯಿತು, ಆದರೆ ಆ ಹೊತ್ತಿಗೆ ಅವರ ಜವಾಬ್ದಾರಿಯ ಹಸಿವು ಇಂಗಿತ್ತು.
1978ರಲ್ಲಿ ಮೊರಾರ್ಜಿ ದೇಸಾಯಿ ಅವರು ಜೆ.ಆರ್.ಡಿ. ಅವರನ್ನು ಚೇರ್ಮನ್ ಕುರ್ಚಿಯಿಂದ ಇಳಿಸಿದ ನಂತರ ಸಂಸ್ಥೆ ಕುಸಿಯಲು ಆರಂಭಿಸಿತು ಎಂದು ಏರ್ ಇಂಡಿಯಾದ ಸೂಕ್ಷ್ಮ ವೀಕ್ಷಕರು ಗಮನಿಸುತ್ತಾರೆ. 218 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 747 ವಿಮಾನವು ಮುಂಬೈ ಬಳಿ ಸಮುದ್ರಾಪಘಾತಕ್ಕೆ ಒಳಗಾದಾಗ ಸರಕಾರ ಬಲಿಪಶುವೊಂದರ ಹುಡುಕಾಟದಲ್ಲಿತ್ತು ಎಂದು ಹೇಳಲಾಗಿದೆ.
ಆದರೆ, ಇಂದಿರಾ ಗಾಂಧಿ ಅವರು ಈ ನಿರ್ಧಾರದ ವಿರುದ್ಧ ಮಾತನಾಡಿ ಜೆ.ಆರ್.ಡಿ. ಅವರಿಗೆ ಬೆಂಬಲವಾಗಿ ನಿಂತರು ಎಂದು ಅವರು ಉದ್ಯಮಿಗೆ ಬರೆದ ಪತ್ರಗಳು ಸೂಚಿಸುತ್ತವೆ. ಈ ಪತ್ರದ ಒಂದು ಪ್ರತಿಯನ್ನು ಮಾಜಿ ಒಕ್ಕೂಟ ಸಚಿವ ಹಾಗು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶನಿವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

“ನೀವು ಈಗ ಏರ್ ಇಂಡಿಯಾದ ಜೊತೆಗಿಲ್ಲ ಎಂಬುದರ ಬಗ್ಗೆ ನನಗೆ ಬೇಸರವಿದೆ. ನೀವು ಅನುಭವಿಸುತ್ತಿರುವಷ್ಟೇ ನೋವು ನೀವಿಲ್ಲದ ಏರ್ ಇಂಡಿಯಾ ಸಂಸ್ಥೆಯೂ ಅನುಭವಿಸುತ್ತಿರುತ್ತದೆ. ನೀವು ಕೇವಲ ಚೇರ್ಮನ್ ಆಗಿರಲಿಲ್ಲ. ನೀವು ಅದರ ಸಂಸ್ಥಾಪಕರಾಗಿದ್ದು ಅದನ್ನು ಅತ್ಯಂತ ವೈಯಕ್ತಿಕ ಕಳಕಳಿಯಿಂದ ಪೋಷಿಸುತ್ತಿದ್ದಿರಿ. ಅಲಂಕಾರಗಳಿಂದ ಹಿಡಿದು ಗಗನಸಖಿಯರ ಸೀರೆಯ ವರೆಗೂ ಪ್ರತೀ ಅಂಶದ ಬಗ್ಗೆಯೂ ನೀವು ತೋರುತ್ತಿದ್ದ ಆಸಕ್ತಿ ನಮ್ಮ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಕರೆದೊಯ್ದಿದೆ. ನಿಮ್ಮ ಬಗ್ಗೆ ಮತ್ತು ಸಂಸ್ಥೆಯ ಬಗ್ಗೆ ನಮಗೆ ಹೆಮ್ಮೆಯಿದೆ. ನಿಮ್ಮ ತೃಪ್ತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸರಕಾರ ನಿಮಗೆ ಯಾವಾಗಲೂ ಋಣಿಯಾಗಿರುತ್ತದೆ. ನಮ್ಮ ನಡುವೆ ಕೆಲವು ತಪ್ಪು ತಿಳುವಳಿಕೆಗಳು ಇದ್ದವು. ಆದರೆ ನನಗೆ ಸರಕಾರ ನಡೆಸುವಾಗ ಇದ್ದಂತಹ ಒತ್ತಡಗಳ ಬಗ್ಗೆ ನಿಮಗೆ ತಿಳಿಸಲಾಗಿಲ್ಲ. ಇದರ ಬಗ್ಗೆ ಹೆಚ್ಚೇನು ಹೇಳಲು ನಾನು ಇಚ್ಛಿಸುವುದಿಲ್ಲ. ನಿಮಗೆ ಒಳಿತಾಗಲಿ ಎಂದಷ್ಟೇ ಆಶಿಸುತ್ತೇನೆ,” ಎಂದು ಅಧಿಕಾರ ಕಳೆದುಕೊಂಡಿದ್ದ ಇಂದಿರಾ ಗಾಂಧಿ ಅವರು ಜೆ.ಆರ್.ಡಿ. ಅವರಿಗೆ ಪತ್ರ ಬರೆದಿದ್ದರು.
ಕೃಪೆ: ಟೈಮ್ಸ್ ನೌ ನ್ಯೂಸ್









