
ಜಾತಿಗಣತಿ ಬಿಡುಗಡೆ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ದಾವಣಗೆರೆ ಜಿಲ್ಲಾ ಅಹಿಂದ ಹಾಗೂ ಶೋಷಿತ ವರ್ಗಗಳ ಮುಖಂಡರು ಜಾತಿ ಜನಗಣತಿ ಬಿಡುಗಡೆಗೆ ಒತ್ತಾಯಿಸಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಮುಖಂಡರು ಯಾರ ಒತ್ತಡಕ್ಕೂ ಮಣಿಯದೇ ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಲಿ. ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ವರದಿ ಬಿಡುಗಡೆ ಆಗುವ ಮುನ್ನ ಅವೈಜ್ಞಾನಿಕ ಅಂತ ಹೇಳೊದು ತಪ್ಪು ಅಂತ ಮುಖಂಡರು ಹೇಳಿದ್ದಾರೆ.
ಕೋಲಾರದಲ್ಲಿ ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಅಂಜನಿ ಸೋಮಣ್ಣ, ಜಾತಿ ಜನಗಣತಿ ವರದಿ ಜಾರಿಗೆ ಕೆಲ ಶಾಸಕರು ವಿರೋಧ ಮಾಡಿರುವ ವಿಚಾರಕ್ಕೆ ಟಾಂಟ್ ಕೊಟ್ಟಿದ್ದಾರೆ. ಜಾತಿ ಜನಗಣತಿ ಜಾರಿ ಆಗದಿದ್ದರೆ ಹೋರಾಟ ಮಾಡ್ತೀವಿ, ಜಾತಿ ಜನಗಣತಿ ವಿರೋಧಿಸುವ ಶಾಸಕರು ಮುಂದೆ ಹೇಗೆ ಗೆಲ್ತಾರೆ..? ನೋಡೊಣ ಎಂದು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಜಾತಿ ಸಮೀಕ್ಷೆಯನ್ನು ಜಾರಿಗೊಳಿಸಬೇಕು. ಯಾರೇ ವಿರೋಧ ಮಾಡಿದರೂ ಕೂಡ ಜಾತಿ ಜನಗಣತಿ ವರದಿ ಅನುಷ್ಟಾನಕ್ಕೆ ತರಬೇಕು. ನಮ್ಮ ಭಾಗವನ್ನು ನಮಗೆ ಕೊಡಿ, ನಾವು ಯಾರ ತಟ್ಟೆಗೂ ಕೈ ಹಾಕುತ್ತಿಲ್ಲ ಎಂದು ಆಗ್ರಹ ಮಾಡಿದ್ದಾರೆ.

ಜಾತಿ ಜನಗಣತಿ ವರದಿ ಜಾರಿ ಮಾಡದಿದ್ದರೆ ನಾವು ಪ್ರಬಲವಾಗಿ ವಿರೋಧ ಮಾಡುತ್ತೇವೆ. ತೀವ್ರ ಪ್ರತಿಭಟನೆ ಮಾಡುತ್ತೇವೆ. ನಮ್ಮ ಮತಗಳಿಂದ ಗೆದ್ದಿರುವವರು ನಮಗೆ ವಿರೋಧ ಮಾಡಿದರೆ ತಪ್ಪು. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ವರದಿಯನ್ನು ಸ್ವೀಕರಿಸಲೇ ಇಲ್ಲ. ಎಚ್.ಡಿ ಕುಮಾರಸ್ವಾಮಿ ಅವರಿಗೆ ವರದಿ ಬಗ್ಗೆ ಮಾತನಾಡಲು ಹಕ್ಕು, ನೈತಿಕತೆ ಇಲ್ಲ. ಸಾಮಾಜಿಕ ಸ್ಥಿತಿಗತಿಗಳಂತೆ ಆಯಾ ಜಾತಿಗನುಗುಣವಾಗಿ ಮೀಸಲಾತಿ ನೀಡಬೇಕು. ಸಮೀಕ್ಷೆ ಕುರಿತು ಚರ್ಚೆ ನಡೆಯಲಿ, ತಪ್ಪಿದ್ದರೆ ಪರಿಶೀಲನೆ ಆಗಲಿ. ವರದಿ ಜಾರಿಯಾಗದಿದ್ದರೆ, ಪ್ರತಿಯೊಬ್ಬ ಶಾಸಕರ ಮನೆಗೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಶಾಸಕರಿಗೂ ಘೇರಾವ್ ಮಾಡುತ್ತೇವೆ. ಸಿದ್ದರಾಮಯ್ಯ ಅವ್ರನ್ನ ಮುಟ್ಟಿದರೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಬರೋದು ಕಷ್ಟ ಇದೆ ಎಂದು ಕಾಂಗ್ರೆಸ್ ಹೈಕಮಾಂಡ್ಗೂ ಸಂದೇಶ ರವಾನಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾತನಾಡಿರುವ ರಾಜ್ಯ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಅಂಜನಿ ಸೋಮಣ್ಣ ಜಾತಿ ಜನಗಣತಿ ಕೂಡಲೇ ಜಾರಿ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.