ನಾ ದಿವಾಕರ
ಇಡೀ ಸಮಾಜವೇ ಹಲವು ದಿಕ್ಕುಗಳಲ್ಲಿ ವಿಘಟಿತವಾಗಿ, ಹಲವಾರು ಕವಲುಗಳಲ್ಲಿ ಒಡೆಯುತ್ತಾ ಸಾಮಾನ್ಯ ಜನಜೀವನದ ನಡುವೆ ಪ್ರಕ್ಷುಬ್ಧತೆಯ ಗೋಡೆಗಳನ್ನು ಕಟ್ಟುವುದರಲ್ಲಿ ನಿರತವಾಗಿರುವ ಸಂದಿಗ್ಧ ಕಾಲದಲ್ಲಿ ʼಸುಧಾರಣೆ-ಪರಿವರ್ತನೆ-ಬದಲಾವಣೆʼ ಮುಂತಾದ ಕ್ಲಿಷ್ಟ ಪದಗಳು ಕ್ಲೀಷೆಗಳಾಗುತ್ತಾ ಹೋಗುತ್ತವೆ. ಚರಿತ್ರೆಯಲ್ಲಿ ಆಗಿಹೋದ ದಾರ್ಶನಿಕರ ತತ್ವಾದರ್ಶಗಳು, ಸಿದ್ದಾಂತಗಳು ಹಾಗೂ ಕೆಲವೊಮ್ಮೆ ದರ್ಶನಗಳೂ ಸಹ ಸಮಾಜದೊಳಗಿನ ಸಮಸ್ತರನ್ನೂ ಸಮನ್ವಯದ ನೆಲೆಯಲ್ಲಿ ಒಂದಾಗಿಸುವುದರ ಬದಲು ಮತ್ತಷ್ಟು ವಿಘಟನೆಯತ್ತ ಕೊಂಡೊಯ್ಯುವ ಸಂದಿಗ್ಧತೆಯನ್ನೂ ನಾವು ಎದುರಿಸುತ್ತಿದ್ದೇವೆ. ತತ್ವ-ಸಿದ್ಧಾಂತಗಳು ಐಕ್ಯತೆಯ ಸೇತುವೆಗಳಾಗುವುದರ ಬದಲು ಅನೈಕ್ಯತೆಯ ಕಂದರಗಳಾಗುತ್ತಿರುವುದಕ್ಕೆ ಕಾರಣ ನಾವೇ ಸೃಷ್ಟಿಸಿಕೊಂಡಿರುವ ಅಸ್ಮಿತೆಗಳ ಚೌಕಟ್ಟುಗಳು ಮತ್ತು ಸಿದ್ಧಮಾದರಿಯ ಸಾಂಸ್ಕೃತಿಕ ನೆಲೆಗಳು.
![](https://pratidhvani.com/wp-content/uploads/2024/01/WhatsApp-Image-2024-01-11-at-10.09.04-PM-jpeg.webp)
ವರ್ತಮಾನದ ಭಾರತ ಇಂತಹ ಒಂದು ಕಾಲಘಟ್ಟವನ್ನು ತಲುಪಿದೆ. ಜಡಗಟ್ಟಿಹೋಗಬೇಕಿದ್ದ ಪ್ರಾಚೀನ ನಡವಳಿಕೆಗಳೆಲ್ಲವೂ ಮರುಹುಟ್ಟು ಪಡೆಯುತ್ತಾ, ರೂಪಾಂತರಗೊಂಡು, ನವನವೀನ ಮಾದರಿಯಲ್ಲಿ ಸಮಾಜದ ಎಲ್ಲ ಸ್ತರಗಳಲ್ಲೂ ನುಸುಳುತ್ತಿವೆ. ಮತ್ತೊಂದೆಡೆ ಈ ರೂಪಾಂತರಿ ಪ್ರವೃತ್ತಿಗಳನ್ನು ಸಮರ್ಥಿಸಿ ಪೋಷಿಸುವಂತಹ ಸಾಂಸ್ಕೃತಿಕ ಚಿಂತನಾ ವಾಹಿನಿಗಳು, ಬೋಧನಾ ಮಾರ್ಗಗಳು ಪುನರಾವರ್ತಿತ ಧಾರ್ಮಿಕ ಆಚರಣೆಗಳ ಮೂಲಕ ಮನೆಮನೆಯಲ್ಲಿ ನೆಲೆಗೊಳ್ಳುತ್ತಿವೆ. ಮಿಲೆನಿಯಂ ಜನಸಂಖ್ಯೆ ಎಂದೇ ಕರೆಯಲಾಗುವ ಒಂದು ಸಮಾಜ, 20-30ರ ವಯೋಮಾನದ ಒಂದು ಬೃಹತ್ ಸಮೂಹ, ಇಂತಹ ಸಂಕೀರ್ಣತೆಗಳ ನಡುವೆಯೇ, ಭಾರತದ ನೆಲಮೂಲ ಸಂಸ್ಕೃತಿಯಲ್ಲಿ ಅಡಗಿರುವ ಮೌಲ್ಯಗಳನ್ನು ಅರಿಯದೆ, ಬೌದ್ಧಿಕವಾಗಿ ಯಾವುದೋ ಒಂದು ಅಸ್ಮಿತೆಯ ಕೋಶಬಂದಿಗಳಾಗಿ, ನವ ಉದಾರವಾದ-ಮತಾಧಾರಿತ ರಾಜಕಾರಣದಿಂದ ಭ್ರಮಾಧೀನರಾಗಿದ್ದಾರೆ.
ರಂಗಭೂಮಿಯ ಜವಾಬ್ದಾರಿ
ಚಿಕಿತ್ಸಕ ಗುಣದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ನಾಯಕತ್ವವೇ ಇಲ್ಲದ ಇಂತಹ ವಿಷಮ ಸನ್ನಿವೇಶದಲ್ಲಿ ಸಮಾಜ ಸುಧಾರಣೆ ಮತ್ತು ಪರಿವರ್ತನೆ ಎಂಬ ಪದಗಳು ಬೇರೆಯೇ ಅರ್ಥ ಪಡೆದುಕೊಳ್ಳುತ್ತವೆ. ಈ ಪದಗಳನ್ನು ಅಕ್ಷರಶಃ ಸಾಕಾರಗೊಳಿಸುವ ಬಹುದೊಡ್ಡ ಜವಾಬ್ದಾರಿ ನಾಗರಿಕತೆಯ ಮೇಲಿರುವಂತೆಯೇ, ಸಮಾಜವನ್ನು ಪ್ರತಿನಿಧಿಸುವ ಹಾಗೂ ಅದರ ಅಂತರಾಳವನ್ನು ಬಿಂಬಿಸುವ ಕಲಾಭಿವ್ಯಕ್ತಿಯ ಸಾಧನಗಳ ಮೇಲಿದೆ. ಸಾಹಿತ್ಯ, ಕಲೆ ಮತ್ತು ರಂಗಭೂಮಿ ಈ ಜವಾಬ್ದಾರಿಯನ್ನು ಸ್ವಾಪೇಕ್ಷೆಯಿಂದ ಹೊರದೆ ಹೋದರೆ ಬಹುಶಃ ಈ ಮಿಲೆನಿಯಂ ಜನಸಂಖ್ಯೆ ಭ್ರಮಾಧೀನ ಸ್ಥಿತಿಯಲ್ಲೇ ವೃದ್ಧಾಪ್ಯವನ್ನೂ ಪೂರೈಸಿ ಪರ್ಯವಸಾನಗೊಳ್ಳುತ್ತದೆ. ಈ ಮೂರೂ ವಲಯಗಳಲ್ಲಿರುವ ಸೃಜನಾತ್ಮಕತೆ, ಬೌದ್ಧಿಕ ಸ್ವಾಯತ್ತತೆ ಹಾಗೂ ಮಾರ್ಗ ಸ್ವಾತಂತ್ರ್ಯದ ಅಂಶಗಳೇ ಸಮಾಜದಲ್ಲಿ ಆಶಾಭಾವನೆ ಮೂಡಿಸಲು ನೆರವಾಗುತ್ತದೆ.
![](https://pratidhvani.com/wp-content/uploads/2024/01/WhatsApp-Image-2024-01-11-at-10.08.48-PM-jpeg.webp)
ಶೆಟವಿ ತಾಯಿ ಪಾತ್ರಧಾರಿಯ (ಪುಣ್ಯಶ್ರೀ) ಅಭಿನಯ ಬಹುಕಾಲ ನೆನಪಿನಲ್ಲಿರುವಂತಹುದು ಎಂದರೆ ಉತ್ಪ್ರೇಕ್ಷೆಯಾಗಲಾರದು. ಒಟ್ಟಾರೆಯಾಗಿ ನೋಡಿದಾಗ ಎಲ್ಲ ಕಲಾವಿದರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿರುವುದು ಸಹ ಗಮನಾರ್ಹ. ಯಾವುದೇ ರಂಗಪ್ರಯೋಗದಲ್ಲಿ ಅವಶ್ಯವಾಗಿ ಇರಬೇಕಾದ ತಲ್ಲೀನತೆ, ತನ್ಮಯತೆ, ಭಾವಶ್ರದ್ಧೆ ಹಾಗೂ ತೊಡಗುವಿಕೆಯನ್ನು ಎಲ್ಲ ಕಲಾವಿದರಲ್ಲೂ ಗುರುತಿಸಬಹುದು. ಆಂಗಿಕ-ಭಾವಾಭಿವ್ಯಕ್ತಿಯಲ್ಲಿ, ಸಂಭಾಷಣೆಯಲ್ಲಿ ಕಾಣುವ ಸಮನ್ವಯತೆ ಈ ಯುವ ಕಲಾವಿದರ ಪ್ರೌಢಿಮೆಯ ಬಗ್ಗೆ ಮೆಚ್ಚುಗೆ ಮೂಡಿಸುವಂತಿದೆ. ರಂಗಭೂಮಿಯ ಒಂದು ಅತ್ಯವಶ್ಯ ಲಕ್ಷಣ ಎನ್ನಬಹುದಾದ ಸೃಜನಶೀಲತೆಗೆ ಪೂರಕವಾಗಿ ಕಥಾ ಹಂದರವನ್ನು ರಂಗರೂಪದಲ್ಲಿ ಪ್ರಸ್ತುತಪಡಿಸುವ ಕಲಾವಿದರಲ್ಲಿ ಇರಬೇಕಾದ ಸಮನ್ವಯದ ಭಾವ ʼ ಮಹಾಮಾಯಿ ʼ ನಾಟಕದ ಯುವ ತಂಡದಲ್ಲಿ ಕಾಣಬಹುದು. ತಮ್ಮ ಪ್ರಥಮ ಪ್ರಯೋಗದಲ್ಲೇ ಇದನ್ನು ದಾಖಲಿಸಿರುವುದು ನಟನ ಶಾಲೆಯ ಈ ತಂಡದ ಹೆಗ್ಗಳಿಕೆ.
ʼಮಹಾಮಾಯಿʼ ಡಿಪ್ಲೊಮೊ ವಿದ್ಯಾರ್ಥಿಗಳ ಪ್ರಥಮ ಪ್ರಯೋಗವಾಗಿರುವುದರಿಂದ ವಿಮರ್ಶಾತ್ಮಕವಾಗಿ ನೋಡುವುದು ಅಪೇಕ್ಷಣೀಯ ಅಲ್ಲ. ಆದರೂ ಭವಿಷ್ಯದ ಭರವಸೆಗಳಂತೆ ಕಾಣುವ ಕಲಾವಿದರ ಹಿತದೃಷ್ಟಿಯಿಂದ, ನೇಪಥ್ಯದಲ್ಲಿ ನಿಂತು ನೋಡಿದಾಗ ನಿರ್ದೇಶಕರು ಗಮನಿಸಬೇಕಾದ ಕೆಲವು ಅಂಶಗಳನ್ನು ಉಲ್ಲೇಖಿಸೋಣ ಎನಿಸುತ್ತದೆ. ಒಂದು ಸಂಕೀರ್ಣ ಕಥಾವಸ್ತುವಿನ, ಗಂಭೀರ ವಿಷಯವನ್ನು ಉದ್ದೇಶಿಸುವ ʼಮಹಾಮಾಯಿʼಯಲ್ಲಿ ಹಾಸ್ಯದ ಲೇಪನ ತುಸು ಹೆಚ್ಚಾದಂತೆ ಭಾಸವಾಗುತ್ತದೆ. ತಕ್ಷಣದ ಪ್ರೇಕ್ಷಕರಿಗೆ ಆಪ್ಯಾಯಮಾನವಾಗಿ ಕಾಣಬಹುದಾದರೂ ನಾಟಕ ವಸ್ತುವಿನ ಗಂಭೀರತೆಯ ದೃಷ್ಟಿಯಿಂದ, ಹಾಸ್ಯ ಸನ್ನಿವೇಶಗಳನ್ನು ಕಡಿಮೆ ಮಾಡಬಹುದು ಅಥವಾ ತೆಳುವಾಗಿಸಬಹುದು. ಒಂದೆರಡು ಕಡೆ, ಸಮೂಹ ಧ್ವನಿಯಲ್ಲಿ ಅಸ್ಪಷ್ಟತೆ ಕಂಡುಬರುತ್ತದೆ. ಒಂದೆರಡು ದೃಶ್ಯಗಳಲ್ಲಿ ಕಲಾವಿದರು ಇನ್ನೂ ಹೆಚ್ಚಿನ ತನ್ಮಯತೆ-ತಲ್ಲೀನತೆಯನ್ನು ರೂಢಿಸಿಕೊಳ್ಳಬಹುದು ಎನಿಸುತ್ತದೆ.
ಒಟ್ಟಾರೆಯಾಗಿ ನಟನ ರಂಗಶಾಲೆಯ ಡಿಪ್ಲೊಮಾ ವಿದ್ಯಾರ್ಥಿಗಳ ಈ ಪ್ರಥಮ ಪ್ರಯೋಗ ಪ್ರೇಕ್ಷಕರ ಮನ ಸೆಳೆಯುತ್ತದೆ. ಈ ಕಲಾವಿದರಲ್ಲಿ ಕನ್ನಡ ರಂಗಭೂಮಿಯ ಭವಿಷ್ಯವನ್ನು ಕಾಣುವ ಆಶಾ ಭಾವನೆ ಮೂಡುತ್ತದೆ. ಇದೇ ಮಟ್ಟದ ಸೃಜನಶೀಲತೆಯೊಂದಿಗೆ ಇಂತಹುದೇ ಸಂದೇಶಾತ್ಮಕ ರಂಗಪ್ರಯೋಗಗಳಿಗೆ ಈ ಯುವ ಕಲಾವಿದರು ತೆರೆದುಕೊಳ್ಳಲಿ ಎಂಬ ಆಶಯದೊಂದಿಗೇ, ಇಂತಹ ಪ್ರಯೋಗಗಳಿಗೆ ಕಾರಣಕರ್ತೃವಾದ ಮಂಡ್ಯ ರಮೇಶ್ ಮತ್ತು ಅವರ ನಟನ ಸಂಸ್ಥೆ ಇನ್ನೂ ವಿಸ್ತರಿಸುತ್ತಾ, ಕನ್ನಡ ರಂಗಸೇವೆಯಲ್ಲಿ ಹೊಸ ಹೆಜ್ಜೆಗಳನ್ನು ಮೂಡಿಸುವತ್ತ ಸಾಗಲಿ ಎಂದು ಆಶಿಸುತ್ತೇನೆ.
(ಮಹಾಮಾಯಿ ನಾಟಕದ ಎರಡನೆ ಪ್ರದರ್ಶನ ಇದೇ 7ನೆಯ ತಾರೀಕು ನಟನದಲ್ಲಿ ಪ್ರದರ್ಶನಗೊಂಡಿತ್ತು)
![](https://pratidhvani.com/wp-content/uploads/2024/01/WhatsApp-Image-2024-01-11-at-10.08.57-PM-jpeg.webp)