ತಪ್ಪುಗಳು ಏನೋ ಒಂದು ಕಾರಣದಿಂದ ಆಗಿಲ್ಲ. ದುರುದ್ದೇಶದಿಂದಲೇ ಬಸವಣ್ಣ, ಅಂಬೇಡ್ಕರ್, ಕುವೆಂಪು ಇಂಥಹ ದೊಡ್ಡವರ ಬಗ್ಗೆ ತಿರುಚಲಾಗಿದೆ ಎಂದು ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಕೆ. ಪಾಟೀಲ್ ಕಿಡಿಕಾಡಿದ್ದಾರೆ.
ಗದಗ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಡೆಗೆ ನಮ್ಮ ಸಾರಸ್ವತ ಲೋಕ ಎದ್ದು ನಿಂತು ಬಡಿಗೆ ತೆಗೆದುಕೊಂಡಿದೆ. ಅದಕ್ಕಾಗಿ ಇವರಿಗೆ ಸ್ವಲ್ಪ ಬುದ್ಧಿ ಬಂದಿದೆ. ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬಿಜೆಪಿ ಪಕ್ಷ ಏನಬೇಕಾದರೂ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಪಠ್ಯಕ್ರಮದ ವಿಚಾರದಲ್ಲಿಯೂ ಕೂಡ ಸಾಕಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ದೇಶದಲ್ಲಿ ಏನು ನಡೆದಿದೆ? ಇತಿಹಾಸ ತಿರುಚುವುದು, ಲಿಟ್ರೇಚರ್ ಬದಲಾಯಿಸುವುದು ಹೀಗೆ ಕೊಡುತ್ತಾ ಹೋದರೆ ಸಾಕಷ್ಟು ಉದಾಹರಣೆಗಳಿವೆ. ಬಸವಣ್ಣ, ಅಂಬೇಡ್ಕರ, ಬುದ್ಧ, ಕುವೆಂಪುವರ ಇತಿಹಾಸಗಳನ್ನೇ ಪಠ್ಯಪುಸ್ತಕದಲ್ಲಿ ತಿರುಚುವ ಕೆಲಸಗಳಾದರೆ ಹೇಗೆ? ಬಿಜೆಪಿಯವರು ಇನ್ನೇನು ಬಿಡುತ್ತಾರೆ ಹೇಳಿ? ಎಂದು ಪ್ರಶ್ನಿಸಿದರು.

ಟಿಪ್ಪುವಿನ ವಿಷಯದಲ್ಲಿ ಕೋಮುವಾದಿ ಬಣ್ಣ ಕೊಟ್ಟು ಪಾರಾಗಿ ಹೋಗುತ್ತಿದ್ದರು. ಈಗ ಬಸವಣ್ಣನ ವಿಷಯದಲ್ಲಿ ಏನು ಹೇಳುತ್ತಿರಿ? ನಿಮ್ಮ ಹೊಟ್ಟೆಯಲ್ಲೀಯೇ ಇಷ್ಟು ಕೆಟ್ಟ ಇದೆ ಅನ್ನೋದನ್ನು ತೋರಿಸಿಕೊಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.