ಬೆಂಗಳೂರು : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಹೈಕೋರ್ಟ್ ದೊಡ್ಡ ಆಘಾತ ನೀಡಿದೆ. ಸುಬ್ಬಾರೆಡ್ಡಿಯ ಆಯ್ಕೆ ಅಸಿಂಧುಗೊಳಿಸುವ ಮೂಲಕ ಕಾಂಗ್ರೆಸ್ ಶಾಸಕನಿಗೆ ಶಾಕಿಂಗ್ ಆದೇಶ ಹೊರಡಿಸಿದೆ.

ಕಳೆದ 2023ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವೆಸಗಿರುವ ಆರೋಪದ ಮೇಲೆ ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ. ಮುನಿರಾಜು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಈ ಆದೇಶವನ್ನು ನ್ಯಾಯಾಲಯವು ರಾಜ್ಯ ಚುನಾವಣಾ ಆಯೋಗ ಹಾಗೂ ವಿಧಾನಸಭೆಯ ಕಾರ್ಯದರ್ಶಿಗೂ ರವಾನಿಸಿದೆ.
ಇದನ್ನೂ ಓದಿ : Darshan Thoogudeepa: ಇಂದು ದರ್ಶನ್ ಹುಟ್ಟುಹಬ್ಬ: ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ?
ಇನ್ನೂ ಸುಬ್ಬಾರೆಡ್ಡಿಗೆ 10 ಸಾವಿರ ರೂಪಾಯಿಗಳಷ್ಟು ದಂಡ ವಿಧಿಸಿ ನ್ಯಾಯಾಲಯವು ಆದೇಶಿಸಿದೆ. ಮುಖ್ಯವಾಗಿ ಚುನಾವಣೆಯಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷಪೂರಿತವಾಗಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಮುನಿರಾಜು ಹೈಕೋರ್ಟ್ ಕದ ತಟ್ಟಿದ್ದರು. ಅಲ್ಲದೆ ಎದುರಾಳಿಯ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ, ದುರುದ್ದೇಶದಿಂದ ಕೂಡಿದ ಆರೋಪವಾಗಿದೆ ಎಂದು ಸುಬ್ಬಾರೆಡ್ಡಿಯೂ ಸಹ ಕೋರ್ಟ್ಗೆ ತಿಳಿಸಿದ್ದರು.
ಆದರೆ ವಾದ – ಪ್ರತಿವಾದಗಳನ್ನು ಆಲಿಸಿದ ಬಳಿಕ ಹೈಕೋರ್ಟ್ ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿದ್ದು, ಅಲ್ಲದೆ ಬಿಜೆಪಿ ಅಭ್ಯರ್ಥಿ ಮುನಿರಾಜು ಅವರ ಗೆಲುವಾಗಿದೆ ಎಂದೂ ಸಹ ಘೋಷಣೆ ಮಾಡಿಲ್ಲ. ಹೀಗಾಗಿ ಹೈಕೋರ್ಟ್ ಎರಡೂ ಜನರಿಗೆ ತೀವ್ರ ಹಿನ್ನಡೆಯಾಗುವಂತಹ ಆದೇಶ ಹೊರಡಿಸಿದೆ.
ಬಾಗೇಪಲ್ಲಿಗೆ ಮರು ಚುನಾವಣೆ..?
ಅಸಿಂಧು ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಯಾಗುವ ತನಕ ಆದೇಶಕ್ಕೆ ತಡೆ ನೀಡುವಂತೆ ಕಾಂಗ್ರೆಸ್ ಶಾಸಕನ ಪರ ವಕೀಲರಾದ ಜಯಕುಮಾರ್ ಪಾಟೀಲ್ ಕೋರಿದ್ದಾರೆ. ಆದರೆ ಇದಕ್ಕೆ ದೂರುದಾರರ ಪರ ಹಿರಿಯ ನ್ಯಾಯವಾದಿ ನಳಿನಾ ಮಾಯಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಹೈಕೋರ್ಟ್, ತನ್ನ ಅಸಿಂಧು ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೇ ಸುಬ್ಬಾರೆಡ್ಡಿಗೆ ಸ್ವಲ್ಪ ಮಟ್ಟಿಗೆ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ. ಆದರೆ ಹೈಕೋರ್ಟ್ ನೀಡಿರುವ ಆದೇಶಕ್ಕೆ 6 ತಿಂಗಳ ಒಳಗಾಗಿ ಸುಪ್ರೀಂಕೋರ್ಟ್ ತಡೆಯಾಜ್ಞೆ ಸಾಧ್ಯವಾಗದಿದ್ದರೆ ಬಾಗೇಪಲ್ಲಿ ಕ್ಷೇತ್ರದ ಜನತೆ ಮರು ಚುನಾವಣೆ ಎದುರಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ಹಿನ್ನೆಲೆ ಮುಂದಿನ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ






