ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಪ್ರಚಾರ ಮಾಡುತ್ತಿರುವ ನಾಯಕರು ಇವತ್ತೂ ಕೂಡ ಬಿಡುವಿಲ್ಲದ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನಿನ್ನೆ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇವತ್ತು ಬೆಳಗ್ಗೆ 10 ಗಂಟೆಗೆ ದಾವಣಗೆರೆಯಿಂದ ಹೊರಟು, ಕೊಡಗು ಜಿಲ್ಲೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಅಪ್ಪಚ್ಚು ರಂಜನ್ ಪರವಾಗಿ ಮತಯಾಚನೆ ಮಾಡಿದ್ದಾರೆ. ಮಧ್ಯಾಹ್ನ ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಪರವಾಗಿ ಮತಯಾಚಿಸಿದ್ದಾರೆ. ಸಂಜೆ 4 ರಿಂದ 4.45ರ ತನಕ ಬೈಂದೂರು ಕ್ಷೇತ್ರದಲ್ಲಿ ಗುರುರಾಜ್ ಗಂಟಿಹೊಳೆ ಪರವಾಗಿ ರೋಡ್ಶೋ ಮಾಡಿದ್ದು, ಸಂಜೆ 5.40ಕ್ಕೆ ವೇದವ್ಯಾಸ್ ಕಾಮತ್ ಪರವಾಗಿ ಮಂಗಳೂರಿನಲ್ಲಿ ರೋಡ್ ಶೋ ಮುಗಿಸಿ ಗುಪ್ತ ಸಭೆ ಬಳಿಕ ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ನಾಯಕರ ಭಾಷಣದ ವೇಳೆ ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದಾರೆ.
ಕರ್ನಾಟಕದಲ್ಲೇ ಬೀಡು ಬಿಟ್ಟಿರುವ ಬಿಜೆಪಿ ಅಧ್ಯಕ್ಷ ನಡ್ಡಾ..!
ಕರ್ನಾಟಕ ಪ್ರವಾಸದಲ್ಲೇ ಬೀಡು ಬಿಟ್ಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬೆಳಗ್ಗೆ 9.25ಕ್ಕೆ ಶಿವಮೊಗ್ಗದಿಂದ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ಧಾರವಾಡದ ಕಲಘಟಕಿ ಕ್ಷೇತ್ರದಲ್ಲಿ ನಾಗರಾಜ್ ಛಬ್ಬಿ ಪರವಾಗಿ ರೋಡ್ ಶೋ ಮಾಡಿದ್ದಾರೆ. ಮಧ್ಯಾಹ್ನ 1.15ಕ್ಕೆ ಗದಗದ ರೋಣಾ ಕ್ಷೇತ್ರದಲ್ಲಿ ಕಳಕಪ್ಪ ಬಂಡಿ ಪರವಾಗಿ ಸಾರ್ವಜನಿಕ ಸಭೆಯಲ್ಲಿ ಮತಯಾಚನೆ ಮಾಡಿದ್ದಾರೆ. ಸಂಜೆ 4 ಗಂಟೆಗೆ ದಾವಣಗೆರೆಯ ಮಾಯಕೊಂಡ ಕ್ಷೇತ್ರದಲ್ಲಿ ಬಸವರಾಜ ನಾಯಕ್ ಪರವಾಗಿ ರೋಡ್ ಶೋ ಕೂಡ ಮಾಡಿದ್ದಾರೆ. ಇನ್ನು ದಾವಣಗೆರೆಯಲ್ಲಿ ಸ್ಥಳೀಯ ನಾಯಕರ ಜೊತೆಗೆ ಸಭೆ ನಡೆಸಿ ದಾವಣೆಗೆರೆಯಲ್ಲೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮೈಸೂರಿನಲ್ಲಿ ಪ್ರಚಾರ ಮಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಒಕ್ಕಲಿಗರನ್ನು ಕೆರಳಿಸುವ ಹೇಳಿಕೆ ನೀಡಿದ್ದಾರೆ. ಆದರೂ ಕನ್ನಡಿಗರನ್ನು ಯಾಮಾರಿಸುವ ಕೆಲಸವನ್ನ ಬಿಜೆಪಿ ನಾಯಕರು ಚೆನ್ನಾಗಿಯೇ ಮಾಡಿದ್ದಾರೆ.
ಮತ್ತೆ ಒಕ್ಕಲಿಗರ ಸ್ವಾಭಿಮಾನ ಕೆಣಕಿದ ರಾಜನಾಥ್ ಸಿಂಗ್..
ಮೈಸೂರಿನಲ್ಲಿ ಅಬ್ಬರದ ಪ್ರಚಾರ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ತುಂಬಾ ದಿನದ ನಂತರ ನಾನು ಮೈಸೂರಿಗೆ ಬಂದಿದ್ದೇನೆ. ಮೈಸೂರಿನಲ್ಲಿ ಅನೇಕ ಜನ ಮಹಾಪುರುಷರು ಹುಟ್ಟಿದ್ದಾರೆ. 2018ರಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ. ಇನ್ನು ಉರಿಗೌಡ, ನಂಜೇಗೌಡ ಬಗ್ಗೆ ಪ್ರಸ್ತಾಪ ಮಾಡಿದ್ದ ಭಾರತೀಯ ಜನತಾ ಪಾರ್ಟಿ ಯೂಟರ್ನ್ ತೆಗೆದುಕೊಂಡಿತ್ತು. ಆದರೆ ಇಂದಿನ ಸಭೆಯಲ್ಲಿ ರಾಜನಾಥ್ ಸಿಂಗ್ ತಮ್ಮ ಭಾಷಣದ ಆರಂಭದಲ್ಲೇ ಉರಿಗೌಡ, ನಂಜೇಗೌಡನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ರಾಜನಾಥ್ ಸಿಂಗ್. ಉರಿಗೌಡ ನಂಜೇಗೌಡರಂತಹ ವೀರರು ಹುಟ್ಟಿದ ನಾಡು ಎಂದು ಉಲ್ಲೇಖ ಮಾಡಿದ್ದಾರೆ. ಆದರೆ ಅನುವಾದ ಮಾಡುವುದಕ್ಕೆ ನಿಂತಿದ್ದ ಗೋ. ಮಧುಸೂಧನ್, ಈ ಹೇಳಿಕೆಯನ್ನು ಹೇಳದೆ ಮರೆ ಮಾಚುವ ಕೆಲಸ ಮಾಡಿದ್ದಾರೆ.
ಮಧ್ಯಪ್ರದೇಶ ಸಿಎಂ ತುಮಕೂರಿನಲ್ಲಿ ಅಬ್ಬರ..
ತುಮಕೂರಿನ ಮಧುಗಿರಿಯಲ್ಲಿ ಚುನಾವಣಾ ಪ್ರಚಾರ ಮಾಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ಬೃಹತ್ ಚುನಾವಣಾ ಪ್ರಚಾರ ಸಭೆ ನಡೆಸಿದ್ದು, ಶಿರಾಗೇಟ್ನಿಂದ ಆರಂಭವಾಗಿ ದಂಡೂರು ಬಾಗಿಲು, ದೊಡ್ಡಪೇಟೆ, ಮಲ್ಲೇಶ್ವರಸ್ವಾಮಿ ದೇವಸ್ಥಾನ, ಡೂಮ್ ಲೈಟ್ ಸರ್ಕಲ್ ಮುಖಾಂತರ ಪುರಸಭೆ ಮುಂಭಾಗದವರೆಗೂ ಬೃಹತ್ ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಲ್.ಸಿ ನಾಗರಾಜು ಪರ ಮಧ್ಯಪ್ರದೇಶ ಸಿಎಂ ಮತಯಾಚನೆ ಮಾಡಿದ್ದಾರೆ. ಕಳೆದ ವಾರವಷ್ಟೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಮಂಡ್ಯ, ಬೀದರ್ ಸೇರಿದಂತೆ ಸಾಕಷ್ಟು ಕಡೆ ಪ್ರಚಾರ ನಡೆಸಿದ್ದರು. ಇನ್ನು ಕಾಂಗ್ರೆಸ್ನಲ್ಲೂ ಹೈಕಮಾಂಡ್ ಅಬ್ಬರದ ಪ್ರಚಾರ ನಡೆಸುತ್ತಿದ್ದು, ರಾಹುಲ್ ಗಾಂಧಿ ಹಾಗು ಪ್ರಿಯಾಂಕಾ ಗಾಂಧಿ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ಧಾರವಾಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರುವ ಪ್ರಿಯಾಂಕಾ ಗಾಂಧಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿ ಶೆಟ್ಟರ್ ಗೆಲುವಿಗೆ ರಣತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ ಮೊರೆ ಹೋಗಿದ್ದು, ಗೆಲುವಿಗಾಗಿ ಕಸರತ್ತು ನಡೆಸುತ್ತಿವೆ.