ಬೆಳಗಾವಿ : ಆರ್ಎಸ್ಎಸ್ ದೆವ್ವ ಇದ್ದಂತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಿಂದೇಟು ಹಾಕಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಆರ್ಎಸ್ಎಸ್ ಕುರಿತು ನೀಡಿರುವ ಹೇಳಿಕೆಯ ಬಗ್ಗೆ ನೀವು ಪ್ರಿಯಾಂಕ್ ಖರ್ಗೆ ಅವರ ಬಳಿಯೇ ಕೇಳಿ. ನನಗೆ ಪೂರ್ತಿ ಮಾಹಿತಿ ಇಲ್ಲ, ಅವರ ಹೇಳಿಕೆಗೆ ಅವರನ್ನೇ ಕೇಳಿ ಎಂದು ಜಾರಿಕೊಂಡಿದ್ದಾರೆ. ಆರ್ಎಸ್ಎಸ್ ವಿಚಾರದಲ್ಲಿ ತಮ್ಮದೇ ಸಚಿವರ ಹೇಳಿಕೆಯ ಸಮರ್ಥನೆಗೆ ಇಳಿಯದಿರುವುದು ಅಚ್ಚರಿಗೆ ಕಾರಣವಾಗಿದೆ.
ಇನ್ನೂ ಕರಾವಳಿಯಲ್ಲಿ ಬಂಡವಾಳ ಹೂಡಲು ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂಬ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿದ ದಿನೇಶ್ ಗುಂಡೂರಾವ್, ನಮ್ಮ ಸರ್ಕಾರ ಬಂದ ಮೇಲೆ ಸುಧಾರಣೆ ಮಾಡೋಕೆ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಕರಾವಳಿ ಭಾಗದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಬಂಡವಾಳ ಹೆಚ್ಚು ಹೂಡಿಸುವುದಕ್ಕಾಗಿ ಸತತ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : Rachita Ram: ನಟಿ ರಚಿತಾ ರಾಮ್ ಕಾರು ಚಾಲಕನಿಂದ ಅಧಿಕಾರಿ ಮೇಲೆ ಹಲ್ಲೆ..?
ನಾವು ಯಾರ ಪರ,ಯಾರ ವಿರೋಧವೂ ಇಲ್ಲ. ಆದರೆ ಯಾರು ಕಾನೂನು ವಿರುದ್ಧ ಹೋಗ್ತಾರೆ
ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕರಾವಳಿ ಭಾಗದಲ್ಲಿ ಬಹಳಷ್ಟು ಸುಧಾರಣೆ ಆಗಿದೆ, ಅಲ್ಲದೆ ನಾವು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಸಿಎಂ ಹಾಗೂ ಡಿಸಿಎಂ ಇಬ್ಬರ ನೇತೃತ್ವದಲ್ಲಿ ಎಂಓವಿಗಳ ಬಗ್ಗೆ ಕಾರ್ಯಾಗಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ ಮೂರು ಫೈವ್ಸ್ಟಾರ್ ಹೋಟೆಲ್ಗಳ ನಿರ್ಮಾಣ, ಪ್ರವಾಸೋದ್ಯಮಕ್ಕೆ ಬೇಕಾದ ಅನುಮೋದನೆ ಸಿಕ್ಕಿದೆ.
ಕಿಯೋನಿಕ್ಸ್ನಿಂದ ಐಟಿಗಾಗಿ ಐವತ್ತು ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭ ಮಾಡುತ್ತೇವೆ. ಮಂಗಳೂರು ಹೆಚ್ಚು ಆಕರ್ಷಿಸುವ ಜಿಲ್ಲೆಯಾಗಿದೆ. ಆದರೆ ಕೋಮುವಾದದಿಂದ ಅನೇಕ ಜನರಿಗೆ ಹಿನ್ನಡೆ ಆಗುತ್ತಿತ್ತು. ಆದರೀಗ ಜನರಿಗೆ ತಿಳಿವಳಿಕೆ ಹೇಳುವ ಪ್ರಯತ್ನ ನಡೆಯುತ್ತಿದೆ. ಸೋಷಿಯಲ್ ಮೀಡಿಯಾ ಮೂಲಕ ದ್ವೇಷ ರಾಜಕಾರಣ ಮಾಡೋ ಕೆಲಸವನ್ನು ಕೆಲ ಸಂಘಟನೆಗಳು ಮಾಡ್ತಿವೆ ಎಂದು ದಿನೇಶ್ ಗುಂಡೂರಾವ್ ದೂರಿದ್ದಾರೆ.
ಕರಾವಳಿ ಭಾಗದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದ್ವೆಷ ಬಿತ್ತುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸವನ್ನು ಪೊಲೀಸರು ಮಾಡ್ತಿದ್ದಾರೆ. ಸದ್ಯ ಸಾಕಷ್ಟು ಸುಧಾರಣೆ ಆಗ್ತಾ ಇದೆ. ಆ ಕಾರಣದಿಂದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ಎಂದು ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ.






