ಹಾಸನ: ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಬೇಕಿದ್ದ ಎರಡು ತಿಂಗಳ ಗೃಹಲಕ್ಷ್ಮಿ(Gruhalakshmi Scheme) ಹಣ ಎಲ್ಲಿಗೆ ಹೋಯಿತು? ಅದರ ಬಗ್ಗೆ ರಾಜ್ಯ ಸರ್ಕಾರ(State Government) ಏನು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕೊಡಬೇಕಿದ್ದ ಗೃಹಲಕ್ಷ್ಮಿ ಹಣ ಎಲ್ಲಿ ಹೋಗಿದೆ? ಆ ಹಣ ಖಜಾನೆಯಲ್ಲಿ ಇದೆಯಾ? ಇಲ್ಲವಾ? ಎನ್ನುವ ಅಂಶವನ್ನು ಸ್ವತಃ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಬೇಕು. ಅವರು ಮತ್ತು ಅವರ ಅವರ ಇಲಾಖೆಯ ಅಧಿಕಾರಿಗಳೇ ಇದಕ್ಕೆ ಜವಾಬ್ದಾರರು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ಹಣದ ಬಗ್ಗೆ ಮಾಹಿತಿ ಸರಿಯಾಗಿ ನೀಡಿಲ್ಲ. ಇದು ಸಣ್ಣ ವಿಚಾರವಲ್ಲ. ಇದು ಹೇಗಾಯಿತು ಎಂದು ಸಂಬಂಧಿತ ಸಚಿವರಿಂದ ಮಾಹಿತಿ ಪಡೆದಿದ್ದೀರಾ? ಆ ಸಚಿವರ ರಾಜೀನಾಮೆ ಕೇಳಿದ್ದೀರಾ? ಹೋಗಲಿ, ಯಾರಾದರೂ ಅಧಿಕಾರಿಯನ್ನು ಇದಕ್ಕೆ ಹೊಣೆ ಮಾಡಿ ಅಮಾನತು ಮಾಡಿದ್ದೀರಾ? ಇಷ್ಟು ದೊಡ್ಡ ಮೊತ್ತದ ಹಣದ ಬಗ್ಗೆ ಎಷ್ಟು ಹಗುರವಾಗಿ ನಡೆದುಕೊಂಡಿದ್ದೀರಿ. ನೀವು ಪ್ರಖ್ಯಾತ ಹಣಕಾಸು ಸಚಿವರು. ನಿಮ್ಮಂತ ಹಣಕಾಸು ಸಚಿವರು ಅಮೆರಿಕದಲ್ಲೂ ಇಲ್ಲ. ಡೊನಾಲ್ಡ್ ಟ್ರಂಪ್ ಅವರಿಗೂ ಇಂಥ ಹಣಕಾಸು ಮಂತ್ರಿ ಸಿಗಲ್ಲವೇನೋ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಕೇಂದ್ರ ಸಹಕಾರ ನೀಡುತ್ತಿಲ್ಲ ಎನ್ನುವುದು ಸುಳ್ಳು
ಅನುದಾನದಲ್ಲಿ ಕೇಂದ್ರ ಸಹಕಾರ ನೀಡುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳುವ ಬದಲು, ಕೇಂದ್ರದ ಮನವೊಲಿಸಲು ನೀವೇನು ಮಾಡಿದ್ದೀರಿ ಎಂಬುದನ್ನು ಹೇಳಿ. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವವರು ಸುಖಾಸುಮ್ಮನೆ ತಮ್ಮ ಹುಳುಕು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ತಾವು ಮಾಡುತ್ತಿರುವ ತಪ್ಪುಗಳನ್ನು ಮುಚ್ಚಿಡುತ್ತಿದ್ದಾರೆ ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ ಕೇಂದ್ರ ಸರ್ಕಾರ ಅಡ್ಡಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮಂತ್ರಿಗಳು ಆರೋಪ ಮಾಡುತ್ತಿದ್ದಾರೆ. ಆದರೆ, ಪರಿಸರಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಮೀರಿ ಅನೇಕ ಅನಧಿಕೃತ ಕಾಮಗಾರಿಗಳನ್ನು ನಡೆಸಿದ್ದಾರೆ. ಕೇಂದ್ರ ಪರಿಸರ ಸಚಿವಾಲಯ ಅದನ್ನು ಪ್ರಶ್ನೆ ಮಾಡಿದೆ. ಅದು ತಪ್ಪಾ? ನಾವು ಅಂತಹ ಕಾಮಗಾರಿಗಳನ್ನು ಮಾಡಿಲ್ಲ ಎಂದು ಸಂಬಂಧಿಸಿದ ಸಚಿವರು, ಅಧಿಕಾರಿಗಳು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಿ. ಬೇಡ ಎಂದವರು ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಕೇಂದ್ರದಿಂದ ಅನುದಾನ ಬರುತ್ತಿದೆ. ಅದರ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ಪಾರದರ್ಶಕವಾಗಿಲ್ಲ. ಕೇಂದ್ರದಿಂದ ಬರುತ್ತಿರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ ಹಾಗೂ ಅದಕ್ಕೆ ಪೂರಕವಾಗಿ ಮ್ಯಾಚಿಂಗ್ ಗ್ರಾಂಟ್ ಗಳನ್ನು ಕೊಡುತ್ತಿಲ್ಲ. ಹೋಗಲಿ, ಆ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ನೀಡಿದ್ದಾರ? ಅದೂ ಇಲ್ಲ. ತಪ್ಪು ತಮ್ಮ ಕಡೆ ಇಟ್ಟುಕೊಂಡು ನರೇಂದ್ರ ಮೋದಿ ಅವರ ಸರ್ಕಾರವನ್ನು ಟೀಕೆ ಮಾಡಿದರೆ ಏನು ಬರುತ್ತದೆ.

ಇವರ ಹಣೆಬರಕ್ಕೆ ಕೆಲಸ ಮಾಡುವ ಯೋಗ್ಯತೆ ಇಲ್ಲ. ಆದರೆ ಮಾತಿನಲ್ಲಿ ಎಲ್ಲವನ್ನು ತೋರಿಸುತ್ತಿದ್ದಾರೆ. ಹಾಸನ ಜಿಲ್ಲೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಬಹಳ ವೇಗವಾಗಿದೆ. ಸ್ಟೇಜ್ ಗಳಲ್ಲಿ ಹಲವು ರೀತಿಯ ಬಾಣ ಬಿರುಸುಗಳನ್ನು ನೋಡುತ್ತಿದ್ದೇವೆ. ಯಾರು ಮಾಡದೇ ಇರುವ ಕಾರ್ಯ ಮಾಡಿದ್ದೇವೆ ಎಂಬ ಹೇಳಿಕೆ ನೀಡಿದ್ದಾರೆ. ಫಲಾನುಭವಿಗಳಿಗೆ ಎಲ್ಲವನ್ನೂ ನೀಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ನಾನು ಇಡ್ಲಿ, ವಡೆ ನಾಟಿ ಕೋಳಿ ತಿಂದಿದ್ದರ ಬಗ್ಗೆ ಮಾತಾಡೊಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಸರಕಾರದ ವಿರುದ್ಧ ಚಾಟಿ ಬೀಸಿದರು.



