ಮಂಡ್ಯದ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜ ತೆರವು ವಿವಾದ ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಾಗಿದೆ. ಘಟನೆ ಖಂಡಿಸಿ ಸೋಮವಾರ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ-ಜೆಡಿಎಸ್ ನಾಯಕರು ಸಕ್ಕರೆ ನಾಡಿನಲ್ಲಿ ಬೃಹತ್ ಹೋರಾಟ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಈ ನಡುವೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಬೆನ್ನಿಗೆ ನಿಲ್ಲುವ ಉದ್ದೇಶದಿಂದ ಕುರುಬ ಸಂಘಟನೆ ಕೂಡ ಬೀದಿಗಿಳಿದು ಹೋರಾಟ ರೂಪಿಸಲು ಸಜ್ಜಾಗಿದ್ದು, ಇಂದು ಮಂಡ್ಯ ಹಾಗೂ ಇನ್ನಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಹನಮಧ್ವಜ ತೆರವುಗೊಳಿಸಿದ ವಿಚಾರವಾಗಿ ಸೋಮವಾರ ಮಂಡ್ಯದಲ್ಲಿ ನಡೆದ ಪ್ರತಿಭಟನೆ ವೇಳೆ ಕುರುಬರ ಸಂಘದ ಹಾಸ್ಟೆಲ್ ಮೇಲೂ ಕಲ್ಲು ತೂರಾಟ ನಡೆಸಿದ್ದ ಪ್ರತಿಭಟನಾಕಾರರು ಆ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಲೆಕ್ಸ್ಗಳನ್ನು ತೆರವುಗೊಳಿಸಿ, ಹಾಸ್ಟೆಲ್ನ ಕಿಟಕಿ ಗಾಜುಗಳು ಪುಡಿ ಪುಡಿ ಮಾಡಿದ್ದರು.
ಹೀಗಾಗಿ ಹನುಮ ಧ್ವಜ ತೆರವು ಪ್ರಕರಣ ಖಂಡಿಸಿ ನಡೆದ ಪಾದಯಾತ್ರೆ ವೇಳೆ ಕಿಡಿಗೇಡಿಗಳು ಮಾಡಿರುವ ಕೃತ್ಯದ ವಿರುದ್ಧ ಕುರುಬರ ಸಂಘ ಕಿಡಿಕಾರಿದ್ದು, ಕಿಡಿಗೇಡಿಗಳ ವರ್ತನೆ ಖಂಡಿಸಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದೆ. ಪ್ರತಿಭಟನೆ ಜೊತೆಗೆ ಕಿಡಿಗೇಡಿಗಳ ವಿರುದ್ಧ ದೂರು ಕೊಡಲು ತೀರ್ಮಾನಿಸಿರುವ ಕುರುಬ ಸಂಘಟನೆ, ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ನೇತೃತ್ವದಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಕುರುಬರ ಸಂಘದ ಆವರಣದಿಂದ ಪ್ರತಿಭಟನೆ ಆರಂಭಿಸಿ, ಎಸ್ಪಿ ಕಚೇರಿಗೆ ತೆರಳಿ ದೂರು ಸಲ್ಲಿಸಲು ನಿರ್ಧರಿಸಿದೆ.