ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದ ಖಂಡಿಸಿ ಜೆಡಿಎಸ್(JDS Karnataka) ಹಾಗೂ ಬಿಜೆಪಿ(BJP Karnataka) ಮುಖಂಡರು, ಕಾರ್ಯಕರ್ತರ ಆಕ್ರೋಶ ಕೆರಳಿಸಿದ್ದು, ಘಟನೆ ಖಂಡಿಸಿ ಉಭಯ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಮಾಜಿ ಶಾಸಕ ಸುರೇಶ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಟಿಪ್ಪು ಮೊಮ್ಮಗ ಸಿದ್ರಾಮುಲ್ಲಾ ಖಾನ್ಗೆ ಧಿಕ್ಕಾರ, ರಾಮ ವಿರೋಧಿ ಕಾಂಗ್ರೆಸ್ ಸರ್ಕಾರ, ಹಿಂದೂಗಳಿಗೆ ಅನ್ಯಾಯ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
![](https://pratidhvani.com/wp-content/uploads/2024/01/ಬಜಪ.png)
ಈ ವೇಳೆ ಮಾತನಾಡಿದ ಮಾಜಿ ಸಚಿವ ಡಿ.ಸಿ. ತಮ್ಮಣ್ಣ, ಕೆರಗೋಡಿನಲ್ಲಿ ಮೊದಲೆ ಚಿಕ್ಕ ಧ್ವಜಸ್ತಂಭದಲ್ಲಿ ಹನುಮ ಧ್ವಜ ಇತ್ತು. ಈಗ ದೊಡ್ಡ ಸ್ತಂಭದಲ್ಲಿ ಧ್ವಜ ಹಾರಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಹನುಮಂತನ ದೇವಸ್ಥಾನ ಹೆಚ್ಚಿವೆ. ಪಂಚಾಯತಿಯಿಂದ ಅನುಮತಿ ಪಡೆದು ಧ್ವಜಸ್ತಂಭ ನಿರ್ಮಾಣ ಮಾಡಿ ಬಾವುಟ ಹಾರಿಸಿದ್ದಾರೆ. ಕಾಂಗ್ರೆಸ್ನವರು ಈಗ ದುರುದ್ದೇಶದ ರಾಜಕೀಯ ಮಾಡ್ತಾ ಇದ್ದಾರೆ. ಪ್ರಜಾಪ್ರಭುತ್ವದ ನಾಶ ಮಾಡಿವ ಯತ್ನವನ್ನು ಕಾಂಗ್ರೆಸ್ ಮಾಡ್ತಾ ಇದೆ. ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ತೊಲಗಬೇಕು. ಪಂಚಾಯಿತಿಯಲ್ಲಿ ರೆಜುಲೇಶನ್ ಮಾಡಿ ಹನುಮ ಧ್ವಜ ಮಾಡಿದ್ದಾರೆ. ಸಿದ್ದರಾಮಯ್ಯ ರಾಮ, ಸೀತೆ, ಹನುಮಂತನ ದೇವಸ್ಥಾನ ಉದ್ಘಾಟನೆ ಮಾಡಿದ್ರು. ನನ್ನ ಹೆಸರಲ್ಲೇ ರಾಮ ಇದ್ದಾನೆ ಅಂತಾರೆ.
ಈಗ ಯಾಕೆ ಧ್ವಜ ಇಳಿಸುತ್ತಾರೆ. ಜಿಲ್ಲಾಡಳಿತ ರಾತ್ರೋರಾತ್ರಿ ನೋಟಿಸ್ ಕೆಲಸ ಮಾಡಿದೆ. ಜಿಲ್ಲಾಡಳಿತ ಶಾಸಕ, ಸಚಿವರ ಕೈಗೊಂಬೆಯಾಗಿ ಕೆಲಸ ಮಾಡ್ತಾ ಇದೆ ಎಂದು ವಾಗ್ದಾಳಿ ನಡೆಸಿದರು.
![](https://pratidhvani.com/wp-content/uploads/2024/01/್ಲಾಗ.png)
ಮಾಜಿ ಶಾಸಕ ಸುರೇಶ್ಗೌಡ ಮಾತನಾಡಿ, ಇದು ರಾಜಕೀಯ ಪ್ರೇರಿತವಾಗಿ ಧ್ವಜ ಸ್ತಂಭ ಮಾಡಿಲ್ಲ, ಇದಕ್ಕೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಲ್ಲರೂ ಹಣ ಕೊಟ್ಟಿದ್ದಾರೆ. ಇಲ್ಲಿ ಯಾವುದೇ ವಿರೋಧ, ಗಲಾಟೆ ಏನು ಇಲ್ಲ. ಆಡಳಿತ ನಡೆಸುತ್ತಿರುವವರು ದುರ್ವತನೆ ತೋರುತ್ತಿದ್ದಾರೆ. ಇಲ್ಲಿ ಹಿಂದೂಗಳು ಬಿಟ್ಟರೆ ಬೇರೆ ಸಮೂದಾಯ ಇಲ್ಲ. ಸಿದ್ದರಾಮಯ್ಯ ಅವರೇ ಬಂದು ಹನುಮ ಧ್ವಜ ಹಾರಿಸಲಿ. ಅವರೇ ಬಂದು ಧ್ವಜ ಹಾರಿಸಲಿ ತೊಂದರೆ ಇಲ್ಲ. ಜನರಿಗೆ ಕ್ಷಮೆ ಕೇಳಿ ಧ್ವಜ ಹಾರಿಸಲೇ ಬೇಕು, ಇಲ್ಲ ಅಂದರೆ ಇದು ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.