ಮಲೆನಾಡಿನ ಮರಳು ಅಕ್ರಮ ದಂಧೆಯ ವಿಷಯ ಇದೀಗ ಧರ್ಮಸ್ಥಳ ಮಂಜುನಾಥೇಶ್ವರ ದೈವದ ಸನ್ನಿಧಿಗೆ ತಲುಪಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರ ಮಲೆನಾಡಿನ ನದಿ- ಹಿನ್ನೀರು ಪ್ರದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಕುರಿತು ರಾಜ್ಯದ ಗಮನ ಸೆಳೆದಿತ್ತು. ಕ್ಷೇತ್ರ ವ್ಯಾಪ್ತಿಯ ನದಿ-ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ಹಿಂದೆ ಹಾಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಮತ್ತು ಅವರ ಆಪ್ತರ ಕೈವಾಡವಿದೆ. ಮರಳು ದಂಧೆಕೋರರಿಂದ ತಿಂಗಳ ಮಾಮೂಲಿ ಪಡೆದು ಅಕ್ರಮ ದಂಧೆಗೆ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಆರೋಪಿಸಿದ ಹಿನ್ನೆಲೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಆರೋಪ, ಪ್ರತ್ಯಾರೋಪಗಳು ಭುಗಿಲೆದ್ದಿದ್ದವು.
ಬೇಳೂರು ಗೋಪಾಲಕೃಷ್ಣ ಅವರ ನೇರ ಆರೋಪವನ್ನು ಅಲ್ಲಗಳೆದಿದ್ದ ಶಾಸಕ ಹರತಾಳು ಹಾಲಪ್ಪ, ತಾವು ಯಾವುದೇ ಮರಳುದಂಧೆಗೆ ಕುಮ್ಮಕ್ಕು ನೀಡಿಲ್ಲ. ದಂಧೆಕೋರರ ಜೊತೆ ಯಾವುದೇ ತರಹದ ವಸೂಲಿಬಾಜಿ ವ್ಯವಹಾರ ನಡೆಸಿಲ್ಲ ಎಂದು ಹೇಳಿದ್ದರು. ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಶಾಸಕರು, ತಮ್ಮ ಆರೋಪಕ್ಕೆ ತಾವು ಬದ್ಧ. ಯಾರಿಂದಲೂ ತಾವು ಹಣ ಪಡೆದಿಲ್ಲ, ಮಾಮೂಲಿ ಪಡೆದಿಲ್ಲ ಎಂದು ಶಾಸಕರು ಇಲ್ಲಿ ಹೇಳುವುದಲ್ಲ. ಇದೇ ಮಾತನ್ನು ದೇವರ ಮುಂದೆ ಪ್ರಮಾಣ ಮಾಡಲಿ, ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಸವಾಲು ಹಾಕಿದ್ದರು.
ಆ ಸವಾಲು ಸ್ವೀಕರಿಸಿದ್ದ ಹರತಾಳು ಹಾಲಪ್ಪ, ತಾವು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಸಿದ್ಧ ಎಂದಿದ್ದರು. ಆದರೆ, ಈ ನಡುವೆ, ಶಾಸಕರು ಮಾತ್ರ ಪ್ರಮಾಣ ಮಾಡಿದರೆ ಸಾಲದು, ಅವರ ಆಪ್ತರು ಮತ್ತು ಹತ್ತಿರದ ಸಂಬಂಧಿಗಳ ಹೆಸರನ್ನೂ ಹೇಳಿ, ವಿನಾಯಕ ರಾವ್ ಮತ್ತು ರವೀಂದ್ರ ಎಂಬುವರೂ ಪ್ರಮಾಣ ಮಾಡಬೇಕು. ಯಾಕೆಂದರೆ, ಶಾಸಕರ ಪರವಾಗಿ ವ್ಯವಹಾರ ನಡೆಸುವುದು ಆ ಇಬ್ಬರೇ ಎಂದು ಮಾಜಿ ಶಾಸಕ ಬೇಳೂರು ಮತ್ತೊಂದು ದಾಳ ಉರುಳಿಸಿದ್ದರು. ಆ ಷರತ್ತಿಗೂ ಒಪ್ಪಿಕೊಂಡಿದ್ದ ಹರತಾಳು ಹಾಲಪ್ಪ, ಫೆ.12ರಂದು ಧರ್ಮಸ್ಥಳಕ್ಕೆ ಬರುವುದಾಗಿಯೂ ಅಲ್ಲಿನ ದೇವರ ಮುಂದೆ ಪ್ರಮಾಣ ಮಾಡುವುದಾಗಿಯೂ ಹೇಳಿದ್ದರು. ಆ ಬಗ್ಗೆ ಮಾಜಿ ಶಾಸಕ ಬೇಳೂರು ಮತ್ತು ಕೆಲವರಿಗೆ ತಿಳಿವಳಿಕೆ ಪತ್ರವನ್ನೂ ಕೂಡ ಮುಂಚಿತವಾಗಿಯೇ ಕಳಿಸಿದ್ದರು.
ಈ ನಡುವೆ ಬೇಳೂರು ಗೋವಾ ಚುನಾವಣಾ ಪ್ರವಾಸದ ಹಿನ್ನೆಲೆಯಲ್ಲಿ ತಮಗೆ ನಿಗದಿತ ಫೆ.13ರಂದು ಪ್ರಮಾಣ ಮಾಡಲು ಬರಲಾಗದು. ಫೆ.24ರ ನಂತರ ತಮಗೆ ಬಿಡುವಿದೆ. ಅಂದೇ ಆಣೆಪ್ರಮಾಣದ ದಿನಾಂಕ ನಿಗದಿಯಾಗಲಿ ಎಂದು ಮಾಧ್ಯಮಗಳ ಮೂಲಕ ಹೇಳಿದ್ದರು. ಆದರೆ, ಶಾಸಕ ಹಾಲಪ್ಪ ನಿಗದಿಯಂತೆ 12ರಂದು ಧರ್ಮಸ್ಥಳಕ್ಕೆ ಭೇಟಿನೀಡಿ ಆಣೆಪ್ರಮಾಣ ಮಾಡುವುದಾಗಿಯೂ, ತಮಗೆ ಸವಾಲು ಹಾಕಿದವರು ಅಂದೇ ಅಲ್ಲಿಗೆ ಬರಬೇಕು ಎಂದೂ ಹೇಳಿದ್ದರು. ಅಲ್ಲದೆ, ಫೆ.11ರಂದು ಧರ್ಮಸ್ಥಳಕ್ಕೆ ಪ್ರಮಾಣ ಬೆಳೆಸಿದ್ದರು ಕೂಡ. ಈ ವಿಷಯ ತಿಳಿಯುತ್ತಿದ್ದಂತೆ ಮಾಜಿ ಶಾಸಕ ಬೇಳೂರು ತಮ್ಮ ಗೋವಾ ಪ್ರವಾಸವನ್ನು ಮೊಟಕುಗೊಳಿಸಿ ಫೆ.12ರ ಬೆಳಗ್ಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.
ಆದರೆ, ಬೇಳೂರು ಆಗಮಿಸುವ ಮುನ್ನವೇ ಶನಿವಾರ ಬೆಳಗ್ಗೆಯೇ ಧರ್ಮಸ್ಥಳದ ಮಂಜುನಾಥೇಶ್ವರ ದೇವರ ದರ್ಶನ ಪಡೆದು ಪ್ರಮಾಣ ನೆರವೇರಿಸಿದ ಶಾಸಕ ಹಾಲಪ್ಪ, ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿ, ಅವರ ಸಲಹೆ ಪಡೆದು ವಾಪಸ್ಸಾಗಿದ್ದರು. ಹಾಗಾಗಿ ಬೇಳೂರು ಪ್ರತ್ಯೇಕವಾಗಿ ದೇವರ ದರ್ಶನ ಪಡೆದು ಪ್ರಮಾಣ ಮಾಡಿದರು.
ತಮ್ಮ ಪ್ರಮಾಣದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, “ಮರಳು ದಂಧೆಕೋರರಿಂದ ಹಣ ವಸೂಲಿ ಮಾಡಿದ್ದೀರಿ ಎಂದು ಮಾಜಿ ಶಾಸಕರು ಆರೋಪಿಸಿ, ತಾಕತ್ತಿದ್ದರೆ ಬಂದು ಪ್ರಮಾಣ ಮಾಡುವಂತೆ ಧರ್ಮಸ್ಥಳಕ್ಕೆ ಕರೆದಿದ್ದರು. ಒಂದು ವಾರದ ಮುಂಚೆಯೇ ನಾನು ಪ್ರಮಾಣ ಮಾಡಲು ಬರುವುದಾಗಿ ಹೇಳಿ ದಿನಾಂಕವನ್ನೂ ತಿಳಿಸಿದ್ದೆ. ಆದರೆ, ಅವರು ಬಂದಿಲ್ಲ. ನಾನು ಅವರು ಹೇಳಿದಂತೆ ನಾನು ಮತ್ತು ನನ್ನ ಆಪ್ತರೊಂದಿಗೆ ಬಂದು ಇಲ್ಲಿ ದೇವರ ದರ್ಶನ ಪಡೆದು ಪ್ರಮಾಣ ಮಾಡಿದ್ದೇನೆ. ನಾವ್ಯಾರೂ ಲಾರೀ ಮಾಲೀಕರಿಂದಾಗಲೀ, ಮರಳು ಎತ್ತುವವರಿಂದಾಗಲೀ ಯಾವುದೇ ಹಣ ತೆಗೆದುಕೊಂಡಿಲ್ಲ ಎಂದು ಆಣೆ ಪ್ರಮಾಣ ಮಾಡಿದ್ದೇವೆ. ಅವರು ಗೋವಾ ಚುಣಾವಣೆ ನೆಪ ಹೇಳಿ ಮುಂದಿನ ವಾರ ಬರುವುದಾಗಿ ಹೇಳಿದ್ದರು. ಆದರೆ, ನಾನು ಮಾತ್ರ ಮೊದಲೇ ಹೇಳಿದಂತೆ ಇಂದು ಬಂದು ಪ್ರಮಾಣ ಮಾಡಿದ್ದೇನೆ” ಎಂದಿದ್ದಾರೆ.
ಆದರೆ, ಬೆಳಗ್ಗೆ 10ರ ಸುಮಾರಿಗೆ ಧರ್ಮಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಬೇಳೂರು, “ನಿಗದಿಯಾಗಿದ್ದ ಗೋವಾ ಪ್ರವಾಸ ರದ್ದು ಮಾಡಿ ರಾತ್ರಿಯೇ ಹೊರಟು ಧರ್ಮಸ್ಥಳಕ್ಕೆ ಬಂದಿದ್ದೇನೆ. ಇಲ್ಲಿ ನೋಡಿದರೆ ನಾನು ಬರುವ ಮುನ್ನವೇ ಶಾಸಕರು ಇಲ್ಲಿಂದ ಹೋಗಿದ್ದಾರೆ. ನಾನು ಈ ಮೊದಲೇ 10.30ಯಿಂದ 12ರವರಗೆ ಸಮಯಾವಕಾಶ ನೀಡಿದ್ದೆ. ಅವರು ಅದಕ್ಕೂ ಮುಂಚೆಯೇ ಬಂದು ಹೋಗಿದ್ದಾರೆ. ನಾನು 12 ಗಂಟೆಯವರೆಗೆ ಕಾಯುವೆ. ಬರದೇ ಇದ್ದಲ್ಲಿ ನನ್ನ ಪಾಡಿಗೆ ನಾನು ಪ್ರಮಾಣ ಮಾಡಿ ಹೊರಡುತ್ತೇನೆ” ಎಂದಿದ್ದರು. ಸುಮಾರು ಒಂದೂವರೆ ತಾಸು ಕಾದ ಬಳಿಕ ಬೇಳೂರು ತಮ್ಮ ಬೆಂಬಲಿಗರೊಂದಿಗೆ ಆಣೆಪ್ರಮಾಣ ಮಾಡಿ ಅಲ್ಲಿಂದ ತೆರಳಿದರು.
ಈ ನಡುವೆ ಶಾಸಕರ ಹರತಾಳು ಹಾಲಪ್ಪ ಮಾತನಾಡುತ್ತಾ, “ನಾನು ಮರಳು ದಂಧೆಕೋರರಿಂದ ಹಣ ಪಡೆದಿರುವ ಬಗ್ಗೆ ತಮ್ಮ ಬಳಿ ದಾಖಲೆ ಇವೆ ಎಂದು ಮಾಜಿ ಶಾಸಕರು ಹೇಳಿದ್ದಾರೆ. ಹಾಗೆ ದಾಖಲೆ ಇದ್ದರೆ ಅವರು ನನ್ನ ವಿರುದ್ಧ ದೂರು ನೀಡಲಿ ಎಂದು ನಾನು ಹೇಳುತ್ತೇನೆ. ದೂರು ನೀಡಲಿ, ಆ ಬಗ್ಗೆ ತನಿಖೆ ನಡೆಯಲಿ. ಆಗ ಸತ್ಯಾಸತ್ಯತೆ ಎಲ್ಲರಿಗೂ ಗೊತ್ತಾಗುತ್ತದೆ” ಎಂದೂ ಹೇಳಿದ್ದಾರೆ. ಆ ಮೂಲಕ ಮಾಜಿ ಶಾಸಕ ಬೇಳೂರು ಅವರಿಗೆ ಮರು ಸವಾಲು ಹಾಕಿದ್ದಾರೆ. ಹಾಗಾಗಿ ಬೇಳೂರು ಹಾಕಿದ್ದ ಆಣೆಪ್ರಮಾಣದ ಸವಾಲು ಇದೀಗ ಹಾಲಿ ಶಾಸಕರ ಧರ್ಮಸ್ಥಳ ಭೇಟಿಯೊಂದಿಗೆ ಅಂತ್ಯವಾಗಿದ್ದು, ದಾಖಲೆಗಳ ಆಧಾರದ ಮೇಲೆ ದೂರು ನೀಡುವ ಹೊಸ ಸವಾಲು ಮಾಜಿ ಶಾಸಕ ಬೇಳೂರು ಮುಂದಿದೆ. ಬೇಳೂರು ತಮ್ಮ ಬಳಿ ಇರುವ ದಾಖಲೆಗಳ ಸಹಿತ ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಶಾಸಕರ ವಿರುದ್ಧ ಮರಳು ಅಕ್ರಮ ಮಾಮೂಲಿ ವಸೂಲಿ ಕುರಿತು ದೂರು ನೀಡುವರೇ ಎಂಬುದನ್ನು ಕಾದುನೋಡಬೇಕಿದೆ.
ಅಂತೂ ಮಲೆನಾಡು ಭಾಗದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಸಾಗರದ ಹಾಲಿ ಮತ್ತು ಮಾಜಿ ಶಾಸಕರ ಆಣೆಪ್ರಮಾಣ ಪ್ರಸಂಗ ಕೊನೆಗೂ ಒಬ್ಬರಿಗೊಬ್ಬರ ಮುಖಾಮುಖಿ ಭೇಟಿಯಾಗದೇ ಮುಗಿದುಹೋಗಿದೆ. ಇಬ್ಬರೂ ನಾಯಕರು ಬೇರೆಬೇರೆಯಾಗಿ ಮರಳು ದಂಧೆಯ ಮಾಮೂಲಿ ವಸೂಲಿ ಕುರಿತು ಆಣೆಪ್ರಮಾಣ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಪಡೆಯಲಿರುವ ರಾಜಕೀಯ ತಿರುವು ಕುತೂಹಲ ಮೂಡಿಸಿದೆ.