ಬೆಂಗಳೂರು:
ರಾಜ್ಯ ಸರ್ಕಾರದ ಮದ್ಯ ತೆರಿಗೆ ನೀತಿ, ಶಿಕ್ಷಣ ವ್ಯವಸ್ಥೆ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯದ ಮೇಲಿನ ತೆರಿಗೆ ಹೆಚ್ಚಳವನ್ನು ಟೀಕಿಸಿ, “ಹಿಂದೆ ನಾವು 2 ರೂಪಾಯಿ ಸೇರಿಸಿ ಬಿಯರ್ ಕುಡಿಯುತ್ತಿದ್ದೆವು, ಈಗ ಅದೇ ಬಿಯರ್ಗೆ ₹250 ಕೊಡುವ ಪರಿಸ್ಥಿತಿ ಬಂದಿದೆ” ಎಂದು ಹೇಳಿದರು.

ಯುವಕರಲ್ಲಿ ಬಿಯರ್ ಕುಡಿಯುವ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಹೆಚ್ಚಿನ ಬೆಲೆ ಕಾರಣದಿಂದ ಕೆಲವರು ಕಡಿಮೆ ದರದಲ್ಲಿ ಗಾಂಜಾ ಕಡೆ ತಿರುಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಗೂಡಂಗಡಿಗಳಲ್ಲಿ ಮದ್ದಿನ ಮಾರಾಟ ನಡೆಯುತ್ತಿದೆ ಎಂಬ ಆರೋಪವನ್ನೂ ಮಾಡಿದರು.
ಗ್ಯಾರಂಟಿ ಯೋಜನೆಗಳ ಮೇಲೆ ಸರ್ಕಾರ ಹೆಚ್ಚು ವೆಚ್ಚ ಮಾಡುತ್ತಿದೆ ಎಂದು ಆರೋಪಿಸಿದ ಅವರು, “ಈ ಯೋಜನೆಗಳಿಗೆ ಖರ್ಚಾಗುತ್ತಿರುವ ಲಕ್ಷ ಕೋಟಿ ರೂಪಾಯಿಗಳನ್ನು ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಳಸಿದ್ದರೆ ಅನೇಕ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿತ್ತು” ಎಂದು ಹೇಳಿದರು.

ರಾಜ್ಯದ ಶಿಕ್ಷಣ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ವಿಶ್ವನಾಥ್, “ಈಗ ಶಿಕ್ಷಕರಿಗಿಂತ ವಿದ್ಯಾರ್ಥಿಗಳೇ ಹೆಚ್ಚು ಜಾಣರಾಗಿದ್ದಾರೆ. ಆದರೆ ಸರ್ಕಾರ ಮಕ್ಕಳನ್ನೇ ದಡ್ಡರನ್ನಾಗಿ ಮಾಡುತ್ತಿದೆ” ಎಂದು ಆರೋಪಿಸಿದರು. ಶಿಕ್ಷಣ ಸಚಿವರ ಮೇಲೂ ಟೀಕಿಸಿ, ಸರ್ಕಾರದ ಶಿಕ್ಷಣ ನೀತಿಯಲ್ಲಿ ದೋಷಗಳಿವೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧವೂ ಅವರು ವಾಗ್ದಾಳಿ ನಡೆಸಿ, “ಎನ್ಇಪಿ ಬಗ್ಗೆ ಸಿಎಂಗೆ ಸ್ಪಷ್ಟ ಅರಿವು ಇಲ್ಲ. ಯಾರೋ ಬರೆದು ಕೊಟ್ಟದ್ದನ್ನು ಓದುತ್ತಾರೆ” ಎಂದು ಟೀಕಿಸಿದರು.

ರಾಜ್ಯದ ಸಾಲದ ಪ್ರಮಾಣ ಹೆಚ್ಚುತ್ತಿರುವುದರ ಬಗ್ಗೆ ಚಿಂತನೆ ವ್ಯಕ್ತಪಡಿಸಿದ ಅವರು, “ರಾಜ್ಯದ ಒಟ್ಟು ಸಾಲ ₹9 ಲಕ್ಷ ಕೋಟಿಗೆ ತಲುಪಿದ್ದು, ಅದರಲ್ಲೂ ಬಹುಪಾಲು ಸಾಲ ಇತ್ತೀಚಿನ ಆಡಳಿತದಲ್ಲೇ ತೆಗೆದುಕೊಳ್ಳಲಾಗಿದೆ” ಎಂದು ಆರೋಪಿಸಿದರು. ಸರ್ಕಾರದ ನೀತಿಗಳು ಜನಸಾಮಾನ್ಯರಿಗೆ ಹಾನಿಕಾರಿಯಾಗಿವೆ ಎಂದು ಹೇಳಿದ ಎಚ್. ವಿಶ್ವನಾಥ್, ಆಡಳಿತ ಕ್ರಮಗಳಲ್ಲಿ ಬದಲಾವಣೆ ಅಗತ್ಯವಿದೆ ಎಂದು ಒತ್ತಾಯಿಸಿದರು.






