ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ರೋಗದ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔಷಧ ದಾಸ್ತಾನು ರಾಜ್ಯದಲ್ಲಿ ಇಲ್ಲ. ದೊಡ್ಡ ಮಟ್ಟದಲ್ಲಿ ಕಾಡುವ ಮುನ್ಸೂಚನೆ ನೀಡಿರುವ ರೋಗದ ನಿಯಂತ್ರಣಕ್ಕೆ ಸರ್ಕಾರ ಯಾವ ಹಂತಕ್ಕೆ ಸಿದ್ಧವಾಗಿದೆ ಎಂಬುದಕ್ಕೆ ಔಷಧ ಕೊರತೆ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕಪ್ಪು ಶಿಲಿಂಧ್ರ ರೋಗಕ್ಕೆ ಆರಂಭದಲ್ಲೇ ಚಿಕಿತ್ಸೆ ನೀಡಬೇಕು. ಯಾಕೆಂದರೆ ರೋಗ ಅತ್ಯಂತ ವೇಗವಾಗಿ ವ್ಯಾಪಿಸುತ್ತದೆ. 2-3 ದಿನಗಳಲ್ಲಿ ಅದು ಕಣ್ಣು, ಕಿವಿ ಮತ್ತು ಮೆದುಳನ್ನು ವ್ಯಾಪಿಸುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಇದಕ್ಕೆ ತುರ್ತು ಚಿಕಿತ್ಸೆ ಅನಿವಾರ್ಯ. ಅತ್ಯಂತ ತುರ್ತಿನ ಈ ಕಾಯಿಲೆಯನ್ನು ಔಷಧವೇ ಇಲ್ಲದೇ ಎದುರಿಸಲು ಸಾಧ್ಯವೇ? ಎಂದವರು ಪ್ರಶ್ನಿಸಿದ್ದಾರೆ.
ಕೋವಿಡ್ನಿಂದ ಚೇತರಿಕೆ ಕಂಡು ಬಿಡುಗಡೆಯಾಗಿರುವವರ ಪೈಕಿ ವಾರಕ್ಕೆ 400 ಮಂದಿ ಕಪ್ಪು ಶಿಲೀಂಧ್ರ ರೋಗಕ್ಕೆ ತುತ್ತಾಗಲಿದ್ದಾರೆ ಎಂದು ಸರ್ಕಾರಕ್ಕೆ ತಜ್ಞರು ತಿಳಿಸಿದ್ದಾರೆ. ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ವಿಧಾನ ಈ ರೋಗಕ್ಕೆ ಮೂಲ ಕಾರಣ. ಹೀಗಾಗಿ ಇದು ಸರ್ಕಾರವೇ ಆಹ್ವಾನಿಸಿದ ಅಪಾಯ. ಸೂಕ್ತ ಪರಿಹಾರ ಕಲ್ಪಿಸುವುದೂ ಸರ್ಕಾರದ ಹೊಣೆ ಎಂದು ಹೇಳಿರುವ ಅವರು, ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔಷಧ ಕೊರತೆ ನಿವಾರಿಸುವುದು ಈ ಹೊತ್ತಿನ ಅಗತ್ಯ. ಕಪ್ಪು ಶಿಲೀಂಧ್ರ ರೋಗ ಕೋವಿಡ್ ನಂತೆ ಅಲ್ಲ. ಅದಕ್ಕಿಂತಲೂ ಭೀಕರ. ಈ ಕಾಯಿಲೆಯಲ್ಲಿ ಸಾವಿನ ಪ್ರಮಾಣವೂ ಅಧಿಕವಾಗಿರುವುದು ಆತಂಕ ಮತ್ತು ಗಮನಿಸಲೇ ಬೇಕಾದ ಸಂಗತಿ. ಸರ್ಕಾರ ಔಷಧ ಹೊಂದಿಸುವುದರತ್ತ ಕೂಡಲೇ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.
ಭಾರತದ Bharat Serum Institute, Sun Pharma, Nylon, Cipla, Gufic Celon ಕಂಪನಿಗಳು ಮತ್ತು ವಿದೇಶದ Swiss Parenterals (Switzerland), Aspen (Australia), Abbott laboratories(USA), Arkopharma(USA) ಕಂಪನಿಗಳು ಕಪ್ಪು ಶಿಲೀಂಧ್ರ ರೋಗಕ್ಕೆ ಔಷಧ ತಯಾರಿಸುತ್ತವೆ. ಈ ಕಂಪನಿಗಳಿಂದ ಸರ್ಕಾರ ಕೂಡಲೇ ಔಷಧ ತರಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.