AIIMS ನ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ವಯಸ್ಕರು ಮತ್ತು ಮಕ್ಕಳಿಗೆ Covaxin ಪ್ರಯೋಗಗಳ ಪ್ರಧಾನ ತನಿಖಾಧಿಕಾರಿಯಾಗಿರುವ ಡಾ.ಸಂಜಯ್ ರೈ ಅವರು ಮಕ್ಕಳಿಗೆ COVID-19 ವಿರುದ್ಧ ಲಸಿಕೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಅವೈಜ್ಞಾನಿಕ’. ಇದು ಯಾವುದೇ ಹೆಚ್ಚುವರಿ ಪ್ರಯೋಜನವನ್ನು ನೀಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಡಾ.ಸಂಜಯ್ ಅವರು ಈ ನಿರ್ಧಾರವನ್ನು ಜಾರಿಗೊಳಿಸುವ ಮುನ್ನ ಈಗಾಗಲೇ ಮಕ್ಕಳಿಗೆ ಲಸಿಕೆ ಹಾಕಲು ಆರಂಭಿಸಿರುವ ದೇಶಗಳ ಡೇಟಾಗಳನ್ನು ವಿಶ್ಲೇಷಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇತ್ತೀಚೆಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 15 ರಿಂದ 18 ವಯಸ್ಸಿನ ಮಕ್ಕಳಿಗೆ ಜನವರಿ 3 ರಿಂದ COVID-19 ವಿರುದ್ಧ ಲಸಿಕೆಯನ್ನು ನೀಡಲು ಪ್ರಾರಂಭಿಸಲಾಗುವುದು ಎಂದು ಘೋಷಿಸಿದ್ದರು. ಇದು ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳು ಮತ್ತು ಅವರ ಪೋಷಕರ ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದು ಅವರು ಹೇಳಿದರು. ಈ ಕ್ರಮವು ಶಾಲೆಗಳಲ್ಲಿ ಬೋಧನೆಯನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಆದರೆ ಈ ನಿರ್ಧಾರವನ್ನು ಪ್ರಶ್ನಿಸಿರುವ ಡಾ. ರೈ “ಅವರ ನಿಸ್ವಾರ್ಥ ಸೇವೆ ಮತ್ತು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ನಾನು ಪ್ರಧಾನಿ ಮೋದಿಯವರ ದೊಡ್ಡ ಅಭಿಮಾನಿ. ಆದರೆ ಮಕ್ಕಳ ಲಸಿಕೆ ಕುರಿತು ಅವರ ಅವೈಜ್ಞಾನಿಕ ನಿರ್ಧಾರದಿಂದ ನಾನು ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ’ ಎಂದು ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
“ಲಸಿಕೆಗಳ ಬಗ್ಗೆ ನಾವು ಹೊಂದಿರುವ ಮಾಹಿತಿಗಳ ಪ್ರಕಾರ ಅವು ಸೋಂಕು ಹರಡದಂತೆ ತಡೆಗಟ್ಟುವಲ್ಲಿ ಸಹಾಕಾರಿಯಲ್ಲ. ಕೆಲವು ದೇಶಗಳಲ್ಲಿ, ಬೂಸ್ಟರ್ ಶಾಟ್ಗಳನ್ನು ತೆಗೆದುಕೊಂಡ ನಂತರವೂ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ” ಎಂದು ವಿವರಿಸಿದ್ದಾರೆ. ಅಲ್ಲದೆ, ಯುಕೆಯಲ್ಲಿ ದಿನವೊಂದಕ್ಕೆ 50,000 ಪ್ರಕರಣಗಳು ವರದಿಯಾಗುತ್ತಿವೆ. ಲಸಿಕೆಯು ಕರೋನವೈರಸ್ ಸೋಂಕನ್ನು ತಡೆಯುವುದಿಲ್ಲ ಎಂದು ಇದು ಸಾಬೀತುಪಡಿಸುತ್ತದೆ ಆದರೆ ಲಸಿಕೆಗಳು ತೀವ್ರತೆ ಮತ್ತು ಮರಣವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎಂದು ಡಾ. ರೈ PTI ಗೆ ತಿಳಿಸಿದ್ದಾರೆ.
![](https://pratidhvani.com/wp-content/uploads/2021/12/download-1-1064869-1640514373.png)
COVID-19 ನಿಂದಾಗುವ ಮರಣದ ಪ್ರಮಾಣ ಸುಮಾರು 1.5% ಆಗಿದೆ, ಅಂದರೆ ಪ್ರತಿ ಮಿಲಿಯನ್ ಜನಸಂಖ್ಯೆಗೆ 15,000 ಸಾವುಗಳು ಸಂಭವಿಸುತ್ತವೆ ಎಂಬ ಮಾಹಿತಿ ನೀಡಿರುವ ಅವರು “ವ್ಯಾಕ್ಸಿನೇಷನ್ ಮೂಲಕ, ನಾವು ಈ ಸಾವುಗಳಲ್ಲಿ 80-90% ಅನ್ನು ತಡೆಯಬಹುದು, ಅಂದರೆ ಮಿಲಿಯನ್ಗೆ 13,000 ರಿಂದ 14,000 ಸಾವುಗಳನ್ನು ತಡೆಯಬಹುದು” ಎಂದು ಹೇಳಿದ್ದಾರೆ.
ವಯಸ್ಕರಲ್ಲಿ ಸೋಂಕಿನ ಅಪಾಯ ಮತ್ತು ಲಸಿಕೆಯ ಲಾಭದ ವಿಶ್ಲೇಷಣೆಯನ್ನು ಮಾಡಿದರೆ ಲಸಿಕೆ ನಿಜಕ್ಕೂ ವರ. ಆದರೆ ಮಕ್ಕಳ ವಿಷಯಕ್ಕೆ ಇದನ್ನೇ ಅನ್ವಯ ಮಾಡಲಾಗುವುದಿಲ್ಲ. ಯಾಕೆಂದರೆ ಮಕ್ಕಳಲ್ಲಿ ಸೋಂಕಿನ ತೀವ್ರತೆಯು ತುಂಬಾ ಕಡಿಮೆಯಾಗಿದೆ ಮತ್ತು ಸಾರ್ವಜನಿಕ ಡೊಮೇನ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತಿ ಮಿಲಿಯನ್ ಜನಸಂಖ್ಯೆಗೆ ಕೇವಲ ಎರಡು ಸಾವುಗಳು ಮಾತ್ರ ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.
“ಮಕ್ಕಳ ವಿಭಾಗದಲ್ಲಿ ಪ್ರತಿಕೂಲ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಅಪಾಯ ಮತ್ತು ಲಾಭದ ವಿಶ್ಲೇಷಣೆಯನ್ನು ಮಾಡಿದರೆ, ಲಭ್ಯವಿರುವ ಡೇಟಾದ ಆಧಾರದ ಮೇಲೆ ಪ್ರಯೋಜನಗಳಿಗಿಂತ ಅಪಾಯವು ಹೆಚ್ಚು” ಎಂಬುವುದು ಡಾ. ರೈ ಅವರ ಅಭಿಪ್ರಾಯ.
ಯುಎಸ್ ಸೇರಿದಂತೆ ಕೆಲವು ದೇಶಗಳು ನಾಲ್ಕೈದು ತಿಂಗಳ ಹಿಂದೆ ಮಕ್ಕಳಿಗೆ ಲಸಿಕೆ ಹಾಕಲು ಪ್ರಾರಂಭಿಸಿದ್ದು ಭಾರತದಲ್ಲೂ ಮಕ್ಕಳಿಗೆ COVID-19 ಲಸಿಕೆಯನ್ನು ಪ್ರಾರಂಭಿಸುವ ಮೊದಲು ಈ ದೇಶಗಳ ಡೇಟಾವನ್ನು ವಿಶ್ಲೇಷಿಸಬೇಕು ಎಂದು ಅವರು ಹೇಳುತ್ತಾರೆ.