ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಅಧಿಕ ಜಾನುವಾರುಗಳು ದುರ್ಮರಣಕ್ಕೀಡಾದ ದಾರುಣ ಘಟನೆಯು ಮಂಗಳೂರು ಹೊರವಲಯದ ಜೋಕಟ್ಟೆ ಅಂಗರಗುಂಡಿ ಎಂಬಲ್ಲಿ ಸಂಭವಿಸಿದೆ.

ಕಂಕನಾಡಿ ಕಡೆಯಿಂದ ಎಂಸಿಎಫ್ ಕಡೆ ಗೂಡ್ಸ್ ರೈಲು ಹೊರಟಿದ್ದ ಸಂದರ್ಭದಲ್ಲಿ ಅಂಗರಗುಂಡಿ ಎಂಬಲ್ಲಿ ರೈಲಿನ ಶಬ್ದಕ್ಕೆ ಬೆಚ್ಚಿ ಬಿದ್ದ ಜಾನುವಾರುಗಳು ಭಯದಿಂದ ರೈಲಿನ ಬ್ರಿಡ್ಜ್ ಮೇಲೆ ಓಡಿವೆ ಎನ್ನಲಾಗಿದೆ. ಪರಿಣಾಮ 15 ಎಮ್ಮೆಗಳು ರೈಲಿನಡಿ ಸಿಲುಕಿ ಮೃತಪಟ್ಟಿವೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಕದ್ರಿ ಅಗ್ನಿಶಾಮಕ ದಳ ಸಿಬ್ಬಂದಿ ಮೂರು ಎಮ್ಮೆಗಳನ್ನು ರಕ್ಷಿಸಿದ್ದಾರೆ. ತಡರಾತ್ರಿ ಈ ಘಟನೆ ಸಂಭವಿಸಿದ್ದು ರೈಲ್ವೆ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.