ಚಿಕ್ಕಬಳ್ಳಾಪುರ: ಈಜಲು (Swimming) ತೆರಳಿದ್ದ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಚೇನಹಳ್ಳಿ (Manchenahalli) ಹತ್ತಿರ ಇರುವ ದಂಡಿಗಾನಹಳ್ಳಿ ಡ್ಯಾಮ್ ನಲ್ಲಿ ನಡೆದಿದೆ.
ಮುಂಬೈ (Mumbai) ಮೂಲದ ಆಲಿಯಾ ಪಾಟೀಲ್ (17) ಹಾಗೂ ಜೋಯ ಪಾಟೀಲ್(14) ಸಾವನ್ನಪ್ಪಿರುವ ದುರ್ದೈವಿಗಳು. ಬೇಸಿಗೆಯ ರಜೆ ಇರುವ ಹಿನ್ನೆಲೆಯಲ್ಲಿ ಬಾಲಕಿಯರು ಗೌರಿಬಿದನೂರು ನಗರದ ಸಂಬಂಧಿಕರ ಮನೆಗೆ ಬಂದಿದ್ದರು. ಇನ್ನೆರಡು ದಿನಗಳಲ್ಲಿ ಊರಿಗೆ ಹೋಗಬೇಕಿದ್ದ ಅವರು, ದಂಡಿಗಾನಹಳ್ಳಿ ಜಲಾಶಯ ನೋಡಲು ತೆರಳಿದ್ದರು. ಈ ಸಂದರ್ಭದಲ್ಲಿ ಈಜಲು ಹೋಗಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲಾಗಿದೆ. ಈ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.