“ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕಾಲೇಜು ಪ್ರವೇಶ ಮಾಡಲು ಲಸಿಕೆ ಕಡ್ಡಾಯವಿಲ್ಲ” ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಸರಕಾರವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳು ಒಂದು ಡೋಸ್ ಲಸಿಕೆ ಹಾಕಿಸಿದ ನಂತರವೇ ಕಾಲೇಜುಗಳಿಗೆ ಪ್ರವೇಶ ನೀಡಬೇಕು. ಪಡೆಯದೇ ಇದ್ದಲ್ಲಿ ಕಾಲೇಜು ಪ್ರವೇಶಿಸಲು ಅವಕಾಶ ಇಲ್ಲ ಎಂದು ಕಳೆದ ವಾರವಷ್ಟೇ ಒಂದು ನಿರ್ಧಾರವನ್ನು ಘೋಷಿಸಿತ್ತು. ಈ ನಿರ್ಧಾರವು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಆಕ್ಷೇಪಿಸಿ ವೈದ್ಯರು,ವಿದ್ಯಾರ್ಥಿಗಳು ಮತ್ತು ಪೋಷಕರು ವಕೀಲರ ಮೂಲಕ ಸರಕಾರಕ್ಕೆ ಲೀಗಲ್ ನೋಟೀಸ್ ಕಳುಹಿಸಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ “ಲಸಿಕೆ ಹಾಕಿಸಿಕೊಳ್ಳಲೇ ಬೇಕೆಂದು ಯಾವುದೇ ವಿದ್ಯಾರ್ಥಿಗಳಿಗೂ, ಸಿಬ್ಬಂದಿ ವರ್ಗದವರಿಗೂ ನಿರ್ಭಂದ ಹೇರುತ್ತಿಲ್ಲ. ಲಸಿಕೆ ಹಾಕಿಸಿಕೊಳ್ಳುವುದು ಅವರ ಹಿತಾಸಕ್ತಿಗೆ ಬಿಟ್ಟದ್ದು. ಲಸಿಕೆ ಪಡೆದ ಬಳಿಕವೇ ತರಗತಿಗೆ ಹಾಜರಾಗಬೇಕೆಂಬ ಕಡ್ಡಾಯವಿಲ್ಲ. ಕಾಲೇಜು ಆವರಣದಲ್ಲಿ ಲಸಿಕಾ ಅಭಿಯಾನಗಳನ್ನು ಹಮ್ಮಿಕೊಳ್ಳುವ ನಿರ್ಧಾರವನ್ನೂ ಉನ್ನತ ಶಿಕ್ಷಣ ಇಲಾಖೆ ಕೈಗೊಂಡಿದೆ” ಎಂದು ತಿಳಿಸಿದ್ದಾರೆ.