ಮಂಡ್ಯ (Mandya) ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ (Sumalatha Ambarish) ಕಳೆದ ಬಾರಿ ನಡೆದಿದ್ದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ (BJP) ಬೆಂಬಲ ಪಡೆದುಕೊಂಡು ಜಯಭೇರಿ ಬಾರಿಸಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಮಂಡ್ಯದಲ್ಲಿ ಮೈತ್ರಿ ಯಾವುದೇ ಲಾಭ ತಂದುಕೊಟ್ಟಿರಲಿಲ್ಲ. ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿ ಆಗಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತವನ್ನೇ ಕೇಳಲಿಲ್ಲ. ಇದರ ನಡುವೆ ಸುಮಲತಾ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಪರೋಕ್ಷ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಕಾಂಗ್ರೆಸ್ನಿಂದಲೂ ಅಂತರ ಕಾಯ್ದುಕೊಂಡಿದ್ದ ಸುಮಲತಾ, ಬಿಜೆಪಿ ಹತ್ತಿರ ಆಗಿದ್ದರು. ಬಿಜೆಪಿಗೆ ಬೆಂಬಲವನ್ನೂ ಘೋಷಣೆ ಮಾಡಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಇದೀಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ.
![](https://pratidhvani.com/wp-content/uploads/2024/01/IMG-20240123-WA0150-1024x680.webp)
ಮಂಡ್ಯದಲ್ಲಿ ಸುಮಲತಾ ಸ್ಪರ್ಧೆಗೆ ಜೆಡಿಎಸ್ ಅಡ್ಡಿ..!
ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದೆ ಆಗಿರುವ ಸುಮಲತಾ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಸಾಧಿಸುವುದು ಕಷ್ಟ ಸಾಧ್ಯ. ಅದೇ ಕಾರಣಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದ್ದರು. ಆದರೆ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ ಹಾಗು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಲಿವೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸುಮಲತಾ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಸಾಧ್ಯವಿಲ್ಲ. ಇನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಸುಮಲತಾಗೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿವೆ.
![](https://pratidhvani.com/wp-content/uploads/2024/01/IMG-20240123-WA0149.jpg)
ಮಂಡ್ಯದಿಂದ ಸುಲಮತಾ ಸ್ಪರ್ಧಿಸಿದ್ರೆ ಗೆಲ್ಲೋದ್ಯಾರು..?
ಮಾಜಿ ಸಿಎಂ ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದರೆ ಗೆಲುವು ಸುಲಭ ಅನ್ನೋ ಮಾತುಗಳು ಕೇಳಿಬರುತ್ತಿವೆ. ಸುಮಲತಾ ಅವರು ಬಿಜೆಪಿ ಪಕ್ಷದಿಂದ ಬೇರೆ ಕ್ಷೇತ್ರದಿಂದ ಚುನಾವಣೆಗೆ ಇಳಿದರೆ ಅನುಕೂಲ ಆಗಲಿದ್ದು, ಇಲ್ಲದಿದ್ರೆ ಮಂಡ್ಯದಿಂದ ಮತ್ತೆ ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕೆ ಇಳಿದರೆ ಮತ್ತೆ ಜೆಡಿಎಸ್ ಹಾಗು ಕಾಂಗ್ರೆಸ್ ನಡುವೆ ಪೈಪೋಟಿ ಜೋರಾಗಲಿದ್ದು, ಮತ್ತೆ ಚುಣಾವಣೆ ರಂಗು ಕಾವು ಪಡೆದುಕೊಳ್ಳಲಿದೆ ಎನ್ನಲಾಗ್ತಿದೆ. ಪಕ್ಷೇತರ ಅಭ್ಯರ್ಥಿ ಆಗಿ ಕಣಕ್ಕಿಳಿದರೆ ಗೆಲುವು ಕಷ್ಟ ಆದರೂ ಬೇರೆಯವರ ಸೋಲಿಗೆ ಷರಾ ಬರೆಯುವ ಸಾಧ್ಯತೆ ಹೆಚ್ಚಾಗ್ತಿದೆ.
![](https://pratidhvani.com/wp-content/uploads/2024/01/IMG-20240123-WA0148-jpg.webp)
ಕಾಂಗ್ರೆಸ್ ಅಭ್ಯರ್ಥಿ ಆಗ್ತಾರಾ ಸಂಸದೆ ಸುಮಲತಾ..?
ಜೆಡಿಎಸ್ ಹಾಗು ಬಿಜೆಪಿ ಮೈತ್ರಿ ಬಳಿಕ ಸುಮಲತಾ ಭಾರತೀಯ ಜನತಾ ಪಾರ್ಟಿಯಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಬಿಜೆಪಿ ಬಗ್ಗೆಯೂ ಮಾತನಾಡ್ತಿಲ್ಲ. ಇನ್ನು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವ ಚಿಂತನೆಯೂ ಸುಮಲತಾ ಅವರಲ್ಲಿದೆ ಎನ್ನಲಾಗ್ತಿದೆ. ಆದರೆ ಮಂಡ್ಯ ಜಿಲ್ಲಾ ಉಸ್ತುವಾರಿ ಎನ್ ಚಲುವರಾಯಸ್ವಾಮಿ ಸುಮಲತಾ ವಿರುದ್ಧವಾಗಿದ್ದಾರೆ ಎನ್ನಲಾಗ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಬೆಂಬಲದಿಂದಲೇ ಗೆಲುವು ಕಂಡಿದ್ದ ಸುಮಲತಾ ಫಲಿತಾಂಶದ ಬಳಿಕ ನಡೆದುಕೊಂಡ ರೀತಿ ಸರಿಯಿರಲಿಲ್ಲ ಎನ್ನಲಾಗ್ತಿದೆ. ಅದೇ ಕಾರಣದಿಂದ ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದರೂ ಸುಮಲತಾ ಗೆಲುವು ಕ್ಷೀಣವಾಗಿದೆ. ಅದರ ಬದಲು ಸುಮಲತಾ ಎದುರಲ್ಲಿ ಎರಡು ಆಯ್ಕೆಗಳಿದ್ದು, ಒಂದು ಬಿಜೆಪಿ ನಾಯಕರು ಹೇಳಿದ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದು ಅಥವಾ ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದು. ಆಯ್ಕೆ ಯಾವುದು ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಬೇಕಿದೆ.
ಕೃಷ್ಣಮಣಿ