“ಸತತ ಚುನಾವಣಾ ಸೋಲಿನ ಬಳಿಕ ಕಂಗೆಟ್ಟಿರುವ ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗಿ ಬೆಳೆಯಬೇಕು ಎಂಬುದು ನನ್ನ ಪ್ರಾಮಾಣಿಕ ಇಚ್ಚೆ.”
ಇದನ್ನು ಹೇಳಿದವರು ಕಾಂಗ್ರೆಸ್ ನ ಹಿರಿಯ ಮುಖಂಡರಲ್ಲ. ಇತರೆ ವಿಪಕ್ಷಗಳ ನಾಯಕರಲ್ಲ. ಬದಲಾಗಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ. ಬಿಜೆಪಿಯ ಪ್ರಮುಖ ಚುನಾವಣಾ ಘೋಷಣೆಯಾಗಿರುವ ‘ಕಾಂಗ್ರೆಸ್ ಮುಕ್ತ ಭಾರತ’ದ ವಿರುದ್ಧವಾಗಿ ಗಡ್ಕರಿ ನೀಡಿರುವ ಹೇಳಿಕೆ ರಾಜಕೀಯವಾಗಿ ಚರ್ಚೆಗೆ ಒಳಗಾಗಿದೆ.
ರಾಷ್ಟ್ರ ಮಟ್ಟದಲ್ಲಿ ಪ್ರಮುಖ ವಿಪಕ್ಷವಾಗಿರುವ ಕಾಂಗ್ರೆಸ್ ಈ ರೀತಿ ಸತತ ಸೋಲಿನಿಂದ ಕಂಗೆಟ್ಟರೆ ಪ್ರಾದೇಶಿಕ ಪಕ್ಷಗಳು ಆ ಸ್ಥಾನಗಳನ್ನು ತುಂಬಿಕೊಳ್ಳುತ್ತವೆ. ಇದು ಒಳ್ಳೆಯ ಸೂಚನೆ ಅಲ್ಲ, ಎಂದಿದ್ದಾರೆ.
“ಪ್ರಜಾಪ್ರಭುತ್ವ ಎಂಬುದು ಎರಡು ಚಕ್ರಗಳ ಸಹಾಯದಿಂದ ನಡೆಯುತ್ತದೆ. ಒಂದು ಆಡಳಿತ ಪಕ್ಷ ಮತ್ತೊಂದು ವಿಪಕ್ಷ. ಪ್ರಜಾಪ್ರಭುತ್ವದ ಉಳಿವಿಗಾಗಿ ಸದೃಢ ವಿಪಕ್ಷ ಇರುವುದು ಅನಿವಾರ್ಯ. ಹೀಗಾಗಿ, ನನ್ನ ಪ್ರಾಮಾಣಿಕ ಇಚ್ಚೆ ಏನೆಂದರೆ ಕಾಂಗ್ರೆಸ್ ಮತ್ತಷ್ಟು ಸದೃಢವಾಗಿ ಬಲಿಷ್ಟವಾಗಿ ಬೆಳೆಯಬೇಕು. ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನ ಪಡೆದರೆ ಅದು ಪ್ರಜಾಪ್ರಭುತ್ವದ ಒಳ್ಳೆಯ ಗುಣಲಕ್ಷಣವಲ್ಲ. ಹಾಗಾಗಿ, ಪ್ರಮುಖ ವಿಪಕ್ಷ ಸದೃಢವಾಗಿರಬೇಕು,” ಎಂದು ಗಡ್ಕರಿ ಹೇಳಿದ್ದಾರೆ.
ಇದಕ್ಕೆ ಜವಾಹರ್ ಲಾಲ್ ನೆಹರೂ ಉತ್ತಮ ಉದಾಹರಣೆ. ಅಟಲ್ ಬಿಹಾರಿ ವಾಜಪೇಯಿ ಲೋಕಸಭಾ ಚುನಾವಣೆ ಸೋತಾಗಲೂ, ನೆಹರೂ ವಾಜಪೇಯಿಗೆ ಗೌರವ ನೀಡಿದರು. ಕಾಂಗ್ರೆಸ್ ನಾಯಕರು ಕೂಡಾ ಸೋಲಿನಿಂದ ಕಂಗೆಡಬಾರದು. ಮತ್ತೆ ಪಕ್ಷವನ್ನು ಕಟ್ಟುವತ್ತ ದೃಷ್ಟಿ ಇಡಬೇಕು. ಕಾಂಗ್ರೆಸ್ ಸಿದ್ದಾಂತವನ್ನು ಬೆಂಬಲಿಸುವವರು ಪಕ್ಷದೊಂದಿಗೆ ಇರಬೇಕೇ ಹೊರತು, ಪಕ್ಷವನ್ನು ತ್ಯಜಿಸಬಾರದು. ಇಂದು ಸೋತರೆ ಮುಂದೆ ಒಂದು ದಿನ ಗೆಲುವು ಇದ್ದೇ ಇರುತ್ತದೆ, ಎಂದು ಗಡ್ಕರಿ ಕಾಂಗ್ರೆಸ್ ಗೆ ಕಿವಿಮಾತು ಹೇಳಿದ್ದಾರೆ.

“ಒಂದು ಕಾಲದ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸ್ಥಾನಗಳನ್ನು ಪಡೆದಿತ್ತು. ಪಕ್ಷದ ಕಾರ್ಯಕರ್ತರ, ನಾಯಕರ ಕಠಿಣ ಪರಿಶ್ರಮದಿಂದ ಪಕ್ಷವು ಮತ್ತೆ ಪುಟಿದೆದ್ದಿದೆ. ಕೆಲವು ಕ್ಷಣಗಳ ಹತಾಶೆಗಾಗಿ ಯಾರೂ ತಮ್ಮ ಸೈದ್ಧಾಂತಿಕ ನಿಲುವುಗಳನ್ನು ಮರೆಯಬಾರದು,” ಎಂದಿದ್ದಾರೆ.
ಗಡ್ಕರಿ ಹೇಳಿಕೆಗೆ ಸ್ವಾಗತ ಕೋರಿರುವ ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್, “ಗಡ್ಕರಿ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಅವರು ವಿಪಕ್ಷಗಳನ್ನು ಬಲಹೀನಗೊಳಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆಯ ಕುರಿತಾಗಿಯೂ ಮಾತನಾಡಬೇಕಿದೆ. ಪ್ರಧಾನಿ ಮೋದಿ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ವಿಪಕ್ಷಗಳ ವಿರುದ್ದ ಸಮರ ಸಾರುತ್ತಿದ್ದಾರೆ. ಅದರ ಕುರಿತಾಗಿಯೂ ತಮ್ಮ ವಿಚಾರಗಳನ್ನು ಸ್ಪಷ್ಟಪಡಿಸಬೇಕಿದೆ,” ಎಂದಿದ್ದಾರೆ.
ಭಾರತದ ಪ್ರಜಾಪ್ರಭುತ್ವನ್ನು ಸರ್ವಾಧಿಕಾರವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿ ಹಾಗೂ ವಿಪಕ್ಷಗಳನ್ನು ಬಲಹೀನಗೊಳಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಮೋದಿಯ ಮನಸ್ಥಿತಿಯ ಕುರಿತಾಗಿ ಕೂಡಾ ಗಡ್ಕರಿ ಮಾತನಾಡಿದರೆ ಅದು ದೇಶಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಹಿತವಾದ ಮಾತುಗಳಾಗಲು ಸಾಧ್ಯ, ಎಂದಿದ್ದಾರೆ.
“ಕಾಂಗ್ರೆಸ್ ದೇಶದ ಪ್ರಮುಖ ವಿರೋಧ ಪಕ್ಷ. ಜನರು ಕಾಂಗ್ರೆಸ್ ನ ಸಿದ್ದಾಂತ ಹಾಗೂ ಆಲೋಚನೆಗಳನ್ನು ಶೀಘ್ರದಲ್ಲಿ ಅರಿತುಕೊಳ್ಳಲಿದ್ದಾರೆ,” ಎಂದು ಸಚಿನ್ ಸಾವಂತ್ ಹೇಳಿದ್ದಾರೆ.