ನವದೆಹಲಿ:ಮಾ.30: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್ಗಳ ಮೇಲೆ ಹಿಂದಿಯಲ್ಲಿ ‘ದಹಿ’ ಎಂದು ಮುದ್ರಿಸುವಂತೆ ಹೊರಡಿಸಿದ್ದ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಇಂದು (ಗುರುವಾರ -ಮಾರ್ಚ್ 30) ಹಿಂಪಡೆದಿದೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಕಠೋರವಾಗಿ ಟೀಕೆ ಮಾಡಿದ ಬೆನ್ನಲ್ಲೇ ಎಫ್ಎಸ್ಎಸ್ಎಐಯ ಈ ನಿರ್ಧಾರ ಹೊರಬಿದ್ದಿದೆ. “ಹಿಂದಿ ಹೇರಿಕೆಯ ನಾಚಿಕೆಯಿಲ್ಲದ ಒತ್ತಾಯಗಳು ಎಷ್ಟರ ಮಟ್ಟಿಗೆ ಅಂದರೆ, ಮೊಸರು ಪ್ಯಾಕೆಟ್ ಮೇಲೂ ಹಿಂದಿಯಲ್ಲಿ ಬರೆಯುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಇದು ದೂರ ಮಾಡುತ್ತದೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣ ಭಾರತದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕು” ಎಂದು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದರು.
ತಮಿಳುನಾಡಿಗೂ ಮುನ್ನ ಕರ್ನಾಟಕಕ್ಕೆ ಮೊಸರಿನ ಪ್ಯಾಕೆಟ್ಗಳ ಮೇಲೆ ಹಿಂದಿಯಲ್ಲಿ ‘ದಹಿ’ ಎಂದು ಮುದ್ರಿಸುವಂತೆ ಆದೇಶ ಬಂದಿತ್ತು. ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಗೆ ಆದೇಶ ನೀಡಿತ್ತು. ಅದರಂತೆಯೇ ಕೆಎಂಎಫ್ ನಂದಿನಿ ಪ್ಯಾಕೆಟ್ನಲ್ಲಿ ‘ದಹಿ’ ಎಂದು ಮುದ್ರಿಸಿತ್ತು.
ಬಳಿಕ ಮೊಸರು ಪ್ಯಾಕೆಟ್ಗಳ ಲೇಬಲ್ಗಳನ್ನು ಇಂಗ್ಲಿಷ್ನಲ್ಲಿ ” Curd ” ಮತ್ತು ತಮಿಳಿನಲ್ಲಿ “ತೈರ್” ಎಂದು ಬರೆದಿರುವುದನ್ನು ಹಿಂದಿಯಲ್ಲಿ “ದಹಿ” ಎಂದು ಬದಲಾಯಿಸುವಂತೆ ತಮಿಳುನಾಡಿನ ಹಾಲು ಉತ್ಪಾದಕರ ಒಕ್ಕೂಟಕ್ಕೆ ನಿರ್ದೇಶನ ನೀಡಿತ್ತು.
‘ದಹಿ’ ಮುದ್ರಣ ಆದೇಶ ವಿರೋಧಿಸಿದ್ದ ಹೆಚ್ಡಿಕೆ
ಈ ಬಗ್ಗೆ ಟ್ವೀಟ್ ಮಾಡಿ ವಿರೋಧಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, “ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧವಿದೆ ಎಂದು ಗೊತ್ತಿದ್ದರೂ ನಂದಿನಿ ಪ್ರೋ ಬಯೊಟಿಕ್ ಮೊಸರು ಪಾಕೆಟ್ ಮೇಲೆ ಹಿಂದಿಯ ‘ದಹಿ’ ಎಂದು ಮುದ್ರಿಸಿರುವುದು,ಅದನ್ನು ಕಡ್ಡಾಯವಾಗಿ ಮುದ್ರಿಸುವಂತೆ ಭಾರತೀಯ ಆಹಾರ ಸುರಕ್ಷತೆ, ಗುಣಮಟ್ಟ ಪ್ರಾಧಿಕಾರವು ಕೆಎಂಎಫ್ ಗೆ ಆದೇಶ ನೀಡಿರುವುದು ತಪ್ಪು.ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿದ್ದರು.
“ಇಲ್ಲಿ ಹಿಂಬಾಗಿಲಿನಿಂದ ಅಲ್ಲ, ನೇರವಾಗಿಯೇ ಹಿಂದಿ ಹೇರಿಕೆ ಆಗಿದೆ. ಅದನ್ನು ಡಬಲ್ ಎಂಜಿನ್ ಬಿಜೆಪಿ ಸರಕಾರ ಹಾಗೂ ಅದರ ಕೀಲುಗೊಂಬೆ ಕೆಎಂಎಫ್ ಸದ್ದಿಲ್ಲದೆ ಒಪ್ಪಿಕೊಂಡಿವೆ. ಇದು ಕನ್ನಡ ವಿರೋಧಿ ಕೆಲಸ. ತಕ್ಷಣವೇ ದಹಿ ಪದ ಮುದ್ರಿಸುವುದನ್ನು ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದರು.
“ಯಶವಂತಪುರದಲ್ಲಿ ಪಂಚರತ್ನ ರಥಯಾತ್ರೆ ನಡೆಯುವ ವೇಳೆ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ‘ ನಂದಿನಿ ಉಳಿಸಿ ‘ ಎಂದು ಮೊಸರು, ಹಾಲಿನ ಹಾರ ಹಾಕಿ ನನ್ನ ಗಮನ ಸೆಳೆದಿದ್ದರು. ನಂದಿನಿಗೆ ಕುಣಿಕೆ ಬಿಗಿಯುವ ಯಾವುದೇ ದುಷ್ಕೃತ್ಯ ಸಹಿಸುವ ಪ್ರಶ್ನೆಯೇ ಇಲ್ಲ” ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಕಾರ್ಯಕರ್ತ ರೂಪೇಶ್ ರಾಜಣ್ಣ ಸೇರಿದಂತೆ ಅನೇಕ ಕನ್ನಡ ಪರ ಹೋರಾಟಗಾರರು ಎಫ್ಎಸ್ಎಸ್ಎಐ ಆದೇಶ ಹಾಗೂ ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದರು. ಇದೀಗ ಆದೇಶ ಹಿಂಪಡೆದ ಬೆನ್ನಲ್ಲೇ ಟ್ವೀಟ್ ಮಾಡಿರುವ ರೂಪೇಶ್ ರಾಜಣ್ಣ, “ಕೆಎಂಎಫ್ ಗೆ ಭೇಟಿ ಕೊಟ್ಟು ಹಿಂದಿಹೇರಿಕೆ ಬಯಲಿಗೆಳೆದು ನಿಂತ ನಮ್ಮ ಹೋರಾಟಕ್ಕೆ ಜಯವಾಗಿದೆ. ದಹಿ ಹಿಂದಿ ಪದ ಬಳಕೆ ಕಡ್ಡಾಯ ಆದೇಶ ವಾಪಸ್ ಪಡೆದ fssai. ನಾವು ಸುಮ್ಮನಿರದೆ ಧ್ವನಿ ಎತ್ತಿದರೆ ಎಲ್ಲವೂ ಸಾಧ್ಯ. ಹಿಂದಿಹೇರಿಕೆ ನಿಲ್ಲಲಿ. ಇದಕ್ಕೆ ಧ್ವನಿಯಾದ ಎಲ್ಲ ಕನ್ನಡಿಗರಿಗೂ ಧನ್ಯವಾದಗಳು” ಎಂದು ಹೇಳಿದ್ದಾರೆ.